ಸಾರಾಂಶ
ಕನ್ನಡಪ್ರಭವಾರ್ತೆ ಮಂಡ್ಯ
ಸ್ನೇಹ ಬೇರೆ, ಕಾನೂನು ಬೇರೆ. ಯಾರೇ ತಪ್ಪು ಮಾಡಿದರೂ ಶಿಕ್ಷೆ ಆಗಲೇಬೇಕು. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸ್ನೇಹಿತರೂ ಆದ ದರ್ಶನ್ ಪುಟ್ಟಣ್ಣಯ್ಯ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ನಾನು ಮತ್ತು ದರ್ಶನ್ ಒಳ್ಳೆಯ ಸ್ನೇಹಿತರು. ಅದರಲ್ಲಿ ಎರಡು ಮಾತಿಲ್ಲ. ನಮ್ಮ ಸ್ನೇಹ ಬೇರೆ. ಕಾನೂನು ಬೇರೆ. ಕಾನೂನಿನ ಮುಂದೆ ನಾವು ಏನು ಹೇಳುವುದಕ್ಕೂ ಆಗೋಲ್ಲ ಎಂದು ಹೇಳಿದರು.
ದರ್ಶನ್ ಬಳ್ಳಾರಿ ಜೈಲು ಸೇರಿದ ಬಳಿಕ ಮತ್ತೆ ಅವರನ್ನು ಭೇಟಿ ಮಾಡಲು ನಾನು ಹೋಗಿಲ್ಲ. ಅಂತಿಮ ಜಡ್ಜ್ಮೆಂಟ್ ಬಂದ ಮೇಲೆ ನಾನು ಮಾತನಾಡುತ್ತೇನೆ ಎಂದರು.ದರ್ಶನ್ಗೆ ಪರಪ್ಪನ ಅಗ್ರಹಾರ ಜೈಲಲ್ಲಿ ರಾಜಾತಿಥ್ಯ ವಿಚಾರವಾಗಿ ಕೇಳಿದಾಗ, ನಾನು ಯಾವತ್ತೂ ಜೈಲಿನ ಒಳಗೆ ಹೋಗಿರಲಿಲ್ಲ. ಮೊದಲ ಬಾರಿಗೆ ದರ್ಶನ್ ನೋಡಲು ಹೋಗಿದ್ದೆ. ನಮ್ಮನ್ನು ಒಳಗೆ ಕರೆದುಕೊಂಡೂ ಹೋಗಲಿಲ್ಲ. ಹೊರಗಿನಿಂದಲೇ ಮಾತನಾಡಿದೆವು ಎಂದ ಅವರು, ಜೈಲಿನಲ್ಲಿ ಎಲ್ಲ ಖೈದಿಗಳನ್ನೂ ಒಂದೇ ರೀತಿ ನೋಡಬೇಕು. ದುಡ್ಡು, ಪವರ್ ಇರುವವರನ್ನು ಪ್ರತ್ಯೇಕವಾಗಿ ಉಪಚರಿಸುವುದು, ಬೇರೆ ಖೈದಿಗಳನ್ನು ಬೇರೆ ರೀತಿ ನೋಡೋದು ಸರಿಯಲ್ಲ. ತಪ್ಪು ಮಾಡಿರುವವನು ಮನುಷ್ಯ ಅಷ್ಟೇ. ದರ್ಶನ್ ಕೊಲೆ ಪ್ರಕರಣದ ಕುರಿತಾಗಿ ನನ್ನ ಬಳಿ ಏನು ಮಾತನಾಡಲಿಲ್ಲ. ಜನರಲ್ ಆಗಿ ಮಾತನಾಡಿದ್ದೇವೆ ಅಷ್ಟೇ ಎಂದು ತಿಳಿಸಿದರು.