ನರೇಗಾ ನೌಕರರ ಸಮಸ್ಯೆ ಬಗೆಹರಿಸುವಂತೆ ಮನವಿ

| Published : Jun 18 2025, 12:24 AM IST

ಸಾರಾಂಶ

ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳ ಅನುದಾನ ಬಿಡುಗಡೆಯಲ್ಲಿ ಯಾವುದೇ ಇಲಾಖೆಗಳಲ್ಲಿಯೂ ವಿಳಂಬ ಆಗಿರುವುದಿಲ್ಲ

ಶಿರಸಿ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರ ವೇತನ ಮತ್ತು ಸೇವಾ ಭದ್ರತೆ ನೀಡಲು ಕೇಂದ್ರ ಸರ್ಕಾರದ ಗಮನಕ್ಕೆ ತಂದು ನೌಕರರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳ ಅನುದಾನ ಬಿಡುಗಡೆಯಲ್ಲಿ ಯಾವುದೇ ಇಲಾಖೆಗಳಲ್ಲಿಯೂ ವಿಳಂಬ ಆಗಿರುವುದಿಲ್ಲ. ಹಾಗೇ ನಮ್ಮಲ್ಲಿ ಹಣದ ಕೊರತೆಯೂ ಇಲ್ಲ.ಆದರೆ ರಾಜ್ಯ ಸರ್ಕಾರದಿಂದ ಏನಾದರೂ ಮಾಹಿತಿ ಪೂರೈಕೆಯಲ್ಲಿ ವಿಳಂಬವೇ ಈ ಹಣ ಬಿಡುಗಡೆಗೆ ಕಾರಣವಾಗಿರಬಹುದು. ಕೇಂದ್ರದಿಂದ ಹಣ ಬಿಡುಗಡೆ ಆದ ಮೇಲೆ ರಾಜ್ಯ ಸರ್ಕಾರದಿಂದ ತಕ್ಷಣ ಹಣ ಬಿಡುಗಡೆ ಮಾಡಬೇಕು.ಒಂದು ವೇಳೆ ಕೇಂದ್ರದಿಂದ ವಿಳಂಬ ಆಗಿದೆ ಎಂದಾದಲ್ಲಿ ಉನ್ನತ ಅಧಿಕಾರಿಗಳು ನಮ್ಮ ಗಮನಕ್ಕೆ ತಂದಲ್ಲಿ ಸಂಬಂಧಿಸಿದ ಇಲಾಖೆಯೊಂದಿಗೆ ಮಾತನಾಡಿ ಆದಷ್ಟು ಶೀಘ್ರ ಪರಿಹಾರ ನೀಡಲಾಗುತ್ತದೆ ಎಂದರು.

ಮನವಿ ಸಲ್ಲಿಸುವ ವೇಳೆ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕಾರ್ತಿಕ್ ಹಬ್ಬು, ಶಿರಸಿ, ಸಿದ್ದಾಪುರ, ಹಳಿಯಾಳ ತಾಲೂಕಿನ ನರೇಗಾ ಸಿಬ್ಬಂದಿಗಳು ಇದ್ದರು.