ಸಾರಾಂಶ
ಅಲೋಪತಿ ಔಷಧಿ ಮತ್ತು ನೋವು ನಿವಾರಕ ಮಾತ್ರೆಗಳನ್ನು ಪೋಲಿಸ್ ವಶಕ್ಕೆ ಪಡೆಯುತ್ತಿರುವುದು.
ಕನ್ನಡಪ್ರಭ ವಾರ್ತೆ ಹಲಗೂರು
ಅನಧಿಕೃತ ಕ್ಲಿನಿಕ್ ನಡೆಸುತ್ತಾ ವ್ಯಕ್ತಿ ಸಾವಿಗೆ ಕಾರಣವಾದ ಆರೋಪದ ಮೇಲೆ ನಕಲಿ ವೈದ್ಯನನ್ನು ಹಲಗೂರು ಪೊಲೀಸರು ಬಂಧಿಸಿದ್ದಾರೆ.ತಾಲೂಕಿನ ತೊರೆಕಾಡನಹಳ್ಳಿಯಲ್ಲಿ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದ ಕೃಷ್ಣಮೂರ್ತಿ ಹೆಗ್ಗಡೆ ಬಂಧಿತ ಆರೋಪಿ. ಯಾವುದೇ ಪರವಾನಿಗೆ ಇಲ್ಲದೆ ಕಳೆದ ಹಲವಾರು ವರ್ಷಗಳಿಂದ ಗ್ರಾಮದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಎನ್ನಲಾಗಿದೆ. ಕಳೆದ 2019 ರಲ್ಲಿ ದಡಮಹಳ್ಳಿ ಶಿವಲಿಂಗೇಗೌಡರಿಗೆ ಈತ ನೀಡಿದ ಚುಚ್ಚುಮದ್ದಿನಿಂದ ಕೀವುಪೂರಿತ ಗಾಯವಾಗಿ ಆತ ಮೃತಪಟ್ಟಿದ್ದರು.
ಮೃತನ ಕುಟುಂಬದವರು ನೀಡಿದ ದೂರಿನ ಮೇರೆಗೆ ಸದರಿ ನಕಲಿ ವೈದ್ಯನ ವಿರುದ್ಧ ಮೊಕದ್ದಮೆ ದಾಖಲಾಗಿತ್ತು. ಕ್ಲಿನಿಕ್ ಮೇಲೆ ಆಗ ದಾಳಿ ಮಾಡಿದ್ದ ಆರೋಗ್ಯಾಧಿಕಾರಿಗಳು ಸದರಿ ಕ್ಲಿನಿಕ್ಗೆ ಬೀಗ ಮುದ್ರೆ ಹಾಕಿದ್ದರಾದರೂ ಹಿಂಬಾಗಿಲ ಮೂಲಕ ಈ ಕ್ಲಿನಿಕ್ ನಡೆಸುತ್ತಿದ್ದರು. ಮೃತ ಶಿವಲಿಂಗೇಗೌಡರ ಮರಣೋತ್ತರ ಪರೀಕ್ಷೆ ವರದಿ ಬಂದಾಗ ಈ ವರದಿಯಲ್ಲಿ ಚುಚ್ಚು ಮದ್ದು ನೀಡಿದ್ದ ಜಾಗದಲ್ಲಿ ಉಂಟಾದ ಗಾಯ ಉಲ್ಬಣಿಸಿ ಆತ ಸಾವನ್ನಪ್ಪಿದ್ದಾನೆ ಎಂದು ವರದಿ ಬಂದಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ ತಿಳಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಕೃಷ್ಣಮೂರ್ತಿ ಹೆಗ್ಗಡೆ ಅವರ ಕ್ಲಿನಿಕ್ ಮೇಲೆ ಬುಧವಾರ ತಡರಾತ್ರಿ ಆರೋಗ್ಯಾಧಿಕಾರಿಗಳ ಸಮೇತ ದಾಳಿ ನಡೆಸಿರುವ ಹಲಗೂರು ಸಿಪಿಐ ಶ್ರೀಧರ್ ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಪಿ.ವೀರಭದ್ರಪ್ಪ, ಹಲಗೂರು ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಸ್.ಶ್ರೀಧರ್, ಪಿಎಸ್ಐ ಬಿ.ಮಹೇಂದ್ರ, ಗ್ರಾಮ ಲೆಕ್ಕಿಗರಾದ ಲತಾ, ಸೋಮಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.