ಕನ್ನಡಪ್ರಭ ವಾರ್ತೆ ಹೊನ್ನಾವರ

ರಾಜ್ಯದ ವಿದ್ಯುತ್ ವಲಯವನ್ನು ಖಾಸಗೀಕರಣ ಮಾಡುವುದನ್ನು ವಿರೋಧಿಸಿ ತಾಲೂಕಿನ ವಿವಿಧ ಸಂಘಟನೆ ವತಿಯಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ರೈತ ಸಂಘಟನೆ, ಹೊನ್ನಾವರ ಉಳಿಸಿ-ಬೆಳೆಸಿ, ಹೆಸ್ಕಾಂ ನಿವೃತ್ತ ನೌಕರರು, ವಿದ್ಯುತ್ ಗುತ್ತಿಗೆದಾರರು, ಕರವೇ ರಕ್ಷಣಾ ವೇದಿಕೆ, ಯುವ ಒಕ್ಕೂಟ, ದೇವರಾಜ ಅರಸು ವೇದಿಕೆ, ಆಟೋ ಯೂನಿಯನ್ ಸೇರಿದಂತೆ ವಿವಿಧ ಸಂಘಟಬೆಯ ನೂರಾರು ಕಾರ್ಯಕರ್ತರು ಶರಾವತಿ ವೃತ್ತದ ಬಳಿ ಜಮಾವಣೆಗೊಂಡು ಖಾಸಗೀಕರಣದಿಂದ ಉಂಟಾಗುವ ಅನಾಹುತದ ಕುರಿತು ವಿವರಿಸಿ, ಮೆರವಣೆಗೆ ಮೂಲಕ ತಹಶೀಲ್ದಾರ ಕಚೇರಿಯವರೆಗೆ ಆಗಮಿಸಿ ಮನವಿ ಸಲ್ಲಿಸಿದರು.

ಸಾರ್ವಜನಿಕ ಹಿತದೃಷ್ಟಿಯಿಂದ, ಟಾಟಾ ಪವರ್ ಕಂಪನಿ ಸೇರಿದಂತೆ ಯಾವುದೇ ಖಾಸಗಿ ಕಂಪನಿಗಳಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಸ್ವಾಮ್ಯದ ಕಂಪನಿಯಾದ ಕರ್ನಾಟಕ ವಿದ್ಯುತ್ ಪ್ರಸರಣ ಕಂಪನಿ ಲಿಮಿಟೆಡ್, ಪ್ರಸ್ತುತ ರಾಜ್ಯದಲ್ಲಿ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದು, ರೈತರ ಕೃಷಿ ಭೂಮಿಗೆ ಉಚಿತ ವಿದ್ಯುತ್ ಸೇರಿದಂತೆ ಗೃಹಜ್ಯೋತಿಯ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಉಚಿತ ವಿದ್ಯುತ್ ಒದಗಿಸುವ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿದೆ. ಜೊತೆಗೆ ತನ್ನ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ವಿದ್ಯುತ್ ಪೂರೈಸುತ್ತಿದೆ. ಒಂದು ವೇಳೆ ವಿದ್ಯುತ ವಿತರಣಾ ವ್ಯವಸ್ಥೆಯನ್ನು ಖಾಸಗೀಕರಣ ಮೂಲಕ ವಿದ್ಯುತ ವಿತರಣಾ ವ್ಯವಸ್ಥೆಯನ್ನು ಟಾಟಾ ಸಮೂಹದ ಕಂಪನಿಗೆ ವಹಿಸುವುದರಿಂದ ದರ ಏರಿಕೆ ಜೊತೆ, ಭವಿಷ್ಯದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದ ಕಾರ್ಯಗಳು ಬಂದ್ ಆಗಲಿದೆ. ಹೆಸ್ಕಾಂ ವಿಭಾಗದಲ್ಲಿ ದುಡಿಯುತ್ತಿರುವ ಸಾವಿರಾರು ಸಿಬ್ಬಂದಿಗಳ ಹಿತಕ್ಕೂ ಹಾಗೂ ಸಾರ್ವಜನಿಕ ಹಿತಕ್ಕೂ ಮಾರಕವಾಗಲಿದ್ದು ಅಂತಹ ಯಾವುದೇ ಕಾರ್ಯಗಳನ್ನು ಖಾಸಗಿಯವರಿಗೆ ವಹಿಸಬಾರದು ಎಂದು ಒತ್ತಾಯಿಸಿದರು.ಈ ಸಂದರ್ಭ ಹೊನ್ನಾವರ ಉಳಿಸಿ-ಬೆಳೆಸಿ ಸಂಘಟನೆಯ ಅಧ್ಯಕ್ಷ ಜಿ.ಎನ್‌. ಗೌಡ, ದೇವರಾಜ ಅರಸು ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ, ಯುವ ಒಕ್ಕೂಟದ ಅಧ್ಯಕ್ಷ ವಿನಾಯಕ ನಾಯ್ಕ ಮೂಡ್ಕಣಿ, ಭಾರತೀಯ ಕಿಸಾನ್ ಸಂಘದ ಪ್ರಮುಖ ಎಂ.ಆರ್. ಹೆಗಡೆ, ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ನಸರುಲ್ಲಾ, ಆಟೋ ಯೂನಿಯನ್‌ ಅಧ್ಯಕ್ಷ ಶಿವರಾಜ ಮೇಸ್ತ, ವಿದ್ಯುತ್ ಗುತ್ತಿಗೆದಾರರಾದ ಹೆನ್ರಿ ಲೀಮಾ, ಎಸ್.ಎಂ. ನಾಯ್ಕ, ಎಸ್.ಕೆ. ಶೆಟ್ಟಿ, ಹರಿಶ್ಚಂದ್ರ ನಾಯ್ಕ, ಕೇಶವ ನಾಯ್ಕ ಬಳ್ಕೂರು, ನ್ಯಾಯವಾದಿ ವಿಕ್ರಂ ನಾಯ್ಕ, ಕರವೇ ಅಧ್ಯಕ್ಷ ಮಂಜುನಾಥ ಗೌಡ, ರೈತ ಸಂಘದ ಪ್ರಮುಖರಾದ ಗಣಪತಿ ಹೆಗಡೆ ಮತ್ತಿತರರಿದ್ದರು.