ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಾರಿಗಳ ಎಫ್‍ಸಿ ಮತ್ತು ಆರ್‌ಸಿ ಶುಲ್ಕವನ್ನು ಏರಿಸಿದ್ದು, ಈ ಆದೇಶವನ್ನು ಕೂಡಲೇ ವಾಪಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಲಾರಿ ಮಾಲೀಕರ ಸಂಘದಿಂದ ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಈ ಹಿಂದೆ ಲಾರಿಗಳ ಎಫ್‍ಸಿ ಮತ್ತು ಆರ್‌ಸಿಗಳ ಶುಲ್ಕ 1400 ರು. ಇತ್ತು. ಅದನ್ನು ಈಗ 28 ಸಾವಿರ ರು.ಗಳಿಗೆ ಏರಿಸಿದ್ದಾರೆ. ಇದರಿಂದ ಲಾರಿ ಮಾಲೀಕರಿಗೆ ತೀವ್ರ ಸಂಕಷ್ಟ ತಂದಿದೆ. ಇಷ್ಟು ಮೊತ್ತವನ್ನು ಭರಿಸಲು ಲಾರಿ ಮಾಲೀಕರಿಂದ ಸಾಧ್ಯವಿಲ್ಲ ಎಂದು ಮನವಿದಾರರು ತಿಳಿಸಿದರು.

ಈಗಾಗಲೇ ಲಾರಿ ಮಾಲೀಕರು ಪ್ರತಿ ಮೂರು ತಿಂಗಳಿಗೊಮ್ಮೆ ರೋಡ್ ಟ್ಯಾಕ್ಸ್, ಇನ್ಸೂರೆನ್ಸ್, ಲಾರಿ ಪರ್ಮಿಟ್, ಟೋಲ್ ಪಾವತಿ, ಜೊತೆಗೆ ವಾಹನದ ನಿರ್ವಹಣೆಗಳನ್ನು ಮಾಡುತ್ತಾ ಬಂದಿದ್ದು, ಹಲವು ಸಮಸ್ಯೆಗಳನ್ನು ಮಾಲೀಕರು ಎದುರಿಸುತ್ತಿದ್ದಾರೆ. ಸಂಪಾದನೆಗಿಂತ ಖರ್ಚೇ ಹೆಚ್ಚಾಗುತ್ತಿದೆ. ಈಗ ಗಾಯದ ಮೇಲೆ ಬರೆ ಎಂಬಂತೆ ಮತ್ತೆ ಶುಲ್ಕವನ್ನು ಹೆಚ್ಚಿಸಲಾಗಿದೆ. ಸುಮಾರು 300 ಲಾರಿಗಳು ಕಾರ್ಯವನ್ನು ನಿರ್ವಹಿಸದೇ ನಿಲ್ಲಿಸಿ ಬಿಟ್ಟಿದ್ದಾರೆ. ಇದರಿಂದ ಸ್ವಂತ ಲಾರಿ ಹೊಂದಿರುವ ಡ್ರೈವರ್‌ಗಳೂ ಆಗಿರುವ ಲಾರಿ ಮಾಲೀಕರಿಗೆ ಸಂಕಷ್ಟ ಎದುರಾಗಿದೆ. ಆದ್ದರಿಂದ ಏರಿಕೆ ಮಾಡಿರುವ 28 ಸಾವಿರ ರು. ಶುಲ್ಕವನ್ನು 1400 ರು.ಗೆ ಇಳಿಸಬೇಕು. ಈಗಿನ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಅಲ್ಲದೇ, ಇತರೆ ರಾಜ್ಯಗಳಲ್ಲಿ ಕಾಲಾವಧಿ ಮುಗಿದ ಟೋಲ್‌ಗಳನ್ನು ತೆಗೆದು ಹಾಕಲಾಗಿದೆ. ಕರ್ನಾಟಕ ರಾಜ್ಯದಲ್ಲೂ ಕೂಡ ಇಂತಹ ಟೋಲ್‌ಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು.


ಈ ಸಂದರ್ಭದಲ್ಲಿ ಲಾರಿ ಮಾಲೀಕರ ಸಂಘದ ಗೌರವಾಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ತಲ್ಕೀನ್ ಅಹಮದ್, ಅಧ್ಯಕ್ಷ ಕೆ.ಎನ್. ಭೋಜರಾಜ್, ಕಾರ್ಯಾಧ್ಯಕ್ಷ ವೈ.ಎಚ್. ನಾಗರಾಜ್, ಉಪಾಧ್ಯಕ್ಷ ಯಶವಂತಕುಮಾರ್, ಕಾರ್ಯದರ್ಶಿ ಎಂ.ಡಿ. ಸಮೀರ್ ಸೇರಿದಂತೆ ಹಲವರಿದ್ದರು.