ರೈತ ವಿರೋಧಿ ಪಕ್ಷಗಳನ್ನು ಸೋಲಿಸಬೇಕು

| Published : May 04 2024, 12:34 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ: ರೈತರ ಸಂಕಷ್ಟಕ್ಕೆ ಸ್ಪಂದಿಸುವುದಾಗಿ ಹೇಳಿದ್ದ ಪ್ರಧಾನಿ ಮೋದಿ ಕಳೆದ 10 ವರ್ಷಗಳಲ್ಲಿ ಕೃಷಿ ವಲಯವನ್ನು ಕಡೆಗಣಿಸಿದ್ದಾರೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಮಿತ್ರಪಕ್ಷಗಳನ್ನು ಸೋಲಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರೈತರ ಸಂಕಷ್ಟಕ್ಕೆ ಸ್ಪಂದಿಸುವುದಾಗಿ ಹೇಳಿದ್ದ ಪ್ರಧಾನಿ ಮೋದಿ ಕಳೆದ 10 ವರ್ಷಗಳಲ್ಲಿ ಕೃಷಿ ವಲಯವನ್ನು ಕಡೆಗಣಿಸಿದ್ದಾರೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಮಿತ್ರಪಕ್ಷಗಳನ್ನು ಸೋಲಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮನವಿ ಮಾಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಸರ್ಕಾರಗಳು ರೈತರನ್ನು ಹಾಗೂ ಕೃಷಿ ವಲಯವನ್ನು ಕಡೆಗಣಿಸುತ್ತ ಬಂದಿದೆ. ಸ್ವಾತಂತ್ರ್ಯದ ನಂತರ ಆಡಳಿತಕ್ಕೆ ಬಂದ ಎಲ್ಲ ಸರ್ಕಾರಗಳು ರೈತರನ್ನು ಹಾಗೂ ಕೃಷಿ ವಲಯವನ್ನು ನಿರ್ಲಕ್ಷ್ಯ ಮಾಡಿವೆ. ಅವುಗಳ ವಿರುದ್ಧ ನಾವು ಹೋರಾ‌ಟ ಮಾಡಿದ್ದೇವೆ. ಆದರೆ, ಹಿಂದಿನ ಸರ್ಕಾರಗಳಿಂತಲೂ ಹೆಚ್ಚು ತೊಂದರೆ ಮೋದಿ ಸರ್ಕಾರದಲ್ಲಿ ಅವಮಾನ ಮತ್ತು ತೊಂದರೆಯಾಗಿದೆ ಎಂದು ಆರೋಪಿಸಿದರು.

ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ತರಲಿಲ್ಲ. ಪಂಜಾಬ್, ಹರಿಯಾಣ ರಾಜ್ಯಗಳಲ್ಲಿ ಬಿಜೆಪಿ ಪ್ರಚಾರಕ್ಕೆ ಜನ ಬಿಡುತ್ತಿಲ್ಲ. ಇದು ಮೋದಿ ಆತಂಕಕ್ಕೆ ಕಾರಣವಾಗಿದೆ. ರೈತ ಸಂಕುಲ ಉಳಿಯಲು ಈ ಸರ್ಕಾರ ಕಿತ್ತೊಗೆಯಬೇಕಿದೆ ಎಂದು ಗುಡುಗಿದರು.

ಬಿಜೆಪಿ, ಮಿತ್ರಪಕ್ಷಗಳನ್ನು ಸೋಲಿಸಲು ರೈತರು ಯಾರಿಗೆ ಮತ ಹಾಕಬೇಕೆಂಬುವುದಕ್ಕೆ ಪ್ರತಿಕ್ರಿಯಿಸಿ, ರೈತರು ಪ್ರಬುದ್ಧರಿದ್ದು, ಅವರು ಮತ ಹಾಕಲಿದ್ದಾರೆ ಎಂದು ನುಣುಚಿಕೊಂಡರು. ಅಲ್ಲದೇ ಬಿಜೆಪಿ ಸರ್ಕಾರ ಅವಧಿಯಲ್ಲಿ ವಿದ್ಯಾನಿಧಿ ಯೋಜನೆ ಹಾಗೂ ಕೃಷಿ ಸಮ್ಮಾನ ಯೋಜನೆಗೆ ರಾಜ್ಯ ಸರ್ಕಾರ ₹4 ಸಾವಿರ ಹಣ ಕಡಿತ ಮಾಡಿರುವ ಸರ್ಕಾರದ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ರೈತ ವಿರೋಧಿ ಹಾಗೂ ಯೋಜನೆಗಳನ್ನು ಸ್ಥಗಿತಗೊಳಿಸಿರುವ ಸರ್ಕಾರದ ವಿರುದ್ಧವೂ ತಮ್ಮ ಹೋರಾಟ ಎಂದು ಪರೋಕ್ಷವಾಗಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಗೌರವ ಅಧ್ಯಕ್ಷ ಚಾಮರಸ್‌ ಮಾಲಿಪಾಟೀಲ ಮಾತನಾಡಿ, ಬಿಜೆಪಿ ಮತ್ತು ಮಿತ್ರಪಕ್ಷಗಳಿಗೆ ಮತ ನೀಡದಂತೆ ರೈತ ಸಂಘ ನಿರ್ಣಯ ತೆಗೆದುಕೊಂಡಿದೆ. ಕಳೆದ 10 ವರ್ಷಗಳಲ್ಲಿ ರೈತರು ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ಮೋದಿ ಕೇವಲ ಸುಳ್ಳು ಹೇಳುತ್ತಿದ್ದಾರೆ. ಅಧಿಕಾರಕ್ಕೆ ಬಂದ ಮೊದಲ ಸಭೆಯಲ್ಲಿ ರೈತ ಸಾಲಮನ್ನಾ ಮಾಡುತ್ತೇವೆ ಎಂದು ಉತ್ತರ ಪ್ರದೇಶದಲ್ಲಿ ಪ್ರಚಾರ ಸಭೆಯಲ್ಲಿ ಭರವಸೆ ನೀಡಿದ್ದರು. ಆದರೆ, ಸಾಲಮನ್ನಾ ಮಾಡಲಿಲ್ಲ ಎಂದರು.

ಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ರವಿಕಿರಣ ಪುಣಚ, ಜಿಲ್ಲಾಧ್ಯಕ್ಷ ಬಸವರಾಜ ಮೊಖಾಶಿ, ಚನ್ನಪ್ಪ ಗಣಾಚಾರಿ, ಭಾಗ್ಯಶ್ರೀ ಹಣಬರ, ಸುರೇಶ ಕರವಿನಕೊಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

----------

ಕೋಟ್‌.......

ಮಹದಾಯಿ ಯೋಜನೆಯಲ್ಲಿ ತೀರ್ಪು ಬಂದಿದೆ. ಹಿಂದೆ 3 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಆದರೆ, ಈವರೆಗೂ ಪರಿಸರ ಇಲಾಖೆಯಿಂದ ಅನುಮತಿ ಕೊಡಿಸಲು ಸಾಧ್ಯವಾಗುತ್ತಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ₹5 ಸಾವಿರ ಕೋಟಿ‌ ಮೀಸಲಿಟ್ಟಿದ್ದೇವೆಂದು ಹೇಳಿ ಕನಿಷ್ಠ ₹1 ಅನುದಾನ‌ ಬಿಡುಗಡೆ ಮಾಡಿಲ್ಲ. ಕೃಷ್ಣಾ, ಕಾವೇರಿ, ತುಂಗಭದ್ರಾ ನೀರಾವರಿ ಯೋಜನೆಗಳಲ್ಲಿ ಅನ್ಯಾಯ ಮಾಡಲಾಗಿದೆ.

-ಬಡಗಲಪುರ ನಾಗೇಂದ್ರ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ.

------------------------ಕೋಟ್‌.....

ಪ್ರವಾಹ, ಬರಗಾಲದಲ್ಲಿ ಬಾರದ ಪ್ರಧಾನಿ ಮೋದಿ ಚುನಾವಣೆಗೋಸ್ಕರ ಬರುತ್ತಿದ್ದಾರೆ. ಇವರು ಮಾಡಿರುವ ದ್ರೋಹಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಎಲ್ಲಿಯೂ ಮೋದಿ ಗಾಳಿ, ಹೆಸರಿಲ್ಲ. ಅವರ ಪ್ಲಾನ್ ಉಲ್ಟಾ ಆಗಿದೆ. ರಾಜಕೀಯವಾಗಿ ಜಾಗೃತಿಗೊಳಿಸಿ ಇವರನ್ನು ಅಧಿಕಾರದಿಂದ ಕೆಳಗಿಸುತ್ತೇವೆ.

-ಚಾಮರಸ್‌ ಮಾಲಿಪಾಟೀಲ, ರೈತ ಸಂಘದ ಗೌರವ ಅಧ್ಯಕ್ಷ.