ಸಾರಾಂಶ
ಶಿರಸಿ:
ಮುಜರಾಯಿ ಇಲಾಖೆಗೆ ಸೇರದ ದೇವಸ್ಥಾನಗಳಿಗೂ ಸರ್ಕಾರ ವ್ಯವಸ್ಥಾಪನಾ ಸಮಿತಿ ನೇಮಕ ಮಾಡಲು ಮುಂದಾಗಿರುವುದನ್ನು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ, ಹಿಂದೂ ಮಹಾ ಮಂಡಳದ ಗೌರವಾಧ್ಯಕ್ಷ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಖಂಡಿಸಿದ್ದಾರೆ.ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾಧಾರಿತ ಸಂಸ್ಥೆಗಳ ತಿದ್ದುಪಡಿ ಅಧಿನಿಯಮ 2011ರ ಕುರಿತು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ವಿಚಾರಣೆಯ ಹಂತದಲ್ಲಿ ಇರಬೇಕಾದರೆ ಯಾವುದೋ ಒಂದು ಸೆಕ್ಷನ್ಗೆ ಮಾತ್ರ ವಿನಾಯಿತಿ ತೆಗೆದುಕೊಂಡು ಈ ರೀತಿಯ ಪ್ರಕ್ರಿಯೆಗೆ ಮುಂದಾಗುವುದು ನ್ಯಾಯವಲ್ಲ. ಕಳೆದ 22 ವರ್ಷಗಳಿಂದ ಈ ಕಾನೂನಿನ ಬಗ್ಗೆ ನಮ್ಮ ಆಗ್ರಹ ಸಲ್ಲಿಸುತ್ತಲೇ ಇದ್ದೇವೆ. ಈಗಾಗಲೇ 2 ಬಾರಿ ರಾಜ್ಯ ಉಚ್ಚ ನ್ಯಾಯಾಲಯವು ಈ ಕಾನೂನನ್ನು ಅಸಂವಿಧಾನಿಕ ಎಂದು ತಿರಸ್ಕರಿಸಿದೆ. ಇಂಥ ಕಾನೂನಿನ ಜಾರಿಗೆ ಮತ್ತೆ ಪ್ರಯತ್ನಿಸುವುದು ಸರಿಯಲ್ಲ. ಸರ್ವಸಮ್ಮತವಾದ ಹೊಸ ಕಾನೂನನ್ನು ಜಾರಿಗೆ ತರಲು ಅವಕಾಶವಿದೆ. ಸರ್ಕಾರ ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಸರ್ವಸಮ್ಮತವಾದ ಕಾನೂನು ಜಾರಿಗೆ ಬರುವ ತನಕ ಸರ್ಕಾರ ಈ ರೀತಿಯ ಪ್ರಯತ್ನ ಸ್ಥಗಿತಗೊಳಿಸಬೇಕು ಎಂದರು.
ರಾಜ್ಯ ಸರ್ಕಾರ ವ್ಯವಸ್ಥಾಪನಾ ಸಮಿತಿ ರಚನೆಗೆ ಹೊರಟಿರುವ ರಾಜ್ಯದ ವಿವಿಧ ದೇವಸ್ಥಾನಗಳ ಪೈಕಿ ಮುಜರಾಯಿ ಇಲಾಖೆಗೆ ಸೇರದ ಅನೇಕ ದೇವಸ್ಥಾನಗಳಿವೆ. ಆ ದೇವಸ್ಥಾನಗಳಿಗೆ ಕೂಡ ವ್ಯವಸ್ಥಾಪನಾ ಸಮಿತಿ ರಚಿಸುವ ಬಗ್ಗೆ ಆದೇಶ ಹೊರಡಿಸಿ, ಅರ್ಜಿ ಆಹ್ವಾನಿಸಿದೆ. ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಿಗೆ, ಅದರಲ್ಲೂ ವಿಶೇಷವಾಗಿ ಮೈಸೂರು ಮಹಾರಾಜರ ಆಳ್ವಿಕೆಯಲ್ಲಿದ್ದು, ಬಳಿಕ ಕರ್ನಾಟಕ ರಾಜ್ಯ ಸರ್ಕಾರದ ಆಡಳಿತಕ್ಕೆ ಹಸ್ತಾಂತರವಾದ ದೇವಸ್ಥಾನಗಳಿಗೆ ಆಡಳಿತ ವ್ಯವಸ್ಥೆ ನೇಮಕ ಮಾಡಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಮೊದಲಿಂದಲೂ ಜನಗಳೇ ನಡೆಸಿಕೊಂಡು ಬಂದಿರುವ ದೇವಸ್ಥಾನಗಳಿಗೆ ಈ ರೀತಿ ವ್ಯವಸ್ಥಾಪನಾ ಸಮಿತಿ ನೇಮಕದ ಪ್ರಯತ್ನ ಸರ್ಕಾರ ಮಾಡಬಾರದು ಎಂದು ಹೇಳಿದ್ದಾರೆ.ಒಂದೊಮ್ಮೆ ವ್ಯವಸ್ಥಾಪನಾ ಸಮಿತಿ ರಚನೆಯ ಅಗತ್ಯ ಸರ್ಕಾರಕ್ಕೆ ಕಂಡುಬಂದರೂ ಅವುಗಳ ಖಾಸಗಿ ಮಾಲೀಕತ್ವ ಉಳಿಸಿಕೊಂಡೇ ವ್ಯವಸ್ಥಾಪನಾ ಸಮಿತಿ ರಚನೆ ಸಾಧ್ಯವಿದೆ. ಇಂಥ ದೇವಸ್ಥಾನಗಳಲ್ಲಿ ಹಾಲಿ ಇರುವ ಆಡಳಿತ ಮಂಡಳಿಗೇ ವ್ಯವಸ್ಥಾಪನಾ ಸಮಿತಿ ರಚಿಸಿ ವರದಿ ಸಲ್ಲಿಸುವಂತೆ ಸರ್ಕಾರ ಸೂಚಿಸಬಹುದು. ಉದಾಹರಣೆಗೆ ಸಹಕಾರಿ ಸಂಸ್ಥೆಗಳಲ್ಲಿ ಆಡಳಿತ ಮಂಡಳಿಯ ಅವಧಿ ಮುಗಿದ ಬಳಿಕ ಸಹಕಾರ ಇಲಾಖೆಯು ಹೊಸ ಆಡಳಿತ ಮಂಡಳಿ ರಚಿಸಿ ವರದಿ ಸಲ್ಲಿಸುವಂತೆ ಸೂಚನೆ ಕೊಡುತ್ತದೆ. ಆಯ್ಕೆ ಮಾಡುವ ಸ್ವಾತಂತ್ರ್ಯ ಆಯಾ ಸಹಕಾರಿ ಸಂಸ್ಥೆಗಳಿಗೆ ಇರುತ್ತದೆ. ಇದೇ ಮಾದರಿಯಲ್ಲಿ ಸರ್ಕಾರ ಖಾಸಗಿ ದೇವಸ್ಥಾನಗಳಿಗೂ ಆಡಳಿತ ಮಂಡಳಿ ರಚಿಸಿ ವರದಿ ಕೊಡುವಂತೆ ಸೂಚಿಸಬಹುದು ಎಂದರು.
ಇದನ್ನು ಹೊರತುಪಡಿಸಿ ಮುಜರಾಯಿ ಇಲಾಖೆಯ ಆಯುಕ್ತರ ಕಚೇರಿಗೆ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. ಆಡಳಿತ ಮಂಡಳಿಯನ್ನು ಸರ್ಕಾರವೇ ರಚಿಸಲು ಇರುವ ಅವಕಾಶ ಸರಿಯಲ್ಲ. ಈ ರೀತಿಯಲ್ಲಿ ಎಲ್ಲ ದೇವಸ್ಥಾನಗಳನ್ನೂ ಸರ್ಕಾರಿಕರಣಗೊಳಿಸುವ ಬಗ್ಗೆ ನಮ್ಮ ವಿರೋಧವಿದೆ ಎಂದೂ ಹೇಳಿದರು.ಇದೇ ವೇಳೆ ಸರ್ಕಾರ ದೇವಸ್ಥಾನಗಳ ಅಭಿವೃದ್ಧಿಗೆ ವಿವಿಧ ಕ್ರಮಕೈಗೊಳ್ಳುತ್ತಿರುವುದನ್ನು ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸ್ವಾಗತಿಸಿದರು.