ಸಾರಾಂಶ
ಜಿಲ್ಲೆಯ 13 ಹಾಗೂ ಹೈದ್ರಾಬಾದ್ನ ಒಂದು ಪೊಲೀಸ್ ಠಾಣೆಯಲ್ಲಿನ ಪ್ರಕರಣ, ಕಮಲನಗರದ ಓರ್ವ ವ್ಯಕ್ತಿಯನ್ನುಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗೆ, ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಮಾಹಿತಿ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೀದರ್
ಜಿಲ್ಲೆಯ 13 ಹಾಗೂ ಹೈದ್ರಾಬಾದ್ನ ಒಂದು ಸೇರಿ ಒಟ್ಟು 14 ಪೊಲೀಸ್ ಠಾಣೆಗಳಲ್ಲಿ ಕಳೆದ 15 ದಿನಗಳಲ್ಲಿ ದಾಖಲಾದ 29 ಸ್ವತ್ತಿನ ಜಾನುವಾರು ಮತ್ತು ಪಂಪಸೆಟ್ ಕಳವು ಪ್ರಕರಣಗಳಲ್ಲಿ ರಾಜ್ಯ ಹಾಗೂ ಅಂತರರಾಜ್ಯ ಕಳ್ಳರು ಸೇರಿ ಒಟ್ಟು 30 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್ಎಲ್ ತಿಳಿಸಿದರು.ಅವರು ಮಂಗಳವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಬಂಧಿಸಲಾದ ಆರೋಪಿಗಳಿಂದ ನಗದು ಹಣ, ಬಂಗಾರ, ಬೆಳ್ಳಿ, 7 ಜಾನುವಾರುಗಳು, 6 ಪಂಪಸೆಟ್, ಮೂರು ನಾಲ್ಕು ಚಕ್ರದ ವಾಹನ, ನಾಲ್ಕು ದ್ವಿಚಕ್ರ ವಾಹನ ಒಂದು ಆಟೋ, ವಿದ್ಯುತ್ ವೈಕ್ ಸೇರಿ ಒಟ್ಟು 54.96ಲಕ್ಷ ರು. ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದ್ದು ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.
ವಿಶೇಷವಾಗಿ ಭಾಲ್ಕಿ ಉಪ ವಿಭಾಗದಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬರುತ್ತಿತ್ತು. ರೈತರ ಹೊಲದಲ್ಲಿರುವ ಪಂಪಸೆಟ್ಗಳನ್ನು ಕಳುವು ಮಾಡಿಕೊಂಡು ಹೋಗುತ್ತಿದ್ದರು. ಈ ಹಿಂದೆ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ನಡೆದ ಭಾಲ್ಕಿಯ ಸಂಜೀವ ಬಿರಾದಾರ ಮನೆ ಕಳ್ಳತನ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದ್ದು ಆರೋಪಿ ಹೈದ್ರಾಬಾದ್ ಮೂಲದವನಾಗಿದ್ದಾನೆ ಎಂದು ಮಾಹಿತಿ ನೀಡಿದರು.ಕಮಲನಗರದ ಓರ್ವ ವ್ಯಕ್ತಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗೆ:
ಬೀದರ್ ಜಿಲ್ಲೆಯಲ್ಲಿ 5 ಜನ ರೌಡಿಶೀಟರ್ಗಳನ್ನು ಈಗಾಗಲೇ ಗಡಿಪಾರು ಮಾಡಲಾಗಿದೆ. ಕೆಲವು ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಹಾಗೂ ಕಳ್ಳತನ, ಮಾರಣಾಂತಿಕ ಹಲ್ಲೆಗಳಂತಹ 20 ಕೇಸುಗಳಿರುವ ಕಮಲನಗರದ ಓರ್ವ ವ್ಯಕ್ತಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ 1 ವರ್ಷದ ಅವಧಿಗಾಗಿ ಜೈಲಿಗೆ ಕಳಿಸಲಾಗುತ್ತಿದೆ ಎಂದು ಹೇಳಿದರು.ಜಿಪಂ ಡಿಎಸ್ ಮೇಲೆ ಹಲ್ಲೆ ಪ್ರಕರಣ ದಾಖಲು:
ಜಿಪಂ ಉಪ ಕಾರ್ಯದರ್ಶಿ ಸೂರ್ಯಕಾಂತ ಬಿರಾದರ್ ಮೇಲೆ ಮೇಲೆ ಪಿಡಿಒ ಜಾಧವ್ ಅವರು ಹಲ್ಲೆ ಮಾಡಿರುವ ಕುರಿತಾಗಿ ಬೀದರ್ ನಗರ ಪೊಲೀಸ್ ಠಾಣೆಯಲ್ಲಿ ಉಪ ಕಾರ್ಯದರ್ಶಿಗಳು ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ. ತನಿಖೆಯ ನಂತರವೇ ಸತ್ಯಾಸತ್ಯತೆ ಹೊರ ಬರಲಿದೆ ಎಂದರು.ಒಂದು ಕೋಟಿ ರು. ಮೌಲ್ಯದ ವಿರಳವಾದ ಅಂಬರಗ್ರಿಸ್ ವಶ:
ಮಹಾರಾಷ್ಟ್ರದ ಮೂಲದ 3 ಜನರು ಬ್ಲೂವೇಲ್ ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆ ಅವರನ್ನು ಬಂಧಿಸಿ ಆರೋಪಿಗಳಿಂದ 950 ಗ್ರಾಂ ಬ್ಲೂವೇಲ್ನ ವಿರಳವಾದ ಉತ್ತಮ ವಾಹಕವುಳ್ಳ ಉರುವಲು ಅಂಬರಗ್ರಿಸ್ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಅಂದಾಜು 1ಕೋಟಿ ರು. ಎಂದು ಅಂದಾಜಿಸಲಾಗಿದ್ದು ಅದನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ದ ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಬೀದರ ಜಿಲ್ಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್ಎಲ್ ಅವರು ಬಹುಮಾನ ಮತ್ತು ಪ್ರಶಂಸನಾ ಪತ್ರಗಳನ್ನು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಹೇಶ ಮೆಘಣ್ಣವರ, ಹುಮನಾಬಾದ ಡಿವೈಎಸ್ಪಿ ಜೆಎಸ್ ನ್ಯಾಮೇಗೌಡ, ಸಿಪಿಐ ಕೃಷ್ಣಪ್ಪ ಪಾಟೀಲ್, ಗುರು ಪಾಟೀಲ್, ಮಹೇಶ ಗೌಡ, ಪಿಎಸ್ಐ ಅಂಬರೀಶ ಸೇರಿದಂತೆ ಪೊಲೀಸ್ ಇಲಾಖೆಯ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.