ಸಾರಾಂಶ
ಸವಣೂರು: ಅಂತರಂಗ ಶುದ್ಧಿಕರಣಕ್ಕಾಗಿ ಪ್ರತಿಯೊಬ್ಬರೂ ಧಾರ್ಮಿಕ ಕೈಂಕರ್ಯಗಳಲ್ಲಿ ಪಾಲ್ಗೊಂಡು ಶಿವನಾಮಸ್ಮರಣೆಯಲ್ಲಿ ತೊಡಗುವುದು ಅವಶ್ಯವಾಗಿದೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ತಿಳಿಸಿದರು.ಮಹಾಶಿವರಾತ್ರಿ ಅಂಗವಾಗಿ ತಾಲೂಕಿನ ಹೂವಿನಶಿಗ್ಲಿ ಗ್ರಾಮದ ವಿರಕ್ತಮಠದ ಆವರಣದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಶಿವನಾಮಸ್ಮರಣೆಯೊಂದಿಗೆ ವಿವಿಧ ರೀತಿಯಲ್ಲಿ ಶಿವರಾತ್ರಿಯನ್ನು ಆಚರಿಸುವ ಸಂದರ್ಭದಲ್ಲಿ ಶ್ರೀಮಠದ ಅನಾಥ ಮಕ್ಕಳೊಂದಿಗೆ ಭಕ್ತರು ಹಬ್ಬವನ್ನು ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ. ಲಿಂ ನಿರಂಜನ ಸ್ವಾಮೀಜಿ ಅವರು ಶಿವರಾತ್ರಿ ದಿನ ಜನ್ಮತಳೆದಿದ್ದು ಇತಿಹಾಸವಾಗಿದೆ. ಅಂತಹ ಶ್ರೀಗಳ ಜನ್ಮದಿನದ ಅಂಗವಾಗಿ ನಾಮಜಪದೊಂದಿಗೆ ಜಾಗರಣೆ ಕೈಗೊಳ್ಳಲಾಗುತ್ತಿದೆ ಎಂದರು.ಚನ್ನವೀರ ಸ್ವಾಮೀಜಿ ಭಕ್ತರೊಂದಿಗೆ ಸಾಮೂಹಿಕ ಇಷ್ಟಲಿಂಗಾರ್ಚನೆ ಹಾಗೂ ಶ್ರೀಮಠದ ವಟುಗಳು ಸಕಲ ಮಂತ್ರ ವೇದಘೋಷ ಕೈಗೊಂಡರು. ವೈದ್ಯ ಡಾ. ಎನ್.ಬಿ. ನಾಗರಹಳ್ಳಿ, ಶಂಭುಲಿಂಗಯ್ಯ ಕಂಬಾಳಿಮಠ ಮಾತನಾಡಿದರು.
ಮಹಾ ಶಿವರಾತ್ರಿ ಆಚರಣೆ ನೇತೃತ್ವ ವಹಿಸಿದ್ದ ಶೇಖಣ್ಣ ಬೆಂಚಳ್ಳಿ ದಂಪತಿಯನ್ನು ಸನ್ಮಾನಿಸಲಾಯಿತು. ಬಸಪ್ಪ ಬಿಕ್ಕಣ್ಣನವರ, ಬಸಪ್ಪ ನಾಗಪ್ಪನವರ, ಬಸವರಾಜ ನಾಗಪ್ಪನವರ, ಶಿವಲಿಂಗಯ್ಯ ಕಂಬಾಳಿಮಠ, ಹಸನಸಾಬ್ ಹುಲ್ಲೂರ, ನಿಂಗಪ್ಪ ಹೆಬಸೂರ ಹಾಗೂ ಇತರರು ಪಾಲ್ಗೊಂಡಿದ್ದರು. ಶಿಕ್ಷಕರಾದ ಮಹಾದೇವ ಬಿಷ್ಠಣ್ಣವರ, ಪಿ.ಎಚ್. ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.ಸರ್ವರಿಗೂ ಸಮಬಾಳು, ಸಮಪಾಲು ಸಿಗಲಿ
ಸವಣೂರು: ನಾವು ಸ್ವತಂತ್ರರಾಗಿ, ಸಂವಿಧಾನ ಜಾರಿಗೆ ಬಂದು 75 ವರ್ಷ ಕಳೆದರೂ ಅಸ್ಪೃಶತಾ ನಿವಾರಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದರೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯವಿದೆ ಎಂದು ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯರು ಹಾಗೂ ಆಶಾಕಿರಣ ಸಂಸ್ಥೆ ಅಧ್ಯಕ್ಷ ಮುತ್ತುರಾಜ ಮಾದರ ತಿಳಿಸಿದರು.ಸಮಾಜ ಕಲ್ಯಾಣ ಇಲಾಖೆ ಹಾಗೂ ಆಶಾಕಿರಣ ರೂರಲ್ ಡೆವಲಪ್ಮೆಂಟ್ ಸೊಸೈಟಿ ಸಹಯೋಗದಲ್ಲಿ ತಾಲೂಕಿನ ಡಂಬರಮತ್ತೂರ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ 1955, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ(ದೌರ್ಜನ್ಯ) ಅಧಿನಿಯಮ 1989ರಡಿ ಅಸ್ಪೃಶತೆ ನಿರ್ಮೂಲನಾ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮಾಜದಲ್ಲಿ ಇನ್ನೂ ಮೇಲು- ಕೀಳು, ಶ್ರೀಮಂತ- ಬಡವ, ಬಲಿಷ್ಠರು- ದುರ್ಬಲರು ಎಂಬ ಜಾತಿ ತಾರತಮ್ಯ, ಶೋಷಣೆ ಜೀವಂತವಾಗಿರುವುದೇ ನಿದರ್ಶನವಾಗಿದೆ. ತಲೆತಲಾಂತರದಿಂದ ಈ ಅನಿಷ್ಟ ಪದ್ಧತಿಯನ್ನು ಮನುಷ್ಯರಿಂದ ಮನುಷ್ಯರ ಶೋಷಣೆಯನ್ನು ತಡಗಟ್ಟಬೇಕಾದ ಅನಿವಾರ್ಯತೆ ಇದೆ. ಸಮಾಜದಲ್ಲಿ ಎಲ್ಲರೂ ಸಮಾನತೆಯಿಂದ ಬದುಕಬೇಕು. ಸರ್ವರಿಗೂ ಸಮಬಾಳು ಸಮಪಾಲು ಸಿಗುವಂತಾಗಬೇಕು ಎಂದರು.ವಕೀಲ ಕೆ.ಎಸ್. ನೀರಲಗಿ ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿಯಂತ್ರಣ ಕಾಯ್ದೆ 1979 ಮತ್ತು ವಿವಿಧ ಕಾನೂನುಗಳ ಬಗ್ಗೆ ಉಪನ್ಯಾಸ ನೀಡಿದರು.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪ್ರಭಾರ ಜೀವನ ಪಂಮಾರ, ಪ್ರಮುಖರಾದ ಕೆ.ಬಿ. ಕಾಂಬಳೆ, ಶಶಿಧರ ಚರಂತಿಮಠ, ಮಹಾದೇವಪ್ಪ ಆಲದಕಟ್ಟಿ, ಸರೋಜ ಕುಂಬಾರ ಪಾಲ್ಗೊಂಡಿದ್ದರು. ಆನಂತರ, ಶ್ರೀ ಹರಿಕೃಷ್ಣ ಕಲಾತಂಡದವರಿಂದ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು.