ಸಾರಾಂಶ
ಒಟ್ಟು 15 ಸದಸ್ಯ ಬಲವಿದ್ದ ಗ್ರಾಪಂನಲ್ಲಿ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮೀಸಲಾತಿ ಹೊಂದಿದ್ದು, ತಿಮ್ಮಸಂದ್ರ ರಂಗಸ್ವಾಮಿ ಎಲ್ಲಾ ಗ್ರಾಪಂ ಸದಸ್ಯರ ಬಲದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಮಾಜಿ ಅಧ್ಯಕ್ಷ ಶೈಲೇಂದ್ರ ನೇತೃತ್ವದ ತಂಡ ಪಾರಮ್ಯ ಸಾಧಿಸಿದೆ.
ಕನ್ನಡಪ್ರಭ ವಾರ್ತೆ ದಾಬಸ್ಪೇಟೆ
ತ್ಯಾಮಗೊಂಡ್ಲು ಹೋಬಳಿಯ ಅರೇಬೊಮ್ಮನಹಳ್ಳಿ ಗ್ರಾಪಂ ನೂತನ ಅಧ್ಯಕ್ಷರಾಗಿ ತಿಮ್ಮಸಂದ್ರ ರಂಗಸ್ವಾಮಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮಸೂದ್ ಖಾನ್ ಮಂಗಳವಾರ ಘೋಷಿಸಿದರು.ಒಟ್ಟು 15 ಸದಸ್ಯ ಬಲವಿದ್ದ ಗ್ರಾಪಂನಲ್ಲಿ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮೀಸಲಾತಿ ಹೊಂದಿದ್ದು, ತಿಮ್ಮಸಂದ್ರ ರಂಗಸ್ವಾಮಿ ಎಲ್ಲಾ ಗ್ರಾಪಂ ಸದಸ್ಯರ ಬಲದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಮಾಜಿ ಅಧ್ಯಕ್ಷ ಶೈಲೇಂದ್ರ ನೇತೃತ್ವದ ತಂಡ ಪಾರಮ್ಯ ಸಾಧಿಸಿದೆ.
ನೂತನ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ನಮ್ಮ ಪಂಚಾಯಿತಿ ತಾಲೂಕು ಮತ್ತು ಜಿಲ್ಲೆಗೆ ಗಡಿ ಪಂಚಾಯಿತಿಯಾಗಿದ್ದರೂ ಕಳೆದ ಅವಧಿಯ ಗ್ರಾಪಂ ಅಧ್ಯಕ್ಷರಾಗಿದ್ದ ಶೈಲೇಂದ್ರ ಆಡಳಿತಾವಧಿಯಲ್ಲಿ ಗ್ರಾಮದಲ್ಲಿ ಮೂಲಭೂತ ಸೌಲಭ್ಯ ಸಾಕಷ್ಟು ಅಭಿವೃದ್ಧಿಯಾಗಿದೆ, ಮುಂದಿನ ದಿನಗಳಲ್ಲಿ ಎಲ್ಲಾ 15 ಜನ ಸದಸ್ಯರ ಸಹಭಾಗಿತ್ವದಲ್ಲಿ ಕಾರ್ಯ ಚಟುವಟಿಕೆ ನಡೆಸಲು ಉತ್ಸುಕನಾಗಿದ್ದೇನೆ, ಕ್ಷೇತ್ರದ ಜನಪ್ರಿಯ ಶಾಸಕ ಎನ್.ಶ್ರೀನಿವಾಸ್ ಮತ್ತು ಸ್ಥಳೀಯ ಎಲ್ಲಾ ಮುಖಂಡರ ಸಹಕಾರದಿಂದ ಇಂದು ಅಧ್ಯಕ್ಷನಾಗಿದ್ದೇನೆ, ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತೇನೆ ಎಂದರು.ಗ್ರಾಪಂ ಮಾಜಿ ಅಧ್ಯಕ್ಷ ಶೈಲೇಂದ್ರ ಮಾತನಾಡಿ, ಎಲ್ಲರಿಗೂ ಅಧಿಕಾರ ಸಿಗಬೇಕೆಂಬ ದೃಷ್ಟಿಯಿಂದ ಎಲ್ಲರೂ ಒಟ್ಟುಗೂಡಿ ಚರ್ಚಿಸಿ ಅಧಿಕಾರ ಹಂಚಿಕೆ ಮಾಡಿದ್ದೇವೆ. ನಮ್ಮ ಗ್ರಾಪಂ ವ್ಯಾಪ್ತಿಗೆ ನಮ್ಮ ಶಾಸಕ ಎನ್.ಶ್ರೀನಿವಾಸ್ ರವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ, ಮುಂದಿನ 15 ದಿನದೊಳಗೆ ಜನಸ್ಪಂದನ ಕಾರ್ಯಕ್ರಮ ಕೈಗೊಳ್ಳುತ್ತೇವೆ, ನಿವೇಶನ ರಹಿತರಿಗೆ ನಿವೇಶನ ವಿತರಣೆ ಕಾರ್ಯ ನಡೆಸುತ್ತೇವೆ ಎಂದರು.
ಗ್ರಾಪಂ ಸದಸ್ಯರಾದ ದೀಪು ವಸಂತ್ ಕುಮಾರ್, ರಘು, ನರಸಮ್ಮ, ಆಂಜನಮೂರ್ತಿ, ನಾಗರತ್ನ, ಶಬ್ಬೀರ್ ಖಾನ್, ಗೌರಮ್ಮ, ಅನುಸೂಯ, ಕೆ.ಅಗ್ರಹಾರ ವಿ.ಎಸ್.ಎಸ್.ಎನ್. ಅಧ್ಯಕ್ಷ ಲಕ್ಕಸಂದ್ರ ಗಂಗರಾಜು, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಟಿ.ರಾಮಚಂದ್ರ, ಹೊನ್ನರಾಯನಹಳ್ಳಿ ಮಂಜುನಾಥ್, ಮುಖಂಡರಾದ ಎಂ.ಕೆ.ನಾಗರಾಜು, ಸಿ.ಎಂ.ಗೌಡ, ಎಪಿಎಂಸಿ ಮಾಜಿ ನಿರ್ದೇಶಕ ಗೋವಿಂದರಾಜು, ಕೊಟ್ರೇಶ್, ತಿಮ್ಮಸಂದ್ರ ರವಿಕುಮಾರ್, ಬಂಡೇ ನವೀನ್, ಹೊಂಬಯ್ಯ, ಕೊಡಿಗೇಹಳ್ಳಿ ಮಂಜುನಾಥ್, ಜಯರಾಮ್, ಶಶಿಧರ್, ಹೇಮಂತ್ ಕುಮಾರ್, ಪಿಡಿಒ ರವೀಂದ್ರ, ಸಿಬ್ಬಂದಿ ವರ್ಗದವರು ನೂತನ ಅಧ್ಯಕ್ಷರಿಗೆ ಶುಭಕೋರಿದರು.