ಆಶಾಗಳ ₹10 ಸಾವಿರ ಏ.1ರಿಂದಲೇ ಅನ್ವಯಗೊಳಿಸಿ ನೀಡಿ

| Published : Mar 20 2025, 01:15 AM IST

ಸಾರಾಂಶ

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿದಂತೆ ಕನಿಷ್ಠ ₹10 ಸಾವಿರ ಗೌರವಧನವನ್ನು ಏ.1ರಿಂದಲೇ ಅನ್ವಯ ಆಗುವಂತೆ ಆದೇಶ ಹೊರಡಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕ ನೇತೃತ್ವದಲ್ಲಿ ಆಶಾಗಳು ನಗರದಲ್ಲಿ ಬುಧವಾರ ಪ್ರತಿಭಟಿಸಿದ್ದಾರೆ.

- ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಪ್ರತಿಭಟನೆಯಲ್ಲಿ ಮಂಜುನಾಥ ಒತ್ತಾಯ - - -

* ಬೇಡಿಕೆಗಳು- ಆರೋಗ್ಯ ಸಚಿವರು ಇಲಾಖೆ ಅಧಿಕಾರಿಗಳೊಂದಿಗೆ ಸಂಘದ ಪದಾಧಿಕಾರಿಗಳ ಸಭೆ ಮಾಡಬೇಕು

- 60 ವರ್ಷ ಮೇಲ್ಪಟ್ಟ ಆಶಾಗಳ ಕೆಲಸ ಕೊನೆಗಾಣಿಸುವ ನಿರ್ಧಾರ ಕೈಗೊಂಡಿದ್ದನ್ನು ತಕ್ಷಣ ಹಿಂಪಡೆಯಬೇಕು

- ಉಳಿದ ಬಹುವರ್ಷಗಳ ಬೇಡಿಕೆಗಳನ್ನು ಪ್ರಥಮಾದ್ಯತೆ ಮೇಲೆ ಈಡೇರಿಸಬೇಕು

- ರಾಜ್ಯಾದ್ಯಂತ ಆಶಾಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಸರ್ಕಾರ ಮೊದಲು ಮಾಡಬೇಕು

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿದಂತೆ ಕನಿಷ್ಠ ₹10 ಸಾವಿರ ಗೌರವಧನವನ್ನು ಏ.1ರಿಂದಲೇ ಅನ್ವಯ ಆಗುವಂತೆ ಆದೇಶ ಹೊರಡಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕ ನೇತೃತ್ವದಲ್ಲಿ ಆಶಾಗಳು ನಗರದಲ್ಲಿ ಬುಧವಾರ ಪ್ರತಿಭಟಿಸಿದರು.

ನಗರದ ಶ್ರೀ ಜಯದೇವ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಸಂಘಟನೆ ಜಿಲ್ಲಾ ಪದಾಧಿಕಾರಿಗಳು, ಮುಖಂಡರ ನೇತೃತ್ವದಲ್ಲಿ ಘೋಷಣೆಗಳ ಕೂಗುತ್ತಾ ಪ್ರತಿಭಟಿಸಿ, ಎಸಿ ಕಚೇರಿಯಲ್ಲಿ ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಜಿಲ್ಲಾ ಗೌರವಾಧ್ಯಕ್ಷ ಮಂಜುನಾಥ ಕುಕ್ಕವಾಡ ಮಾತನಾಡಿ, ಆಶಾ ಕಾರ್ಯಕರ್ತೆಯರಿಗೆ ಏ.1ರಿಂದಲೇ ಅನ್ವಯ ಆಗುವಂತೆ ಪ್ರೋತ್ಸಾಹಧನ ಸೇರಿಸಿ, ₹10 ಸಾವಿರ ಗೌರವ‍ಧನ ನೀಡುವಂತೆ ಆದೇಶ ಹೊರಡಿಸಬೇಕು. 2025-26ನೇ ಸಾಲಿನ ಬಜೆಟ್‌ನಲ್ಲಿ ಎಲ್ಲ ಯೋಜನಾ ಕಾರ್ಯಕರ್ತೆಯರಿಗೆ ₹1 ಸಾವಿರ ಹೆಚ್ಚಿಸಿದಂತೆ ಆಶಾಗಳಿಗೂ ವೇತನ ಹೆಚ್ಚಿಸಬೇಕು ಎಂದರು.

ಮುಖ್ಯಮಂತ್ರಿ ಘೋಷಿಸಿದಂತೆ ಏಪ್ರಿಲ್ 2025ರಿಂದ ಪ್ರತಿ ತಿಂಗಳು ಆಶಾಗಳಿಗೆ ಪ್ರೋತ್ಸಾಹಧನ ಸೇರಿಸಿ, ₹10 ಸಾವಿರ ಗೌರವಧನ ನೀಡಲಾಗುವುದು, 10 ಸಾವಿರ ಹೊರತುಪಡಿಸಿ, ಕಾಂಪೋನೆಂಟ್‌ಗಳ ಹೆಚ್ಚುವರಿ ಕೆಲಸದ ಆಧಾರದಲ್ಲಿ ಹೆಚ್ಚುವರಿ ಇನ್‌ಟೆನ್ಸೀವ್‌ ನೀಡಲಿದೆ. ಒಂದುವೇಳೆ ಯಾರಿಗಾದರೂ ಕಾಂಪೊನೆಂಟ್‌ಗಳಿಂದ ಕಡಿಮೆ ಮೊತ್ತದ ಪ್ರೋತ್ಸಾಹಧನ ಬಂದರೆ ಅಂತಹ ಕಾರ್ಯಕರ್ತೆಯರಿಗೆ ಸರ್ಕಾರವೇ ವ್ಯತ್ಯಾಸದ ಹಣ ಪಾವತಿಸಿ, ₹10 ಸಾವಿರ ಗ್ಯಾರಂಟಿ ಸಿಗುವಂತೆ ಕ್ರಮ ಕೈಗೊಳ್ಳುವ ಘೋಷಣೆ ಮಾಡಿದೆ. ಅದನ್ನು ಆದೇಶವಾಗಿ ಹೊರಡಿಸಬೇಕು ಎಂದು ಆಗ್ರಹಿಸಿದರು.

ಬಜೆಟ್‌ನಲ್ಲಿ ರಾಜ್ಯದ ಸುಮಾರು 2.5 ಲಕ್ಷ ಅಂಗನವಾಡಿ ಬಿಸಿಯೂಟ ಕಾರ್ಯಕರ್ತೆಯರಿಗೆ ₹10 ಸಾವಿರ ಹೆಚ್ಚಿಸಿದಂತೆ 42 ಸಾವಿರ ಆಶಾ ಕಾರ್ಯಕರ್ತೆಯರಿಗೂ ₹1 ಸಾವಿರ ಹೆಚ್ಚಿಸಿ, ಬಜೆಟ್‌ನಲ್ಲಿ ಸೇರಿಸಿ, ಆದೇಶಿಸಬೇಕು. ಈ ಕುರಿತು ಆರೋಗ್ಯ ಸಚಿವರು ಈವರೆಗೂ ಸಭೆ ಮಾಡಿಲ್ಲ. ಧರಣಿ ಸ್ಥಳದಲ್ಲಿ ನೀಡಿದ್ದ ಆಶ್ವಾಸನೆ ಈಡೇರಿಸಿ, ಆದೇಶ ಹೊರಡಿಸಬೇಕು. ಆಶಾಗಳ ಹಿತಕಾಯಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಗೌರವಾಧ್ಯಕ್ಷ ಮಂಜುನಾಥ್ ಕುಕ್ಕು ವಾಡ, ಜಿಲ್ಲಾಧ್ಯಕ್ಷೆ ಲಲಿತಮ್ಮ, ಅಣಬೇರು ತಿಪ್ಪೇಸ್ವಾಮಿ, ಮಧು ತೊಗಲೇರಿ, ನಾಗವೇಣಿ, ಹಾಲಮ್ಮ, ಚನ್ನಗಿರಿ ರೂಪಾ, ಚನ್ನಗಿರಿ ವಿಶಾಲಾಕ್ಷಿ, ಹೊನ್ನಾಳಿ ಲಕ್ಷ್ಮಿದೇವಿ, ಮಂಜಮ್ಮ, ದಾವಣಗೆರೆ ಪರ್ವೀನ್, ತಿಪ್ಪಮ್ಮ, ಜಗಳೂರು ಲೀಲಾವತಿ, ಇಂದಿರಾ, ಜ್ಯೋತಿ, ಹರಿಹರದ ಕರಿಬಸಮ್ಮ, ಜ್ಯೋತಿ, ಹೊನ್ನಾಳಿ ಹಳದಮ್ಮ ಇತರರು ಇದ್ದರು.

- - -

(-ಫೋಟೋ ಇದೆ.)