ಗ್ರಾಮದಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಸಂಜೀವಿನಿ) ಅಡಿಯಲ್ಲಿ ರಚನೆಯಾಗಿರುವ ತಾಲೂಕಿನ ಚಂದ್ರಗುತ್ತಿ ಗ್ರಾಮ ಪಂಚಾಯ ವ್ಯಾಪ್ತಿ ಒಕ್ಕೂಟದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ನಡೆಯಿತು.
ಕನ್ನಡಪ್ರಭ ವಾರ್ತೆ ಸೊರಬ
ಗ್ರಾಮದಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಸಂಜೀವಿನಿ) ಅಡಿಯಲ್ಲಿ ರಚನೆಯಾಗಿರುವ ತಾಲೂಕಿನ ಚಂದ್ರಗುತ್ತಿ ಗ್ರಾಮ ಪಂಚಾಯ ವ್ಯಾಪ್ತಿ ಒಕ್ಕೂಟದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ನಡೆಯಿತು.ಉದ್ಘಾಟನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಭೆಯಲ್ಲಿ ವಾರ್ಷಿಕ ಆಯವ್ಯಯ ಹಾಗೂ ಲೆಕ್ಕಪರಿಶೋಧನೆ ವರದಿ ಮಂಡಿಸಲಾಯಿತು. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಗ್ರಾಮ ಪಂಚಾಯಿತಿ, ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಪಶುಸಂಗೋಪನೆ ಇಲಾಖೆ ಹಾಗೂ ಹೊಳಲೂರಿನ ಸ್ವ-ಉದ್ಯೋಗ ತರಬೇತಿ ಕೇಂದ್ರದ ವತಿಯಿಂದ ಗ್ರಾಮೀಣ ಉದ್ಯೋಗ ಯೋಜನೆ ಕುರಿತು ಮಹತ್ವದ ಮಾಹಿತಿ ನೀಡಲಾಯಿತು. ಬಳಿಕ 2025-26ನೇ ಸಾಲಿನಲ್ಲಿ ಸಾಧಿಸಿರುವ ಪ್ರಗತಿ ಕುರಿತು ಪರಿಶೀಲಿಸುವುದರ ಜತೆಗೆ 2026-27ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ ಕುರಿತು ಸುದೀರ್ಘವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
ಆರ್ಥಿಕ ಲೆಕ್ಕಪತ್ರಗಳ ವಿವರ: 2025-26ನೇ ಸಾಲಿನಲ್ಲಿ ಒಕ್ಕೂಟಕ್ಕೆ ಒಟ್ಟು ೮೧,೩೦,೭೮೦ ರು. ಜಮೆಯಾಗಿದ್ದು, ೫೪,೮೨,೦೭೨ ರು. ವೆಚ್ಚವಾಗಿದೆ. ಪ್ರಸ್ತುತ ೨೬,೪೮,೭೦೮ ರು. ಅಂತಿಮ ಬಾಕಿ ಉಳಿದಿದೆ. ವರ್ಷದಲ್ಲಿ ಒಕ್ಕೂಟದ ಒಟ್ಟು ಆದಾಯ ೪,೧೭,೫೮೩ ರು. ಆಗಿದ್ದು, ಸ್ವಸಹಾಯ ಗುಂಪುಗಳಿಗೆ ಒಟ್ಟು ೨,೩೦,೦೦,೦೦೦ ರು. ಸಮುದಾಯ ಹೂಡಿಕೆ ನಿಧಿ ಸಾಲ ವಿತರಿಸಲಾಗಿದೆ.ಸಭೆಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷೆ ರೇಣುಕಾ, ಮಹಿಳೆಯರನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಸದೃಢರನ್ನಾಗಿಸುವ ನಿಟ್ಟಿನಲ್ಲಿ ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರದಿಂದ ಸಿಗುವ ವಿವಿಧ ಸೌಲಭ್ಯಗಳನ್ನು ತಲುಪಿಸಿ, ಮಹಿಳೆಯರು ಜೀವನೋಪಾಯ ಚಟುವಟಿಕೆಗಳಲ್ಲಿ ಭಾಗಿಯಾಗಲು ಒಕ್ಕೂಟ ಮಹತ್ವದ ಪಾತ್ರ ವಹಿಸುತ್ತಿದೆ. ಒಕ್ಕೂಟ ಪ್ರಾರಂಭವಾದಾಗಿನಿಂದ ಸ್ವಸಹಾಯ ಗುಂಪಿನ ಮಹಿಳೆಯರಿಗೆ ಸಿಬ್ಬಂದಿ ಸಂಪೂರ್ಣ ಮಾಹಿತಿ ನೀಡಿ, ನಾವು ಅಬಲೆಯರಲ್ಲ, ಸಬಲೆಯರು ಎಂದು ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸುವಂತೆ ಉತ್ತೇಜನ ನೀಡುತ್ತಿದ್ದಾರೆ ಎಂದರು.
ಚಂದ್ರಗುತ್ತಿ ಒಕ್ಕೂಟವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದ್ದು, ತಾಲೂಕು ಮತ್ತು ಜಿಲ್ಲೆಗೆ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಒಕ್ಕೂಟಗಳೇ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿ ಸದಸ್ಯರಿಗೆ ಸಫಲ ರೀತಿಯಲ್ಲಿ ಸಾಲ ವಿತರಣೆ ಮಾಡಲಿವೆ. ಸಿಬ್ಬಂದಿ ಎಲ್ಲ ಇಲಾಖೆಯ ಜತೆಗೆ ಸಂಪರ್ಕ ಬೆಳೆಸಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಕ್ಕೂಟಗಳ ಸ್ಥಾಪನೆಯಿಂದ ಮಹಿಳೆಯರಿಗೆ ಅತ್ಯಂತ ಅನುಕೂಲವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ತಾಲೂಕು ಅಭಿಯಾನದ ಮೇಲ್ವಿಚಾರಕ ಚೌಡಪ್ಪ, ಶರತ್, ಬ್ಲಾಕ್ ಸಂಪನ್ಮೂಲ ವ್ಯಕ್ತಿ ತೇಜಸ್ವಿನಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರೇಖಾ, ಒಕ್ಕೂಟದ ಅಧ್ಯಕ್ಷೆ ರೇಣುಕಾ, ಕಾರ್ಯದರ್ಶಿ ಮಂಜುಳಾ, ಸಹಕಾರ್ಯದರ್ಶಿ ಲಲಿತಾ, ಖಜಾಂಚಿ ರೂಪ, ಕೃಷಿ ಇಲಾಖೆ ಸಿಬ್ಬಂದಿ ಮಾರುತಿ, ಆರೋಗ್ಯ ಇಲಾಖೆಯ ಸಿಬ್ಬಂದಿ, ಹೊಳಲೂರು ಸ್ವ-ಉದ್ಯೋಗ ತರಬೇತಿ ಕೇಂದ್ರದ ಸಂತೋಷ್, ಒಕ್ಕೂಟದ ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
------ಫೋಟೋ------೦೬ಕೆಪಿಸೊರಬ-೦೧
ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ ಯಶಸ್ವಿಯಾಗಿ ನಡೆಯಿತು.