ಸಾರಾಂಶ
ವಿಜಯನಗರ ಜಿಲ್ಲಾ ಕೇಂದ್ರವಾದ ಹೊಸಪೇಟೆಯಲ್ಲಿ ದೇವರಾಜ ಅರಸು ಭವನ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ವಿಜಯನಗರ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಮುಖಂಡರು ಶಾಸಕ ಎಚ್.ಆರ್. ಗವಿಯಪ್ಪಗೆ ಬುಧವಾರ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಹೊಸಪೇಟೆ
ವಿಜಯನಗರ ಜಿಲ್ಲಾ ಕೇಂದ್ರವಾದ ಹೊಸಪೇಟೆಯಲ್ಲಿ ದೇವರಾಜ ಅರಸು ಭವನ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ವಿಜಯನಗರ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಮುಖಂಡರು ಶಾಸಕ ಎಚ್.ಆರ್. ಗವಿಯಪ್ಪಗೆ ಬುಧವಾರ ಮನವಿ ಸಲ್ಲಿಸಿದರು. ಒಕ್ಕೂಟದ ಅಧ್ಯಕ್ಷ ವೈ.ಯಮುನೇಶ್ ಮಾತನಾಡಿ, ಕರ್ನಾಟಕ ಕಂಡ ಶ್ರೇಷ್ಠ ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸು ಅವರು ಕ್ರಾಂತಿಕಾರಿ ಭೂ ಸುಧಾರಣಾ ಯೋಜನೆ, ಹಿಂದುಳಿದ ಜಾತಿಗಳಿಗೆ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಜಾರಿಗೆ ತಂದಿದ್ದಾರೆ. ಹಿಂದಿನ ಮೈಸೂರು ರಾಜ್ಯಕ್ಕೆ ಕರ್ನಾಟಕ ನಾಮಕರಣ ಎಂದು ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಹೀಗಾಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ದೇವರಾಜ ಅರಸು ಭವನ ನಿರ್ಮಿಸಲಾಗಿದ್ದು, ಅದರಂತೆ ಹೊಸಪೇಟೆಯಲ್ಲಿ ಅವರ ಹೆಸರಿನಲ್ಲಿ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸೌಲಭ್ಯ ವಂಚಿತ ಹಿಂದುಳಿದ ಸಮುದಾಯಗಳಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಅರಸು ಭವನದಲ್ಲಿ ತರಬೇತಿ ಶಿಬಿರಗಳು, ವಿಚಾರ ಸಂಕಿರಣ ಏರ್ಪಡಿಸಲು ಅನುಕೂಲವಾಗುತ್ತದೆ. ಓ.ಬಿ.ಸಿ. ಸಮುದಾಯಗಳ ವಿದ್ಯಾರ್ಥಿಗಳ ಉನ್ನತ ಶಿಕ್ಷಣ, ಉದ್ಯೋಗ ಸೇರ್ಪಡೆಗೆ ಕಾರ್ಯಾಗಾರ ಸಂಘಟಿಸಲು ಅವರಿಗೆ ಮಾರ್ಗದರ್ಶನ ಮಾಡಲು ಅರಸು ಭವನ ಅವಶ್ಯವಾಗಿದೆ. ಹಿಂದುಳಿದ ಜಾತಿಗಳು ತಮ್ಮ ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ ಪ್ರಗತಿಯ ಬಗ್ಗೆ ಚರ್ಚಿಸಲು ಸಭೆ, ಸಮಾರಂಭ ನಡೆಸಲು ಅರಸು ಭವನ ಅಗತ್ಯವಾಗಿದೆ ಎಂದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆಂಜನೇಯಲು ಮಾತನಾಡಿ, ಭವನ ನಿರ್ಮಾಣದಿಂದ ಹಿಂದುಳಿದ ವರ್ಗಗಳ ಸಚಿವಾಲಯದ ತಾಲೂಕು ಹಾಗೂ ಜಿಲ್ಲಾ ಮಟ್ಟದ ಕಚೇರಿಗಳು ಒಂದೇ ಕಡೆಗೆ ಸ್ಥಾಪನೆ ಆಗುವುದರಿಂದ ಈ ಸಮುದಾಯಗಳ ನಾಗರಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅಲ್ಲದೇ ಹಿಂದುಳಿದ ಜಾತಿಗಳು ರಿಯಾಯಿತಿ ದರದಲ್ಲಿ ತಮ್ಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಭವನ ನಿರ್ಮಾಣ ಅಗತ್ಯವಾಗಿದೆ ಎಂದರು.ಮುಖಂಡರಾದ ಗೋಪಾಲ್ರಾವ್, ರವಿಶಂಕರ್ ದೇವರಮನಿ, ಪಂಪಣ್ಣ, ವಿರುಪಾಕ್ಷಿ.ಬಿ., ಐಲಿ ಸಿದ್ದಣ್ಣ, ಶಾಂತಪ್ಪ, ಎಂ.ರಾಜಶೇಖರ್, ಗೌಡಪ್ಪನವರ್, ಶ್ರೀನಿವಾಸ್, ನಾಗೇಂದ್ರಪ್ಪ, ತಿಪ್ಪೇಸ್ವಾಮಿ, ವೀರೇಶ್ ಜಿನಗಾರ್, ಬಸವರಾಜ, ರಾಮಲಿ, ಶಂಕ್ರಪ್ಪ, ಶಿವಕುಮಾರ್, ಉಮಾಮಹೇಶ್ವರ್, ರಾಜಕುಮಾರ್ ಮತ್ತಿತರರಿದ್ದರು.