ಸಾರಾಂಶ
ಕನ್ನಡಪ್ರಭ ವಾರ್ತೆ ಬೀಳಗಿ
ಜಗತ್ತಿನ ಅದ್ಭುತ ಗ್ರಂಥಗಳಲ್ಲಿ ರಾಮಾಯಣ, ಮಹಾಭಾರತ ಸರ್ವ ಶ್ರೇಷ್ಠವಾದವುಗಳು. ಶಿಕ್ಷಣ, ಸಂಘಟನೆ ಕೊರತೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗಗಳು ನಿರೀಕ್ಷಿತ ಮಟ್ಟಕ್ಕೆ ಅಭಿವೃದ್ಧಿಯಾಗಿಲ್ಲ ಎಂದು ಶಾಸಕ ಜೆ.ಟಿ. ಪಾಟೀಲ ವಿಷಾದ ವ್ಯಕ್ತಪಡಿಸಿದರು.ತಾಲೂಕು ಆಡಳಿತ, ತಾಪಂ, ಪಪಂ, ಸಮಾಜ ಕಲ್ಯಾಣ ಇಲಾಖೆ ಬೀಳಗಿ ಇವರ ಸಂಯುಕ್ತ ಆಶ್ರಯದಲ್ಲಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಹಲವಾರು ಬೇಡಿಕೆ ಇದ್ದು, ಸಮುದಾಯ ಭವನ ಅಭಿವೃದ್ಧಿಗೆ ₹ ೧ ಕೊಟಿ ಮಂಜೂರು ಮಾಡಲಾಗುವುದು, ಇತರ ಸಮಸ್ಯೆಗಳ ಕುರಿತಾಗಿ ಸಿಎಂ ಗಮನಕ್ಕೆ ತರುವ ಭರವಸೆ ನೀಡಿದರು.ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಜಗತ್ತಿನ ಮನುಕುಲಕ್ಕೆ ರಾಮಾಯಣದಂತಹ ಪವಿತ್ರ ಗ್ರಂಥವನ್ನು ಕೊಡುಗೆಯಾಗಿ ನೀಡಿದರು. ಈ ಗ್ರಂಥ ಮಾನವನ ಸಂಬಂಧ ಜೋಡಿಸುವ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ಜೀವನ ಸಾಗಿಸೋಣ ಎಂದರು.
ಬೀಳಗಿ ಪಪಂ ವತಿಯಿಂದ ಎಸ್ಎಫ್ಸಿ ಮತ್ತು ಟಿಎಸ್ ಪಿ ಯೋಜನೆಯಡಿ ವೀರ ಸಿಂಧೂರ ಲಕ್ಷ್ಮಣ ಸಮುದಾಯ ಭವನಕ್ಕೆ ₹1.32 ಲಕ್ಷದ ಪೀಠೋಪಕರಣ ಒದಗಿಸಿದರು.ಪ.ಜಾತಿ, ಪ.ಪಂಗಡದ 21 ಜನ ಮಹಿಳೆಯರಿಗೆ ₹1.80 ಲಕ್ಷ ಮೌಲ್ಯದ ಹೊಲಿಗೆ ಯಂತ್ರ, ಪ.ಪಂಗಡ ಹಾಗೂ ಇತರೆ ಬಡ ಕುಟುಂಬದ 131 ಜನರಿಗೆ ಸೋಲಾರ್ ದೀಪ, ಹಿಂದುಳಿದ ವರ್ಗದ 12 ಜನ ಮಹಿಳೆಯರಿಗೆ ಹೊಲಿಗೆ ಯಂತ್ರ ಮತ್ತು 46 ಜನ ವಿಕಲಚೇತನರಿಗೆ ಸಾಧನ ಸಲಕರಣೆಗಳನ್ನು ಶಾಸಕ ಜೆ.ಟಿ. ಪಾಟೀಲ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್.ಆರ್. ನಿರಾಣಿ ಹಸ್ತಾಂತರಿಸಿದರು.
ತಹಸೀಲ್ದಾರ್ ವಿನೋದ ಹತ್ತಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಗಲಕೋಟೆ ಜಿಲ್ಲಾ ವಾಲ್ಮೀಕಿ ನೌಕರರ ಸಂಘ ಅಧ್ಯಕ್ಷ ಆರ್.ಜಿ. ಸನ್ನಿ ಉಪನ್ಯಾಸ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಆದಾಪುರ ಸ್ವಾಗತಿಸಿದರು. ಇಓ ಶ್ರೀನಿವಾಸ ಪಾಟೀಲ, ಪಪಂ ಅಧ್ಯಕ್ಷ ಮುತ್ತು ಬೊರ್ಜಿ, ಉಪಾಧ್ಯಕ್ಷೆ ಕಲಾವತಿ ಗಡ್ಡದವರ,ಮುಖ್ಯಾಧಿಕಾರಿ ದೇವಿಂದ್ರ ಧನಪಾಲ, ಸಿಪಿಐ ಹನುಮಂತ ಸಣಮನಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಎಸ್. ಗಡ್ಡದೇವರಮಠ, ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷ ಟಿ.ವೈ.ಜಾನಮಟ್ಟಿ, ವೀರ ಸಿಂಧೂರ ಲಕ್ಷ್ಮಣ ಟ್ರಸ್ಟ್ ಅಧ್ಯಕ್ಷ ಲಕ್ಷ್ಮಣ ತಳವಾರ ಇತರರು ಇದ್ದರು.