ಚನ್ನಪಟ್ಟಣ: ಕೆಂಗಲ್ ಬಳಿ ಕೆಂಗಲ್ ಹನುಮಂತಯ್ಯನವರು ಕಟ್ಟಿಸಿರುವ ಅತಿಥಿ ಗೃಹ ಶಿಥಿಲಾವಸ್ಥೆ ತಲುಪಿದ್ದು ಅದರ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಅವರಿಗೆ ಸ್ನೇಹ ಕೂಟ ಸಂಸ್ಥೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಸಾಹಿತಿ ಪ್ರೊ.ಎಂ.ಶಿವನಂಜಯ್ಯ ಮಾತನಾಡಿ, ನಾಡು ಕಂಡ ಧೀಮಂತ ರಾಜಕಾರಣಿ, ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರು ನಮ್ಮ ನಾಡಿಗೆ ನೀಡಿರುವ ಕೊಡುಗೆಗಳು ಅಪಾರ. ವಿಧಾನಸೌಧ ನಿರ್ಮಾಣ, ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನ, ಕೇಂದ್ರ ಸರ್ಕಾರದಲ್ಲಿ ರೈಲ್ವೆ ಮಂತ್ರಿಯಾಗಿ ಸೇವೆ, ಕೇಂದ್ರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಸೇವೆ, ಕರ್ನಾಟಕ ಏಕೀಕರಣದ ರೂವಾರಿ ಇತ್ಯಾದಿ ಅವಿಸ್ಮರಣೀಯ ಕೊಡುಗೆಗಳನ್ನು ನೀಡಿದ್ದಾರೆ ಎಂದರು.

ಕೆಂಗಲ್ ಹನುಂತಯ್ಯ ಕೆಂಗಲ್ ಬಳಿಯ ಚಂದ್ರಗಿರಿದೊಡ್ಡಿಯ ಗುಡ್ಡದ ಮೇಲೆ ಒಂದು ವಿಶ್ರಾಂತಿ ಗೃಹವನ್ನು ನಿರ್ಮಿಸಿದ್ದು, ವಿಶ್ರಾಂತಿ ವೇಳೆ ಅಲ್ಲಿಯೇ ತಂಗಿ ರಾಜಕೀಯ ಚಟುವಟಿಕೆಗಳು ನಡೆಸುತ್ತಿದ್ದರು. ಇಲ್ಲಿಗೆ ಈ ದೇಶದ ಮಾಜಿ ಪ್ರಧಾನಿ ಮಂತ್ರಿ ದಿ. ಇಂದಿರಾಗಾಂಧಿಯವರು ಸಹ ಒಮ್ಮೆ ಭೇಟಿ ನೀಡಿದ್ದರು. ಇಂತಹ ಸ್ಥಳ ಈಗ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಈ ಅತಿಥಿ ಗೃಹಕ್ಕೆ ಹೋಗಲು ದಾರಿಯು ಇಲ್ಲದಂತಾಗಿದೆ ಎಂದರು.

ಸ್ನೇಹ ಕೂಟ ಸಂಸ್ಥೆಯ ಅಧ್ಯಕ್ಷ ಎಚ್.ಪಿ.ನಂಜೇಗೌಡ ಮಾತನಾಡಿ, ಅತಿಥಿ ಗೃಹದ ಸುತ್ತ ಗಿಡಗಂಟಿ ಬೆಳೆದು ನಿರ್ವಹಣೆ ಇಲ್ಲದೆ ಹಾಳಾಗಿದೆ. ಪುಂಡರು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದು, ಕಿಟಕಿ, ಬಾಗಿಲು ಕಿತ್ತುಕೊಂಡು ಹೋಗಿದ್ದು ಮೇಲ್ಛಾವಣಿ ಮತ್ತು ಗೋಡೆಗಳು ಸಹ ಶಿಥಿಲವಾಗಿವೆ. ತಮ್ಮ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಈ ಸ್ಥಳಕ್ಕೆ ಭೇಟಿ ಕೊಟ್ಟು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈ ಬಜೆಟ್‌ನಲ್ಲಿ ಅನುದಾನ ಬಿಡಗುಡೆ ಮಾಡಿಸಿ ಪುನರುಜ್ಜೀವನಗೊಳಿಸಬೇಕು ಎಂದರು.

ಜಿಲ್ಲಾ ಲೇಖಕರ ವೇದಿಕೆ ಪ್ರಧಾನ ಕಾರ್ಯದರ್ಶಿ ಎಸ್.ರುದ್ರೇಶ್ವರ, ಸ್ನೇಹ ಕೂಟ ಸಂಸ್ಥೆ ಪದಾಧಿಕಾರಿಗಳಾದ ಸಿ.ರಮೇಶ್ ಹೊಸದೊಡ್ಡಿ, ಚನ್ನವೀರೇಗೌಡ, ಕೆ.ಬಿ.ಯಕ್ಷರಾಜು ಇತರರಿದ್ದರು.


ಪೊಟೋ೧೪ಸಿಪಿಟಿ೨: ಕೆಂಗಲ್ ಬಳಿ ಕೆಂಗಲ್ ಹನುಮಂತಯ್ಯ ಕಟ್ಟಿಸಿರುವ ಅತಿಥಿ ಗೃಹ ಶಿ ದುರಸ್ತಿಗೆ ಶಾಸಕ ಸಿ.ಪಿ.ಯೋಗೇಶ್ವರ್ ಅವರಿಗೆ ಸ್ನೇಹ ಕೂಟ ಸಂಸ್ಥೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.