ಪ್ರತಿ ವರ್ಷ ಸುಮಾರು ೫೦ರಿಂದ ೬೦ ದಿನ ಪಟ್ಟಣದ ಜನನಿಬೀಡ ಹಳೆ ಮಾರುಕಟ್ಟೆಯ ರಸ್ತೆ ಬದಿಗಳಲ್ಲಿ ವ್ಯಾಪಾರಿಗಳು ವಹಿವಾಟು ಮಾಡುತ್ತಾ ಬಂದಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ

ಪಟ್ಟಣದ ಎಪಿಎಂಸಿ ಆವರಣದಲ್ಲಿ ಜಾಗ ಇದ್ದರೂ ಸಹ ಎಂಜಿ ರಸ್ತೆಯಲ್ಲೇ ವ್ಯಾಪಾರ ಮಾಡಿ ಸರ್ಕಾರಕ್ಕೆ ಆದಾಯ ಬರದಂತೆ, ರೈತರಿಂದ ಶೇ.೧೦ಕ್ಕಿಂತ ಹೆಚ್ಚು ಕಮಿಷನ್ ಪಡೆಯುತ್ತಿರುವ ವ್ಯಾಪಾರಿಗಳು ಈ ಕೂಡಲೇ ಎಪಿಎಂಸಿ ಆವರಣದಲ್ಲಿ ತಮ್ಮ ವ್ಯಾಪಾರ ನಡೆಸಲು ಸೂಚಿಸುವಂತೆ ಕೋಲಾರ ಜನಪರ ವೇದಿಕೆಯ ನಾಗರಾಜ್ ಗೂಳಿಗಾನಹಳ್ಳಿ ಒತ್ತಾಯಿಸಿದರು.

ಅವರು ಎಡೀಸಿ ಮಂಗಳಾರಿಗೆ ಮನವಿ ಮಾಡಿ ಮಾತನಾಡಿ, ಎಂಜಿ ರಸ್ತೆಯಲ್ಲಿ ಪ್ರತಿದಿನ ಸುಮಾರು ೧೨ ರಿಂದ ೧೫ ಟನ್ ಅವರೆಕಾಯಿ ಮಾರಾಟ ಮಾಡಲಾಗುತ್ತದೆ. ಪ್ರತಿದಿನ ಸುಮಾರು ೨೫ ಲಕ್ಷ ರುಪಾಯಿ ವಹಿವಾಟು ನಡೆಯುತ್ತಿದೆ. ಇದರಿಂದ ರೈತರಿಗೆ ಬೆಲೆಯಲ್ಲಿ ನಷ್ಟ, ಎಪಿಎಂಸಿ ಕಾಯ್ದೆಯ ಉಲ್ಲಂಘನೆಯಾಗುತ್ತಿದೆ, ಸರ್ಕಾರಕ್ಕೆ ಸೆಸ್ ನಷ್ಟ, ತೆರಿಗೆ ನಷ್ಟ ಸರಿಪಡಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿ ವರ್ಷ ಸುಮಾರು ೫೦ರಿಂದ ೬೦ ದಿನ ಪಟ್ಟಣದ ಜನನಿಬೀಡ ಹಳೆ ಮಾರುಕಟ್ಟೆಯ ರಸ್ತೆ ಬದಿಗಳಲ್ಲಿ ವ್ಯಾಪಾರಿಗಳು ವಹಿವಾಟು ಮಾಡುತ್ತಾ ಬಂದಿದ್ದಾರೆ. ತಾಲೂಕಿನ ರೈತರು, ಸಂಘ- ಸಂಸ್ಥೆಗಳು, ಪಟ್ಟಣದ ಸಾರ್ವಜನಿಕರು ಕಳೆದ ೪- ೫ ವರ್ಷದಿಂದಲೂ ತಹಸೀಲ್ದಾರ್, ಪುರಸಭೆ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದರೂ ಸಹ ಇದುವರೆಗೂ ಕ್ರಮಕೈಗೊಂಡಿಲ್ಲ.

ಮುಂದಿನ ದಿನಗಳಲ್ಲಿ ಅವರೆಕಾಯಿ ಮಾರಾಟ ಎಪಿಎಂಸಿ ಆವರಣದಲ್ಲಿ ನಡೆಸುವಂತೆ ಸಂಬಂಧಿಸಿದ ವ್ಯಾಪಾರಿಗಳಿಗೆ, ಎಪಿಎಂಸಿ ಅಧಿಕಾರಿಗಳು, ತಹಸೀಲ್ದಾರ್ , ಪುರಸಭೆ ಮುಖ್ಯಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಮೂಲಕ ಆದೇಶ ಹೊರಡಿಸಬೇಕೆಂದು ಮನವಿ ಮಾಡಿದರು.

ರಮೇಶ್ ಬಾಬು ಶ್ರೀನಿವಾಸಪುರ, ವೆಂಕಟಾಚಲಪತಿ, ಕಾರಹಳ್ಳಿ ಅಜಯ್ , ಪಾತೂರು ಮಂಜುನಾಥ್ ರೆಡ್ಡಿ, ಚಂದ್ರಶೇಖರ್ ಇದ್ದರು.