ಸಾರಾಂಶ
ಸಮೀಪದ ಹೊದ್ದೂರು ಗ್ರಾಮದ ಶ್ರೀ ಶಾಸ್ತ ಈಶ್ವರ ದೇವಸ್ಥಾನದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ವಿಜೃಂಬಣೆಯಿಂದ ನಡೆಯಿತು. ಭಕ್ತರಿಗೆ ಉಪಹಾರ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮೀಪದ ಹೊದ್ದೂರು ಗ್ರಾಮದ ಶ್ರೀ ಶಾಸ್ತ ಈಶ್ವರ ದೇವಸ್ಥಾನದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಹಾಗೂ ವಿಷ್ಣುಮೂರ್ತಿ ಕಾಲ ವಿಜೃಂಭಣೆಯಿಂದ ಸಂಪನ್ನಗೊಂಡಿತು.ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ಶಾಸ್ತ ಈಶ್ವರ ದೇವರ ಬಲಿ ಗಣಪತಿ ಹೋಮ, ಅಲಂಕಾರ ಪೂಜೆ ಬೇಟೆ ಅಯ್ಯಪ್ಪ ಸನ್ನಿಧಿ ಅಭಿಷೇಕ ಪೂಜೆ ವಿಷ್ಣುಮೂರ್ತಿ ದೈವ ನೆಲೆ ಅಭಿಷೇಕ ಪೂಜೆ ಜರುಗಿತು. ಮಧ್ಯಾಹ್ನ ಶ್ರೀ ಶಾಸ್ತ ಈಶ್ವರ ದೇವರ ನೆನಪು ಬಲಿ ಬಳಿಕ ಮಹಾಪೂಜೆ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನೆರವೇರಿತು.
ಸಂಜೆ ಶ್ರೀ ಶಾಸ್ತ ಈಶ್ವರ ದೇವರ ಅವಭೃತ ಸ್ನಾನ ಜರಗಿತು. ವಿವಿಧ ನೃತ್ಯ ಸಂಪ್ರೊಕ್ಷಣೆಯೊಂದಿಗೆ ದೈವಿಕ ವಿಧಿ ವಿಧಾನಗಳು ಜರುಗಿದವು. ಬಳಿಕ ವಿಷ್ಣುಮೂರ್ತಿ ದೇವರ ತಾಯತ ತೆರೆ ಹಾಗೂ ಮೇಲೇರಿಗೆ ಅಗ್ನಿ ಸ್ಪರ್ಶ ನೆರವೇರಿಸಲಾಯಿತು . ಮಂಗಳವಾರ ವಿಷ್ಣುಮೂರ್ತಿ ದೈವದ ಕೋಲ ಜರಗಿ ಭಕ್ತರಿಗೆ ಉಪಹಾರ ಹಾಗು ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಪ್ರಧಾನ ಅರ್ಚಕ ಜಯರಾಮ ತಂತ್ರಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿಕೊಟ್ಟರು,ಮೂರು ವರ್ಷಗಳ ಹಿಂದೆ ದೇವಾಲಯ ಜೀರ್ಣೋದ್ಧಾರಗೊಂಡು ಪುನರ್ ಪ್ರತಿಷ್ಠಾಪನೆ ಗೊಳ್ಳುವುದರ ಮೂಲಕ ಐತಿಹಾಸಿಕ ಹಿನ್ನೆಲೆಯುಳ್ಳ ದೇವಾಲಯವಾಗಿ ರೂಪುಗೊಂಡಿದೆ.
ಈ ಸಂದರ್ಭ ಗ್ರಾಮದ ದೇವ ತಕ್ಕ ನೆರವಂಡ ಸಂಜಯ್ ಪೂಣಚ್ಚ, ದೇವಾಲಯ ಸಮಿತಿ ಅಧ್ಯಕ್ಷ ಕೂಡಂಡ ರಾಜೇಂದ್ರ ಅಯ್ಯಮ್ಮ, ದೇವಾಲಯ ಸಮಿತಿ ಸದಸ್ಯರು ಸೇರಿದಂತೆ ಭಕ್ತಾದಿಗಳು ಹಾಜರಿದ್ದರು.