ಸಾರಾಂಶ
ಅಕ್ಷರ ಪದಗಳಿಗೆ ಜೀವ ತುಂಬಿ ನಿರೂಪಿಸುತ್ತಿದ್ದ ಅಪರ್ಣಾ ಮಧುರ ಸ್ವಭಾವದ ವ್ಯಕ್ತಿತ್ವದಿಂದಲೇ ಜನಮನ್ನಣೆ ಪಡೆದಿದ್ದರು ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ತಿಳಿಸಿದರು.
ಮಧುಗಿರಿ: ಅಕ್ಷರ ಪದಗಳಿಗೆ ಜೀವ ತುಂಬಿ ನಿರೂಪಿಸುತ್ತಿದ್ದ ಅಪರ್ಣಾ ಮಧುರ ಸ್ವಭಾವದ ವ್ಯಕ್ತಿತ್ವದಿಂದಲೇ ಜನಮನ್ನಣೆ ಪಡೆದಿದ್ದರು ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕಲಾರಂಗದ ವತಿಯಿಂದ ಆಯೋಜಿಸಿದ್ದ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ನಟಿಸಿ ನಿರೂಪಕಿಯಾಗಿದ್ದ ಅಪರ್ಣಾಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು. ಇವರು ಬಣ್ಣದ ಲೋಕದಲ್ಲಿ ನಟಿಸಿ ಕನ್ನಡಾಭಿಮಾನಿಗಳ ಹೃದಯ ಗೆದ್ದಿದ್ದರು. ಕಂಠ ಸಿರಿಯ ಕನ್ನಡತಿಯಾಗಿ ಮೆಟ್ರೋದಲ್ಲಿ ಅವರ ಧ್ವನಿ ಇಂದಿಗೂ ಕೇಳಿ ಬರುತ್ತಿದ್ದು, ನೂರೂಂದು ನೆನಪುಗಳನ್ನು ನಮಗೆ ಉಳಿಸಿ ಕಡೆಯ ನಿಲ್ದಾಣ ಸೇರಿ ಮಸಣದ ಹೂವಾಗಿದ್ದಾರೆ ಎಂದರು.ಕಲಾರಂಗದ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಮಾತನಾಡಿ, ಕನ್ನಡದ ಬೆಳವಣಿಗೆಗೆ ಕಲಾವಿದರಿಂದಲೂ ಸಾಧ್ಯ ಎಂಬುದನ್ನು ತಮ್ಮ ಅದ್ಭುತ ಕಂಠದಿಂದ ತೋರಿಸಿಕೊಟ್ಟಿದ್ದಾರೆ ಎಂದರು.
ಕಲಾರಂಗದ ಕಾರ್ಯದರ್ಶಿ ಟಿ.ಲಕ್ಷ್ಮೀನರಸಯ್ಯ ಮಾತನಾಡಿ, ಕನ್ನಡವನ್ನು ವ್ಯಾಕರಣ ಬದ್ಧವಾಗಿ ಉಚ್ಚರಿಸಿ ಕನ್ನಡತೆಯ ಶುದ್ಧತೆಯನ್ನು ನಿರೂಪಣೆಯ ಮೂಲಕ ಕನ್ನಡಿಗರಿಗೆ ಪರಿಚಯಿಸಿದ ಕೀರ್ತಿ ಅಪರ್ಣ ಅವರಿಗೆ ಸಲ್ಲುತ್ತದೆ ಎಂದರು.ಪದಾಧಿಕಾರಿಗಳಾದ ಪ.ವಿ.ಸುಬ್ರಹ್ಮಣ್ಯ, ಮಧುಗಿರಿ ಸಿದ್ದರಾಜು,ನರಸಿಂಹಮೂರ್ತಿ ,ಅಬ್ದಲ್ ರಜಾಕ್ ಇದ್ದರು.