ಸಾರಾಂಶ
ಕೊಳ್ಳೇಗಾಲದ ಪ್ರವಾಸಿ ಮಂದಿರದಲ್ಲಿ ಕ್ರೈಸ್ತ ಸಂಘಟನೆಗಳ ಸಮಾಜದ ಅಧ್ಯಕ್ಷ ಸೆಲ್ವರಾಜು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಶಾಸಕ .ಆರ್.ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕು, ಈ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿ ಗಮನಹರಿಸಿ ಕ್ಷೇತ್ರದ ಅಭಿವೃದ್ಧಿಗಾಗಿ ಸ್ಪಂದಿಸಬೇಕು ಎಂದು ಕ್ರೈಸ್ತ ಸಮಾಜದ ಅಧ್ಯಕ್ಷ ಜಿ.ಸೆಲ್ವರಾಜು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಒತ್ತಾಯಿಸಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.ಆರ್.ಕೃಷ್ಣಮೂರ್ತಿ ಅವರು ಮಾಜಿ ರಾಜ್ಯಪಾಲರಾಗಿದ್ದಂತಹ ದಿ. ಬಿ.ರಾಚಯ್ಯರವರ ಪುತ್ರರಾಗಿದ್ದು ಗಡಿ ಜಿಲ್ಲೆ ಚಾಮರಾಜನಗರದ ಎಲ್ಲ ತಾಲೂಕುಗಳ ಬಗ್ಗೆ ಹಾಗೂ ಜನರ ನಾಡಿಮಿಡಿತ ಬಲ್ಲವರಾಗಿದ್ದಾರೆ, ಅಪಾರ ರಾಜಕೀಯ ಅನುಭವ ಹೊಂದಿದ್ದಾರೆ, ಅವರಿಗೆ ಸಚಿವ ಸ್ಥಾನ ನೀಡಿದರೆ ದಲಿತ ಸಮಾಜಕ್ಕೆ ಆದ್ಯತೆ ನೀಡುವ ಜೊತೆ ಚಾ.ನಗರ ಜಿಲ್ಲೆ ಹಾಗೂ ಕೊಳ್ಳೇಗಾಲ ಕ್ಷೇತ್ರದ ಸಮಗ್ರ ಪ್ರಗತಿಗೂ ಸಹಕಾರಿಯಾಗಲಿದೆ ಎಂದರು.ಶಾಸಕರು ಕ್ಷೇತ್ರದ ವಿವಿಧ ಸಮಾಜಗಳ ಮುಖಂಡರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವಲ್ಲಿ ಸಮಾಜಗಳಿಗೆ ಅನುದಾನ ಹಂಚಿಕೆಯಲ್ಲಿ, ಮುಡಿಗುಂಡ, ಮದ್ದೂರು ಸೇತುವೆ,ನೀರಾವರಿಗೆ ಆದ್ಯತೆ ಸೇರಿದಂತೆ ಹಲವು ಜನಪರ ಕೆಲಸ ಮಾಡುವ ಮೂಲಕ ಎಲ್ಲಾ ಸಮಾಜದ ಮುಖಂಡರ ಗಮನ ಸೆಳೆದಿದ್ದಾರೆ. ಈ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಸಚಿವ ಸ್ಥಾನ ನೀಡಿ, ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ತಾಲೂಕು ಕ್ರೈಸ್ತ ಸಮುದಾಯ ಕ್ಷೇಮಾಭಿವೃದ್ಧಿ ಒಕ್ಕೂಟದ ಗೌರವಾಧ್ಯಕ್ಷ ಎ.ವಿನ್ಸೆಂಟ್, ಕಾರ್ಯದರ್ಶಿ ಸದಾನಂದ ಸಾಧು, ಹಿರಿಯ ಉಪಾಧ್ಯಕ್ಷ ಟಿ.ಜಾನ್ ಪೀಟರ್, ಎಸ್.ವಿಲ್ಸನ್ ಸಾಧು, ಕರುಣಾಕರ್, ರಮೇಶ್ (ಅಗಸ್ಟಿನ್), ಜಂಟಿ ಕಾರ್ಯದರ್ಶಿ ಕಾಂತರಾಜು. ಎಲಿಸ್ ಬಾಬು, ಸುದರ್ಶನ್, ನಗರಸಭೆ ನಾಮನಿರ್ದೇಶನ ಸದಸ್ಯ ಆನಂದ್(ಜೋಷಿ) ಇನ್ನಿತರಿದ್ದರು.