ಕುಡತಿನಿ ಭೂ ಸಂತ್ರಸ್ತರರ ಹೋರಾಟವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕಡೆಗಣಿಸಿರುವುದು ವಿಪರ್ಯಾಸವಾಗಿದೆ. ನ್ಯಾಯ ದೊರಕುವ ವರೆಗೂ ಹೋರಾಟ ಅತಿಮುಖ್ಯವಾಗಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಕುರುಗೋಡು: ಕುಡತಿನಿ ಭೂ ಸಂತ್ರಸ್ತರು ಕಳೆದ ಎರಡ್ಮೂರು ವರ್ಷದಿಂದ ನಿರಂತರವಾಗಿ ಧರಣಿ ಸತ್ಯಾಗ್ರಹ ನಡೆಸುತ್ತ ಬಂದಿದ್ದು, ಈ ಹೋರಾಟವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕಡೆಗಣಿಸಿರುವುದು ವಿಪರ್ಯಾಸವಾಗಿದೆ. ನ್ಯಾಯ ದೊರಕುವ ವರೆಗೂ ಹೋರಾಟ ಅತಿಮುಖ್ಯವಾಗಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಬಳ್ಳಾರಿಯಲ್ಲಿ ಬುಧವಾರ ನಡೆದ ಬಿಜೆಪಿಯ ಎಸ್ಐಆರ್ ಮತದಾರರ ಪಟ್ಟಿ ಪರಿಷ್ಕರಣೆಯ ವಿಶೇಷ ಸಭೆಯಲ್ಲಿ ಪಾಲ್ಗೊಂಡ ನಂತರ ಕುಡತಿನಿ ಮಾರ್ಗವಾಗಿ ಹೊಸಪೇಟೆಗೆ ತೆರಳುವ ಮಾರ್ಗ ಮಧ್ಯದ ಹೋರಾಟಗಾರರ ಮನವಿ ಸ್ವೀಕರಿಸಿ ಮಾತನಾಡಿದರು.ಕುಡತಿನಿ ಭಾಗದ ರೈತರಿಗೆ ಸಾಕಷ್ಟು ಅನ್ಯಾಯವಾಗುತ್ತಿದ್ದರೂ ಸರ್ಕಾರ ಮಾತ್ರ ಕಿವುಡರಂತೆ ವರ್ತಿಸುತ್ತಿದೆ. ಈಗಾಗಲೇ ರೈತರು ಸೇರಿದಂತೆ ಜನ ಸಾಮಾನ್ಯರು ಸರ್ಕಾರದ ವಿರುದ್ಧ ಆಕ್ರೋಶಿತರಾಗಿದ್ದಾರೆ. ಇಲ್ಲಿನ ರೈತರಿಗೆ ನ್ಯಾಯ ಕೊಡಿಸುವುದು ನಮ್ಮ ಧ್ಯೇಯವಾಗಿದೆ. ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಿ, ರೈತರ ಬೇಡಿಕೆ ಈಡೇರಿಸಲಾಗುವುದು ಎಂದರು.
ನಂತರ ಭೂ ಸಂತ್ರಸ್ತ ಹೋರಾಟಗಾರರು ಮಾತನಾಡಿ, ಕಳೆದ ಹನ್ನೇರಡು ವರ್ಷದ ಹಿಂದೆ ಕುಡತಿನಿ ಪ್ರದೇಶದಲ್ಲಿ ಮೂರು ಬೃಹತ್ ಕೈಗಾರಿಕೆಗಳ ಸ್ಥಾಪನೆಯ ಉದ್ದೇಶದಿಂದ ಸರ್ಕಾರ ಕೆಐಎಡಿಬಿ ಮೂಲಕ ಹನ್ನೇರಡೂವರೆ ಸಾವಿರ ಎಕರೆ ಜಮೀನು ಬಲವಂತವಾಗಿ ಸ್ವಾಧೀನಪಡಿಸಿಕೊಂಡಿದೆ. ಅಂದಿನಿಂದ ಇಲ್ಲಿ ತನಕ ನಿರಂತರವಾಗಿ ಧರಣಿ ಸತ್ಯಾಗ್ರಹ ಮಾಡಿಕೊಂಡು ಬರಲಾಗಿದೆ. ಸರ್ಕಾರ ಇದ್ದರೂ ಇಲ್ಲದಂತಾಗಿದೆ. ನಮಗೆ ನ್ಯಾಯ ಕೊಡಿಸಿ ಎಂದರು.ಈ ಸಂದರ್ಭದಲ್ಲಿ ಹಡಪದ ರಮೇಶ, ಹೋಳಿಗೆ ಸಿದ್ದಪ್ಪ ವಿ. ತಿಮ್ಮಪ್ಪ, ರುದ್ರಪ್ಪ, ಯಲ್ಲಪ್ಪ, ನಾಗಪ್ಪ, ವಿ. ಸುಕೇಂದ್ರ. ಎನ್. ಹನುಮಂತಪ್ಪ, ಆಟೋ ಸ್ವಾಮಿ, ಬಡಿಗೇರ ಹುಚ್ಚಪ್ಪ, ಪಂಪಾಪತಿ, ಗಂಗಮ್ಮ, ಮಲ್ಲಮ್ಮ, ಸುಂಕಮ್ಮ ಸೇರಿದಂತೆ ಭೂ ಸಂತ್ರಸ್ತರ ಹೋರಾಟಗಾರರು ಇದ್ದರು.