ಮಾಗಡಿ: ಜಿಲ್ಲಾದ್ಯಂತ ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವವಹಿಸುತ್ತಿರುವ ನೌಕರರಿಗೆ ನಿವೇಶನ ನೀಡಲು ಕ್ರಮ ವಹಿಸುತ್ತಿದ್ದು, ಆ ನಿಟ್ಟಿನಲ್ಲಿ ಗ್ರಾಮ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೂ ನಿವೇಶನ ನೀಡುವಂತೆ ಮುಖ್ಯಮಂತ್ರಿಗಳು ಮತ್ತು ವಸತಿ ಸಚಿವರ ಬಳಿ ಮನವಿ ಮಾಡಲಾಗುವುದು ಎಂದು ಗ್ರಾಮ ಸಹಾಯಕರ ಸಂಘದ ಜಿಲ್ಲಾಧ್ಯಕ್ಷ ನಿಂಗರಾಜು ಹೇಳಿದರು.

ತಾಲೂಕಿನ ಸಾವನದುರ್ಗದ ಪರಿವೀಕ್ಷಣಾ ಮಂದಿರದಲ್ಲಿ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮ ಸಹಾಯಕರಿಗೆ ಕರ್ತವ್ಯದ ವೇಳೆ ಎದುರಾಗುವ ಗಂಭೀರ ಸಮಸ್ಯೆಗಳನ್ನು ತಾಲೂಕು ಮತ್ತು ಜಿಲ್ಲಾ ಸಂಘದ ಪದಾಧಿಕಾರಿಗಳ ಗಮನಕ್ಕೆ ತಂದು ಸಂಘಟಿತರಾಗಿ ಕಾನೂನಿನಡಿ ಬಗೆಹರಿಸಿಕೊಡಲು ಮತ್ತು ವಿನಾಕಾರಣ ಗ್ರಾಮ ಸಹಾಯಕರನ್ನು ಗುರಿಯಾಗಿಸಿಕೊಂಡು ತೊಂದರೆ ಕೊಡುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಲು ಸಹಕರಿಸುವ ಜತೆಗೆ ನಿಮಗೂ ರಕ್ಷಣೆಯೂ ಸಿಗುತ್ತದೆ ಎಂದು ಹೇಳಿದರು.ಕಸಬಾ ಹೋಬಳಿ ಕಂದಾಯ ನಿರೀಕ್ಷ ನಟರಾಜ್ ಮಧು ಮಾತನಾಡಿ, ಗ್ರಾಮ ಸಹಾಯಕರ ಸೇವೆಯನ್ನು ಕಾಯಂಗೊಳಿಸುವಂತೆ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಇತ್ತೀಚೆಗೆ ಸರ್ಕಾರ ಕಂದಾಯ ಇಲಾಖೆಯಲ್ಲಿ ಅರೆ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ಗ್ರೂಪ್ ಡಿಗೆ ಸೇರಿಸಿ ಕಾಯಂಗೊಳಿಸುವಂತೆ ಆದೇಶಿಸಲಾಗಿದೆ. ಅದರಂತೆ ಗ್ರಾಮ ಸಹಾಯಕರು ತಮ್ಮ ಬೇಡಿಕೆ ಕಂದಾಯ ಇಲಾಖೆ ನೌಕರರ ಸಂಘಕ್ಕಿಟ್ಟಿದ್ದು ಕಂದಾಯ ಇಲಾಖೆ ನೌಕರರ ಸಂಘ ಈ ಬಗ್ಗೆ ಸಚಿವರ ಬಳಿ ಚರ್ಚಿಸಿ ಅವರನ್ನು ಕಾಯಂಗೊಳಿಸಿಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ನಿವೃತ್ತಿ ಪಡೆದ ಗ್ರಾಮ ಸಹಾಯಕರನ್ನು ಜಿಲ್ಲಾ ಸಂಘದ ವತಿಯಿಂದ ಗೌರವಿಸಲಾಯಿತು. ಸಭೆಯಲ್ಲಿ ಗೌರವಾಧ್ಯಕ್ಷ ಚಿಕ್ಕರಾಜು, ಉಪಾಧ್ಯಕ್ಷ ವೆಂಕಟೇಶ್, ಪ್ರಭು, ಪ್ರಧಾನ ಕಾರ್ಯದರ್ಶಿ ಗಂಗಾಧರ್, ಖಜಾಂಚಿ ರವಿಕುಮಾರ್, ಪದಾಧಿಕಾರಿಗಳಾದ ನರಸಿಂಹ ಮೂರ್ತಿ, ಉಮೇಶ್, ಚಲುವರಾಜು, ವೆಂಕಟೇಶ್, ರಾಮಲಿಂಗ, ಗಿರೀಶ್, ಕಾಂತರಾಜು, ಶ್ರೀನಿವಾಸ್, ಮೂರ್ತಿ ಜಿಲ್ಲೆಯ ಎಲ್ಲಾ ಗ್ರಾಮ ಸಹಾಯಕರು ಭಾಗವಹಿಸಿದ್ದರು.