ಸಾರಾಂಶ
ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದನ್ವಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳದೇ ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹರಿಹರ ಶಾಖೆಯಿಂದ ಶುಕ್ರವಾರ ಪ್ರತಿಭಟಿಸಲಾಯಿತು.
- ಹರಿಹರದಲ್ಲಿ ಎಬಿವಿಪಿ ಪ್ರತಿಭಟನೆಯಲ್ಲಿ ಎಂ.ವೆಂಕಟೇಶ್ । ಸರ್ಕಾರಕ್ಕೆ ಮನವಿ
- - -ಕನ್ನಡಪ್ರಭ ವಾರ್ತೆ ಹರಿಹರ
ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದನ್ವಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳದೇ ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹರಿಹರ ಶಾಖೆಯಿಂದ ಶುಕ್ರವಾರ ಪ್ರತಿಭಟಿಸಲಾಯಿತು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ತಾಲೂಕು ಕಚೇರಿಗೆ ತಲುಪಿತು. ಬಳಿಕ ಚುನಾವಣಾ ಶಿರಸ್ತೇದಾರ್ ಅಶೋಕ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರ ಕಾರ್ಯದರ್ಶಿ ಎಂ.ವೆಂಕಟೇಶ್ ಮಾತನಾಡಿ, ರಾಜ್ಯದಲ್ಲಿರುವ ೪೩೨ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಒಟ್ಟು ೬೦೦೦ ಕಾಯಂ ಉಪನ್ಯಾಸಕರಲ್ಲಿ ಈಗಾಗಲೇ ೩೦೦೦ ಉಪನ್ಯಾಸಕರು ನಿವೃತ್ತಿ ಹೊಂದಿದ್ದಾರೆ. ೧೨೦೦೦ ಅತಿಥಿ ಉಪನ್ಯಾಸಕರ ಸಹಾಯದಿಂದ ತರಗತಿಗಳು ನಡೆಯುತ್ತಿವೆ. ೨೦೨೫-೨೬ನೇ ಶೈಕ್ಷಣಿಕ ಸಾಲಿಗೆ ೧೨೦೦೦ ಅತಿಥಿ ಉಪನ್ಯಾಸಕರ ನೇಮಕಾತಿಗಾಗಿ ಅರ್ಜಿ ಕರೆಯಲಾಗಿದೆ. ೫೫೦೦೦ ಅರ್ಜಿಗಳು ಬಂದಿವೆ. ತರಗತಿಗಳು ಪ್ರಾರಂಭವಾಗಿ ೨ ತಿಂಗಳು ಕಳೆದಿದ್ದು, ಅಗತ್ಯ ಉಪನ್ಯಾಸಕರಿಲ್ಲದೇ ವಿದ್ಯಾರ್ಥಿಗಳು ಪಾಠಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.ರಾಜ್ಯ ಸರ್ಕಾರ ಪದವಿ ಶಿಕ್ಷಣ ಬಲಪಡಿಸಿ, ಶೈಕ್ಷಣಿಕ ಕ್ಷೇತ್ರವನ್ನು ಆದ್ಯತಾ ವಲಯವೆಂದು ಪರಿಗಣಿಸಿ, ಅಗತ್ಯ ಕ್ರಮಗಳನ್ನು ಕೈಗೊಂಡು ರಾಜ್ಯದ ವಿದ್ಯಾರ್ಥಿಗಳ ಹಿತ ಕಾಯಬೇಕೆಂಬುದು ಎಬಿವಿಪಿ ಆಗ್ರಹ ಎಂದರು.
ನಗರದ ಶಾಖೆಯ ಸಹ ಕಾರ್ಯದರ್ಶಿ ಶಶಿಧರ್, ವಿದ್ಯಾರ್ಥಿ ಪ್ರಮುಖರಾದ ಮರಿಯಮ್ಮ, ಹೊನ್ನಮ್ಮ, ಚಂದು, ರಮೇಶ್ ಲೊಂಡೆ ರುದ್ರೇಶ್, ಆದರ್ಶ, ಮಹಾಂತೇಶ್ ಹಾಗೂ ಇತರರಿದ್ದರು.- - -
-26ಎಚ್ಆರ್ಆರ್04:ಹರಿಹರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಶೀಘ್ರ ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟಿಸಿ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.