ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಶವ ಹುಡುಕಲು ಮನವಿ

| Published : Oct 19 2024, 12:23 AM IST

ಸಾರಾಂಶ

ಈಗಾಗಲೇ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಜರ್ಝರಿತವಾಗಿರುವ ಜಗನ್ನಾಥ ನಾಯ್ಕ ಮತ್ತು ಲೋಕೇಶ ನಾಯ್ಕ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ಮಾನವೀಯ ನೆರವು ಒದಗಿಸಬೇಕು.

ಕುಮಟಾ: ಶಿರೂರು ಗುಡ್ಡ ಕುಸಿತದ ಘಟನೆಯಲ್ಲಿ ನಾಪತ್ತೆಯಾಗಿರುವ ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಶವವನ್ನು ಹೊರತೆಗೆಯಬೇಕು ಎಂದು ಇಲ್ಲಿನ ಯುವ ನಾಮಧಾರಿ ಸಂಘಟನೆಯ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿಯನ್ನು ಶುಕ್ರವಾರ ಗ್ರೇಡ್ ೨ ತಹಸೀಲ್ದಾರ್ ಸತೀಶ ಗೌಡ ಅವರ ಮೂಲಕ ಸಲ್ಲಿಸಲಾಯಿತು.

ಒಟ್ಟೂ ೧೧ ಜನರ ಪ್ರಾಣಕ್ಕೆ ಎರವಾದ ಗುಡ್ಡ ಕುಸಿತದ ದುರಂತದಲ್ಲಿ ಪ್ರಾಣ ಕಳೆದುಕೊಂಡವರಲ್ಲಿ ಒಬ್ಬರಾದ ಕೇರಳದ ಲಾರಿ ಚಾಲಕನ ಶವ ಘಟನೆ ನಡೆದು ೭೦ ದಿನಗಳ ನಂತರ ಹೊರತೆಗೆಯಲಾಗಿದೆ. ಇದೇ ರೀತಿ ಪರಿಶ್ರಮ ಹಾಗೂ ಸಮಯಪ್ರಜ್ಞೆಯಿಂದ ಸ್ಥಳೀಯರಾದ ಜಗನ್ನಾಥ ಮತ್ತು ಲೋಕೇಶ ಅವರ ಶವವನ್ನೂ ಹೊರತೆಗೆಯುವ ಕೆಲಸವಾಗಬೇಕು. ಈಗಾಗಲೇ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಜರ್ಝರಿತವಾಗಿರುವ ಜಗನ್ನಾಥ ನಾಯ್ಕ ಮತ್ತು ಲೋಕೆಶ ನಾಯ್ಕ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ಮಾನವೀಯ ನೆರವು ಒದಗಿಸಬೇಕು. ಘಟನೆಗೆ ಕಾರಣವಾದ ಅವೈಜ್ಞಾನಿಕ ಕಾಮಗಾರಿ ನಡೆಸಿದ ಐಆರ್‌ಬಿ ಮೇಲೆ ತನಿಖೆ ನಡೆಸಬೇಕು. ಈವರೆಗೆ ಸರ್ಕಾರ ಮಾಡಿರುವ ನಿರ್ಲಕ್ಷ್ಯದಿಂದಾಗಿ ಬಾಧಿತ ಕುಟುಂಬಗಳು ಹಾಗೂ ಸಮುದಾಯದ ಜನರಲ್ಲಿ ಅತೀವ ಬೇಸರ ಹಾಗೂ ಅಸಮಾಧಾನ ಉಂಟಾಗಿದೆ.

ಜಗನ್ನಾಥ ನಾಯ್ಕ ಮತ್ತು ಲೋಕೇಶ ನಾಯ್ಕ ಅವರ ಶವಗಳನ್ನು ಹೊರತೆಗೆದು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಸರ್ಕಾರದ ತಕ್ಷಣದ ಕ್ರಮದ ಅಗತ್ಯವಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಅಧ್ಯಕ್ಷ ರಾಜೇಶ ನಾಯ್ಕ, ದಿವಾಕರ ನಾಯ್ಕ, ರಾಜು ನಾಯ್ಕ ಮಾಸ್ತಿಹಳ್ಳ, ಅಣ್ಣಪ್ಪ ನಾಯ್ಕ, ಸಂತೋಷ ನಾಯ್ಕ ದೇವರಹಕ್ಕಲ, ದತ್ತು ನಾಯ್ಕ ಹೆಗಡೆ, ಯೋಗೀಶ ನಾಯ್ಕ, ಸಚಿನ ನಾಯ್ಕ, ಪ್ರಮೋದ ನಾಯ್ಕ, ಸಂದೇಶ ನಾಯ್ಕ, ವೈಭವ ನಾಯ್ಕ ಇತರರು ಇದ್ದರು. ಕರಡಿ ದಾಳಿ: ವೃದ್ಧನಿಗೆ ಗಾಯ

ಜೋಯಿಡಾ: ಜೋಯಿಡಾ ಪಕ್ಕದ ಕಾರವಾರ ತಾಲೂಕಿನ ಲಾಂಡೆ ಗ್ರಾಮದ ವೃದ್ಧನ ಮೇಲೆ ಶುಕ್ರವಾರ ಕರಡಿ ದಾಳಿ ಮಾಡಿದ್ದು, ಘಟನೆಯಲ್ಲಿ ವೃದ್ಧ ಗಂಭೀರವಾಗಿ ಗಾಯಗೊಂಡಿದ್ದಾನೆ.ಅರ್ಜುನ(60) ಎಂಬವರೇ ಕರಡಿ ದಾಳಿಯಿಂದ ವ್ಯಕ್ತಿ. ಅರ್ಜುನ ಅವರು ಜಮೀನಿಗೆ ತೆರಳುತ್ತಿದ್ದಾಗ ಕರಡಿ ದಾಳಿ ಮಾಡಿದೆ. ವೃದ್ಧನ ಕಣ್ಣು, ಮುಖ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಕರಡಿ ಪರಚಿ ಗಾಯಗೊಳಿಸಿದೆ. ಕೂಡಲೇ ಸ್ಥಳೀಯರು ಆಗಮಿಸಿ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದ್ಯೊಯಲಾಗಿದೆ ಎಂದು ತಿಳಿದುಬಂದಿದೆ.