ಭದ್ರಾ ಯೋಜನೆಗೆ ಹಣ ಬಿಡುಗಡೆಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ

| Published : Feb 03 2024, 01:46 AM IST

ಸಾರಾಂಶ

ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರನ್ನು ತಾಲೂಕು ಕೃಷಿಕ ಸಮಾಜದ ನಿಯೋಗ ಭೇಟಿ ಮಾಡಿ ಭದ್ರಾ ಯೋಜನೆಗೆ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಹಣವನ್ನು ಬಿಡುಗಡೆ ಮಾಡಲು ಮನವಿ ಸಲ್ಲಿಸಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ಜಿಲ್ಲೆಯ ಪ್ರಮುಖ ಭದ್ರಾ ಮೇಲ್ದಂಡೆ ಕಾಮಗಾರಿ ಯೋಜನೆಗೆ ಕೇಂದ್ರ ಸರ್ಕಾರದಿಂದ ಬಜೆಟ್ ನಲ್ಲಿ ಘೋಷಿಸಿರುವ 5300 ಕೋಟಿ ಹಣವನ್ನು ಬಿಡುಗಡೆ ಮಾಡು ವಂತೆ ಹಾಗೂ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರವರನ್ನು ಕೇಂದ್ರ ಸಚಿವ ಎ‌. ನಾರಾಯಣಸ್ವಾಮಿ ನೇತೃತ್ವದಲ್ಲಿ ತಾಲೂಕು ಕೃಷಿಕ ಸಮಾಜದ ನಿಯೋಗದ ಸದಸ್ಯರು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ನಿಯೋಗದ ಸದಸ್ಯರು ಯೋಜನೆಯ ಸದುಪಯೋಗ ಹಾಗೂ ಹೆಚ್ಚಿನ ನೀರಿನ ಬವಣೆ ಅನುಭವಿಸುತ್ತಿರುವ ವಾಸ್ತವ ಸಂಗತಿಯ ಬಗ್ಗೆ ಕೇಂದ್ರ ಸಚಿವರಿಗೆ ಎಳೆ ಎಳೆಯಾಗಿ ಮನವರಿಕೆ ಮಾಡಿಕೊಟ್ಟಿದ್ದು, ಯೋಜನೆ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.ಇದೇ ವೇಳೆ ಭಾರತದ ಭೂಪಟವನ್ನು ಹೋಲುವ ತಾಲೂಕಿನ ವಾಣಿ ವಿಲಾಸ ಜಲಾಶಯ ನಕ್ಷೆಯ ಫೊಟೋವನ್ನು ಕೇಂದ್ರ ಸಚಿವರಿಗೆ ಕಾಣಿಕೆ ನೀಡಿ ಗೌರವಿಸಿದ್ದಾರೆ.ಜೊತೆಗೆ ಕೃಷಿಕ ಸಮಾಜದ ಅಧ್ಯಕ್ಷ ಹೆಚ್.ಆರ್.ತಿಮ್ಮಯ್ಯರವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಕೂಡ ಬರೆದಿದ್ದು, ಪತ್ರದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯು ಕರ್ನಾಟಕ ರಾಜ್ಯದ ಮಧ್ಯ ಪ್ರದೇಶದಲ್ಲಿ ಜಾರಿಯಲ್ಲಿರುವ ಪ್ರಮುಖ ಲಿಫ್ಟ್ ನೀರಾವರಿ ಯೋಜನೆಯಾಗಿದೆ. ಇದು ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ ಮೊದಲ ಹಂತದಲ್ಲಿ 17.40 ಟಿಎಂಸಿ ನೀರನ್ನು ಎತ್ತುವ ಮತ್ತು ಭದ್ರಾ ಜಲಾಶಯದಿಂದ ಎರಡನೇ ಹಂತದಲ್ಲಿ 29.90 ಟಿಎಂಸಿ ನೀರನ್ನು ಎತ್ತುವ ಮೂಲಕ ಬರ ಪೀಡಿತ ಜಿಲ್ಲೆಗಳಾದ ಚಿಕ್ಕಮಗಳೂರಿನ ಸೂಕ್ಷ್ಮ ನೀರಾವರಿ ಮೂಲಕ 2,25,515 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲು ಯೋಜಿಸಲಾಗಿದೆ. ಚಿತ್ರದುರ್ಗ, ತುಮ ಕೂರು ಮತ್ತು ದಾವಣಗೆರೆ ಜಿಲ್ಲೆಗಳ ಬರಪೀಡಿತ ತಾಲೂಕುಗಳಲ್ಲಿ ಅಂತರ್ಜಲ ಮಟ್ಟವನ್ನು ಮರುಪೂರಣಗೊಳಿಸುವುದು ಮತ್ತು 367 ಸಂಖ್ಯೆಯ ಟ್ಯಾಂಕ್‌ಗಳಿಗೆ ಕುಡಿಯುವ ನೀರನ್ನು ಒದಗಿಸುವುದು ಯೋಜನೆಯ ಇತರ ಉದ್ದೇಶವಾಗಿದೆ.

ಕರ್ನಾಟಕ ಸರ್ಕಾರವು ರೂ.21,473.67 ಕೋಟಿ ಮೊತ್ತದ ಮೇಲ್ಮಟ್ಟದ ಭದ್ರಾ ಯೋಜನೆಯ ಪರಿಷ್ಕೃತ ಡಿಪಿಆರ್ ಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಯಿತು. ಭದ್ರಾ ಮೇಲ್ದಂಡೆ ಯೋಜನೆಯ ತಾಂತ್ರಿಕ-ಆರ್ಥಿಕ ಕಾರ್ಯ ಸಾಧ್ಯತೆಯನ್ನು ಭಾರತ ಸರ್ಕಾರದ ಜಲ ಶಕ್ತಿ ಸಚಿವಾಲಯದ ಡಿಓ ಡಬ್ಲ್ಯೂಆರ್ ಆರ್‌ಡಿ ಮತ್ತು ಜಿಆರ್‌ನ ಸಲಹಾ ಸಮಿತಿಯು ಅಂಗೀಕರಿಸಿದೆ. ಇದಲ್ಲದೆ ಭದ್ರಾ ಯೋಜನೆಯ ಪ್ರಸ್ತಾವನೆ ಹೂಡಿಕೆಯ ಕ್ಲಿಯರೆನ್ಸ್ ಸಮಿತಿಯು 16,125.48 ಕೋಟಿ ರು.ಗಳನ್ನು ಸ್ವೀಕರಿಸಿದೆ. ಭದ್ರಾ ಮೇಲ್ದಂಡೆ ಯೋಜನೆಯು ರಾಷ್ಟ್ರೀಯ ಯೋಜನಾ ವ್ಯಾಪ್ತಿಗೆ ಸೇರ್ಪಡೆಗೊಳ್ಳಲು ಅರ್ಹವಾಗಿರುವುದರಿಂದ, ಉನ್ನತ ಮಟ್ಟದ ಚುಕ್ಕಾಣಿ ಸಮಿತಿಯು ಮೇಲ್ಮಟ್ಟದ ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಲ್ಲಿ ಸೇರಿಸುವ ಪ್ರಸ್ತಾವನೆಯನ್ನು ಶಿಫಾರಸು ಮಾಡಿದೆ. ಪಬ್ಲಿಕ್ ಇನ್ವೆಸ್ಟ್ಮೆಂಟ್ ಬೋರ್ಡ್ (ಪಿಐಬಿ) ಸಹ ಅಪ್ಪರ್ ಭದ್ರಾ ಯೋಜನೆಯನ್ನು ಸೇರಿಸಲು ಶಿಫಾರಸು ಮಾಡಿದೆ. ಮುಂದುವರಿದು, ಇಷ್ಟು ವರ್ಷಗಳ ಹೋರಾಟ, ಪ್ರತಿಭಟನೆಗಳ ನಂತರ ರಾಜ್ಯ ಸರ್ಕಾರ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ನಮ್ಮ ಬದುಕಿನಲ್ಲಿ ಭರವಸೆಯ ಕಿರಣವನ್ನು ಮೂಡಿಸಿದೆ. ಈ ಪ್ರದೇಶದಲ್ಲಿ ಅಲ್ಪ ಪ್ರಮಾಣದ ಮಳೆಯ ಕಾರಣ ರೈತರು ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿದ್ದಾರೆ.

ರೈತರ ಹಿತಾಸಕ್ತಿ ಕಾಪಾಡಲು ಯೋಜನೆಯನ್ನು ತ್ವರಿತವಾಗಿ ಕಾರ್ಯಗತಗೊಳಿಸಿ ಪೂರ್ಣಗೊಳಿಸುವುದು ಬಹಳ ಅವಶ್ಯಕವಾಗಿದೆ. ಯೋಜನೆಯ ಆರಂಭಿಕ ಅನುಷ್ಠಾನ ಮತ್ತು ಪೂರ್ಣ ಗೊಳಿಸುವಿಕೆಯ ದೃಷ್ಟಿಯಿಂದ ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಮತ್ತು ಪಿಎಂ ಕೆ ಎಸ್ ವೈ, ಎಐ ಬಿಪಿ ಯೋಜನೆಯ ಮೂಲಕ ಕೇಂದ್ರ ಹಣಕಾಸು ನೆರವನ್ನು ಶೀಘ್ರವಾಗಿ ಬಿಡುಗಡೆ ಮಾಡಲು ನಾವು ವಿನಂತಿಸುತ್ತೇವೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಬಬ್ಬೂರು ಸುರೇಶ್, ಎಂಸಿ. ಧ್ರುವ ಕುಮಾರ್, ರಾಜೇಂದ್ರ ಮುಂತಾದವರು ಉಪಸ್ಥಿತರಿದ್ದರು.