ಸಾರಾಂಶ
ಸಿನಿಮಿಯ ಶೈಲಿಯಲ್ಲಿ ಖತರ್ನಾಕ್ ಕಳ್ಳನ ಬಂಧನ
ಕನ್ನಡಪ್ರಭ ವಾರ್ತೆ ಕೊರಟಗೆರೆಪಟ್ಟಣದ ವೃದ್ಧೆಯೊಬ್ಬರನ್ನು ಯಾಮಾರಿಸಿ 40 ಗ್ರಾಂ ಬಂಗಾರದ ಸರ ದೋಚಿದ್ದ ಕಳ್ಳನನ್ನು ಸಿನೀಮಯ ರೀತಿಯಲ್ಲಿ ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಮಂಜುನಾಥ್ ಅಲಿಯಾಸ್ ಹೊಟ್ಟೆ ಮಂಜ (46) ಬಂಧಿತ ಆರೋಪಿ. ಜುಲೈ 20ರಂದು ನಡೆದಿದ್ದ ಪ್ರಕರಣದಲ್ಲಿ ಆರೋಪಿ ಮಂಜುನಾಥ್ ಆದಿನ ಪಟ್ಟಣದ ಆಸ್ಪತ್ರೆಗೆ ಬಂದಿದ್ದ ಆಸ್ಪತ್ರೆಗೆ ಚಿಕ್ಕನಹಳ್ಳಿಯ ಗಿರಿಜಮ್ಮ (೭೬) ಅವರನ್ನು ಪರಿಚಯ ಮಾಡಿಕೊಂಡು ವೃದ್ದಾಪ್ಯವೇತನ ಮಾಡಿಕೊಡುವ ನೆಪದಲ್ಲಿ ಡಿಸಿಸಿ ಬ್ಯಾಂಕಿನ ಬಳಿಗೆ ಕರೆದೊಯ್ದು ಬಂಗಾರ ಸರ ನೋಡಿದರೆ ಕೆಲಸ ಆಗುವುದಿಲ್ಲ ಎಂದು ಹೇಳಿ ವೃದ್ದೆಯ ಕೊರಳಿನಲ್ಲಿದ್ದ ಬಂಗಾರದ ಸರ ಬಿಚ್ಚಿಸಿ ಬ್ಯಾಗಿನಲ್ಲಿ ಇಟ್ಟುಕೊಳ್ಳುವಂತೆ ಮಾಡಿ ನಂತರ ಅದನ್ನು ಎಗರಿಸಿ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮಂಜನ ಚಲನವಲನಗಳನ್ನು ಗಮನಿಸಿ ಆರೋಪಿ ಬೆನ್ನು ಹತ್ತಿದ್ದರು. ಅದರಂತೆ ಆರೋಪಿ ಬೆಂಗಳೂರಿನ ಸದಾಶಿವ ನಗರದ ಟ್ರಾಫಿಕ್ ಸಿಗ್ನಲ್ನಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಪೊಲೀಸ್ ಪೇದೆ ದೊಡ್ಡಲಿಂಗಯ್ಯ ಸಿನಿಮಿಯ ರೀತಿಯಲ್ಲಿ ಹಿಡಿದಿದ್ದಾರೆ. ಆ ಸಂದರ್ಭದಲ್ಲಿ ಆರೋಪಿ ಮಂಜುನಾಥ್ ಪೇದೆ ಮೇಲೆ ವಾಹನ ಹತ್ತಿಸಲು ಯತ್ನಿಸಿದ್ದಾನೆ. ಜೊತೆಗೆ ನೆರವಿಗೆ ಬಂದ ಮಹಿಳಾ ಎಎಸ್ಐ ಮೇಲೂ ಹಲ್ಲೆ ನಡೆಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೂ ಸಹ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯ ಮೇಲೆ 75 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಿಪಿಐ ಅನಿಲ್ ಮತ್ತು ಪಿಎಸೈ ಚೇತನ್ ನೇತೃತ್ವದಲ್ಲಿ ತನಿಖೆ ನಡೆದಿದ್ದು, ಈ ಕಾರ್ಯಾಚರಣೆಯಲ್ಲಿ ಎಎಸೈ ಗಂಗಾಧರಪ್ಪ, ಪೇದೆ ದೊಡ್ಡಲಿಂಗಯ್ಯ, ಮೋಹನ್, ಸಿದ್ದರಾಮ, ಪ್ರದೀಪ ಸೇರಿದಂತೆ ಇತರರು ಭಾಗಿಯಾಗಿದ್ದರು.