ಸಾರಾಂಶ
ಹೊನ್ನಾವರ: ಒಂದು ವಿಶ್ವವಿದ್ಯಾಲಯ ಮಾಡುವ ಕಾರ್ಯ ಇಡುಗುಂಜಿ ಯಕ್ಷಗಾನ ಮೇಳ ಮತ್ತು ಶ್ರೀಮಯ ಕಲಾಕೇಂದ್ರ ಮಾಡಿ ಯಕ್ಷಗಾನವನ್ನು ವಿಶ್ವಗಾನವನ್ನಾಗಿ ಪರಿವರ್ತಿಸಿದೆ ಎಂದು ಅಂಕಣಕಾರ ರಾಜು ಅಡಕಳ್ಳಿ ಅಭಿಪ್ರಾಯಪಟ್ಟರು.
ತಾಲೂಕಿನ ಗುಣವಂತೆಯ ಕೆರಮನೆಯ ಶಂಭು ಹೆಗಡೆ ಬಯಲು ರಂಗಮಂದಿರದಲ್ಲಿ ಹದಿನಾಲ್ಕನೇ ರಾಷ್ಟ್ರೀಯ ನಾಟ್ಯೋತ್ಸವದ ತೃತೀಯ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.ಹೆಗ್ಗೋಡಿನಂಥ ಗ್ರಾಮೀಣ ಪ್ರದೇಶ ಸಾಂಸ್ಕೃತಿಕ ಕ್ರಿಯಾಶೀಲತೆಯನ್ನು ಉಳಿಸಿಕೊಂಡಂತೆ, ಕೆರೆಮನೆ ಈ ಪ್ರದೇಶವು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಿದೆ ಎಂದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ವಿಮರ್ಶಕ ವಿದ್ವಾನ್ ಗ.ನಾ. ಭಟ್ಟ ಮಾತನಾಡಿ, ಶ್ರೀಮಯ ಕಲಾ ಕೇಂದ್ರದ ಆವರಣಕ್ಕೆ ಅನನ್ಯತೆ ಹಾಗೂ ವಿಶೇಷತೆಯ ಆಕರ್ಷಣೆ ಇದೆ. ದೇಶದ ವಿವಿಧ ಭಾಗದಲ್ಲಿರುವ ಕಲಾ ಪ್ರಕಾರಗಳನ್ನು ಈ ದಿವ್ಯ ವೇದಿಕೆಯಲ್ಲಿ ಪ್ರದರ್ಶನಕ್ಕೆ ಅವಕಾಶ ಮಾಡಿ ದೇಶವೇ ಕೆರೆಮನೆಯನ್ನು ಸುತ್ತುವಂತೆ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು. ಸದಾ ರಂಗಭೂಮಿ ಚಿಂತನೆಯನ್ನು ಮಾಡುತ್ತಾ ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಶಂಭು ಹೆಗಡೆಯವರ ಬಗ್ಗೆ ಸಂಶೋಧನೆ ಆಗಬೇಕಾಗಿದೆ ಎಂದರು.ಸಾಹಿತಿಗಳು ಮತ್ತು ಹಿರಿಯ ಯಕ್ಷಗಾನ ಕಲಾವಿದ ಡಾ. ರಾಮಕೃಷ್ಣ ಗುಂದಿ, ಶಿಕ್ಷಣತಜ್ಞ ಪ್ರೊ. ಕೆ.ಇ. ರಾಧಾಕೃಷ್ಣ ಮತ್ತು ಸಾಹಿತಿ ಡಾ. ಗಜಾನಂದ್ ಶರ್ಮಾ ಹುಕ್ಕಲು ಅವರಿಗೆ "ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನ " ಮಾಡಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ರಾಮಕೃಷ್ಣ ಗುಂದಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ರಾಷ್ಟ್ರೀಯ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರುವುದು ಕಷ್ಟಸಾಧ್ಯ. ಆದರೂ ನಿರಂತರವಾಗಿ 14 ವರ್ಷಗಳ ಕಾಲ ಈ ಕಾರ್ಯಕ್ರಮ ನಡೆಯುತ್ತಿರುವುದು ಸಾರ್ಥಕ ಸಾಧನೆಯ ಮಾರ್ಗ ಎಂದರು.ಪ್ರೊ. ಕೆ.ಇ. ರಾಧಾಕೃಷ್ಣ ಪ್ರಶಸ್ತಿ ಸ್ವೀಕರಿಸಿ, ಸಾಮಾಜಿಕ ಮತ್ತು ರಾಜಕೀಯ ಪ್ರಭುತ್ವಗಳು ಸಂವೇದನೆಗಳನ್ನು ಕಳೆದುಕೊಂಡ ಈ ಪ್ರಸ್ತುತ ಸಂದರ್ಭದಲ್ಲಿ ಕೆರೆಮನೆ ಕುಟುಂಬಗಳು ಸ್ಥಾಪಿಸಿದ ಸಂಸ್ಥೆಗಳು ಸಾಂಸ್ಕೃತಿಕ ಸಂವೇದನೆಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿರುವುದು ವಿಶೇಷ ಎಂದರು.
ರಾಷ್ಟ್ರೀಯ ಸಂಮಾನ ಸ್ವೀಕರಿಸಿದ ಡಾ. ಗಜಾನನ ಶರ್ಮ ಮಾತನಾಡಿ, ಉತ್ತರ ಕನ್ನಡದಲ್ಲಿ ವಿದ್ವತ್ ಪರಂಪರೆಯ ನದಿ ಹರಿದಿದೆ. ರಾಣಿ ಚೆನ್ನಬೈರಾದೇವಿ ಎಲಿಜೆಬತ್ ರಾಣಿಗಿಂತ ಶ್ರೇಷ್ಠ ಇತಿಹಾಸವನ್ನು ದಾಖಲಿಸಿದ ನೆಲ ಉತ್ತರ ಕನ್ನಡ ಜಿಲ್ಲೆಗೆ ದಿವ್ಯ ಅಸ್ಮಿತೆ ಇದೆ. ಹಾಗೆಯೇ ದಿವ್ಯ ವಿಸ್ಮೃತಿಯೂ ಇದೆ ಎಂದರು.ಸಭಾ ಕಾರ್ಯಕ್ರಮದ ನಂತರ ಬೆಂಗಳೂರಿನ ನೂಪುರ ಸಂಸ್ಥೆ ಅವರಿಂದ ಅತ್ಯದ್ಭುತವಾಗಿ ಭರತನಾಟ್ಯ ಪ್ರಸ್ತುತಗೊಂಡಿತು. ಕಲಾ ಶ್ರೀ ಪಂಡಿತ್ ಮುದ್ದು ಮೋಹನ್ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಗಾಯನ ಪ್ರದರ್ಶಿಸಲ್ಪಟ್ಟಿತು. ತಬಲಾದಲ್ಲಿ ಗೋಪಾಲಕೃಷ್ಣ ಹೆಗಡೆ ಕಲಬಾಗ್ ಹಾಗೂ ಹಾರ್ಮೋನಿಯಂನಲ್ಲಿ ಭರತ್ ಹೆಗಡೆ ಸಾಥ್ ನೀಡಿದರು. ಅಂತಿಮವಾಗಿ ಕಿನ್ನರ ಮೇಳ ತುಮರಿ ಇವರಿಂದ ''''''''ಅನ್ಯಾಳ ಡೈರಿ'''''''' ಎಂಬ ನಾಟಕ ಪ್ರದರ್ಶನಗೊಂಡಿತು.