ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರ ಮತ್ತು ಮೂಡಿಗೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಾಗುತ್ತಿರುವ ಆನೆ ಹಾಗೂ ಕಾಡುಕೋಣ ದಾಳಿಯಿಂದ ಹಲವು ಸಾವು ನೋವು, ಬೆಳೆ ನಷ್ಟವಾಗಿದೆ. ಆನೆ ದಾಳಿ, ಮಾನವ ಜೀವಹಾನಿ ಕುರಿತು ತುರ್ತಾಗಿ ಕೇಂದ್ರ ಸರ್ಕಾರ ಮದ್ಯಪ್ರವೇಶಿಸಿ ಜನರ ರಕ್ಷಣೆಗೆ ಮುಂದಾಗಬೇಕು ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ್ ಎಸ್.ಶೆಟ್ಟಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.ಕಾಡುಪ್ರಾಣಿಗಳ ಹಾವಳಿ ಪರಿಣಾಮ ರೈತರು ತಮ್ಮ ಕಾಫಿ, ಅಡಕೆ ಹಾಗೂ ಭತ್ತದ ತೋಟಗಳಿಗೆ ಜೀವಭಯದಲ್ಲಿ ತೆರಳ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತ ಕಾರ್ಮಿಕರು ಕೆಲಸಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಸಾವಿರಾರು ಎಕರೆ ಬೆಳೆ ಹಾನಿಯಾಗಿದ್ದು ಗ್ರಾಮೀಣ ಆರ್ಥಿಕತೆ ಕುಸಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲೂ ಸರ್ಕಾರದ ನಿರ್ಲಕ್ಷ್ಯದಿಂದ ಸಮಸ್ಯೆ ಮತ್ತೆ ಮತ್ತೆ ಉಂಟಾಗುತ್ತಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಹಾಗೂ ಕೇಸು ದಾಖಲಿಸಿ ಭಯದ ವಾತಾವರಣ ನಿರ್ಮಿಸಿದ್ದಾರೆ. ಮಲೆನಾಡು ರೈತ ಹಿತರಕ್ಷಣಾ ಸಮಿತಿಯ ಸುಮಾರು 9 ಜನರ ಮೇಲೆ ವಿವಿಧ ಕೇಸುಗಳನ್ನು ದಾಖಲಿಸಿರುವುದು ದುರಾದೃಷ್ಟಕರ ಎಂದರು.

ಈ ಹಿನ್ನೆಲೆಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಎಚ್‌ಡಿಕೆ ಅವರು, ಗಂಭೀರ ಸಮಸ್ಯೆ ಬಗ್ಗೆ ತಕ್ಷಣ ಕೇಂದ್ರ ಮಟ್ಟದಲ್ಲಿ ವಿಚಾರ ಮಾಡಬೇಕು. ಕೇಂದ್ರ ಸರ್ಕಾರದಿಂದ ರೈಲ್ವೆ ಬ್ಯಾರಿಕೇಡ್ ಮಾದರಿ ಆನೆ ಹಾವಳಿ ತಡೆಗೆ ಶಾಶ್ವತ ಕ್ರಮ, ಆನೆ ಕಾರಿಡಾರ್ ಅಭಿವೃದ್ಧಿ ಯೋಜನೆಗೆ ವಿಶೇಷ ಪ್ಯಾಕೇಜ್, ಮಾನವ ಜೀವಹಾನಿಗೆ ನೀಡುತ್ತಿರುವ ₹20 ಲಕ್ಷ ಪರಿಹಾರ ಕನಿಷ್ಠ ₹50 ಲಕ್ಷಕ್ಕೆ ಏರಿಸುವಂತೆ ಕ್ರಮ, ಬೆಳೆ ನಷ್ಟಕ್ಕೆ ಪ್ರತ್ಯೇಕ ಕೇಂದ್ರದ ಪರಿಹಾರ ನಿಧಿ, ಅರಣ್ಯ–ಕೃಷಿ ಗಡಿಯಲ್ಲಿನ ತಂತ್ರಜ್ಞಾನ ಆಧಾರಿತ ಎಚ್ಚರಿಕೆ ವ್ಯವಸ್ಥೆ ಜಾರಿಗೆ ಕ್ರಮ ಕೈಗೊಳ್ಳಬೇಕು.

ಚಿಕ್ಕಮಗಳೂರು ಜಿಲ್ಲೆಯ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಕೇಂದ್ರ ಸರ್ಕಾರ ತುರ್ತು ಸಭೆ ಕರೆದು ರಾಜ್ಯ ಸರ್ಕಾರ ದೊಂದಿಗೆ ಸಮನ್ವಯ ಸಾಧಿಸಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.೨೪ಬಿಹೆಚ್‌ಆರ್ ೫: ಸುಧಾಕರ್ ಎಸ್.ಶೆಟ್ಟಿ.