ಕಲೆ, ಸಾಹಿತ್ಯ, ಸಂಗೀತ ಜಾತ್ಯತೀತ ಪ್ರಕಾರ: ರಮೇಶ್ ಬೊಂಗಾಳೆ

| Published : Jan 01 2025, 12:02 AM IST

ಸಾರಾಂಶ

ಚಿಕ್ಕಮಗಳೂರು, ಜಗತ್ತಿನಲ್ಲಿ ಜಾತ್ಯತೀತ, ಧರ್ಮಾತೀತ ಹಾಗೂ ಕಾಲಾತೀತವಾಗಿರುವ ಪ್ರಕಾರವಿದ್ದರೆ ಅದು ಕಲೆ, ಸಾಹಿತ್ಯ, ಸಂಗೀತ ಮಾತ್ರ ಎಂದು ಸಾಹಿತಿ ಬಿ.ಎನ್.ರಮೇಶ್ ಬೊಂಗಾಳೆ ಹೇಳಿದರು.

ಡಾ.ಸಿ.ಅಶ್ವತ್ಥ್‌ ಜನ್ಮ ದಿನಾಚರಣೆಗೆ ‘ಅವತರಿಸು ಬಾ’ ಪೂರ್ವಿಗಾನ ಯಾನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಗತ್ತಿನಲ್ಲಿ ಜಾತ್ಯತೀತ, ಧರ್ಮಾತೀತ ಹಾಗೂ ಕಾಲಾತೀತವಾಗಿರುವ ಪ್ರಕಾರವಿದ್ದರೆ ಅದು ಕಲೆ, ಸಾಹಿತ್ಯ, ಸಂಗೀತ ಮಾತ್ರ ಎಂದು ಸಾಹಿತಿ ಬಿ.ಎನ್.ರಮೇಶ್ ಬೊಂಗಾಳೆ ಹೇಳಿದರು.

ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ ಹಾಗೂ ಮಲೆನಾಡು ವಿದ್ಯಾಸಂಸ್ಥೆ ಆಶ್ರಯದಲ್ಲಿ ನಗರದ ಎಂಇಎಸ್ ಸಭಾಂಗಣದಲ್ಲಿ ಡಾ.ಸಿ.ಅಶ್ವತ್ಥ್‌ ಜನ್ಮ ದಿನಾಚರಣೆ ಅಂಗವಾಗಿ ‘ಅವತರಿಸು ಬಾ’ ಪೂರ್ವಿಗಾನ ಯಾನದ 103ರ ಸರಣಿ ಕಾವ್ಯ ಗಾಯನ ಕಾರ್ಯಕ್ರಮ ಉದ್ಘಾಟನೆಯಲ್ಲಿ ನುಡಿನಮನ ಸಲ್ಲಿಸಿದರು.

ಸಂಗೀತ ಕಲೆಯನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಸಂಗೀತದ ಕೃತಿ ಕರ್ತೃಗಳಾದ ಕವಿಗಳನ್ನು ಅಮರರನ್ನಾಗಿ ಮಾಡಿದ ಮೇರು ದಿಗ್ಗಜ ರಲ್ಲಿ ಡಾ.ಸಿ.ಅಶ್ವತ್ಥ್ ಕೂಡ ಒಬ್ಬರು. ಸಿ.ಅಶ್ವತ್ಥ್ ಗಾಯಕರು ಮಾತ್ರ ಆಗಿರಲಿಲ್ಲ. ರಾಗ ಸಂಯೋಜಕ, ಸಂಗೀತ ನಿರ್ದೇಶಕ, ಮೇಲಾಗಿ ಓರ್ವ ಸರಳ, ಸಜ್ಜನಿಕೆಯ ವ್ಯಕ್ತಿ ಎಂದರು.

ಕಷ್ಟಕರವಾಗದ್ದ ಸಾಹಿತ್ಯವನ್ನು ಇಷ್ಟಪಟ್ಟು ಅದಕ್ಕೆ ಯಾವ ನಷ್ಟವನ್ನೂ ಉಂಟು ಮಾಡದೆ ಸ್ಪಷ್ಟವಾಗಿ ಅರ್ಥವಾಗುವಂತೆ ಸಮಾಜಕ್ಕೆ ಕೊಟ್ಟವರು ಡಾ.ಸಿ. ಅಶ್ವತ್ಥ್ ತತ್ತ್ವ ಪದಗಳಿಗೆ ರಾಗ ಸಂಯೋಜನೆ ಮಾಡಿ ಸಾಮಾಜೀಕರಣಗೊಳಿಸುವುದು ಅದು ಬಹಳ ಕ್ಲಿಷ್ಟಕರ ಕೆಲಸ. ಇಂದಿಗೂ ಶಿಶುನಾಳ ಷರೀಫರು ನಮ್ಮ ಮಾನಸದಲ್ಲಿ ಶಾಶ್ವತವಾಗಿ ನೆಲೆಗೊಂಡಿರುವುದಕ್ಕೆ ಕಾರಣರಾದ ದಿಗ್ಗಜರಲ್ಲಿ ಸಿ.ಅಶ್ವತ್ಥ್‌ ಸಹ ಒಬ್ಬರು ಎಂದು ಹೇಳಿದರು.

ಕೆ.ಎಸ್.ನರಸಿಂಹಸ್ವಾಮಿಯನ್ನು ಅಮರವಾಗಿಸಿದ ಮೈಸೂರು ಮಲ್ಲಿಗೆ, ನಾಗಮಂಡಲದ ಹಾಡುಗಳಿರಬಹುದು ರಾಗ ಸಂಯೋಜಿಸಿ ನಮಗೆ ನೀಡಿದ ಕೀರ್ತಿ ಅಶ್ವತ್ಥ್‌ ಗೆ ಸಲ್ಲುತ್ತದೆ. ಉಸಿರು ನಿಲ್ಲುವ ಮುನ್ನ ಹೆಸರು ನಿಲ್ಲುವ ಕೆಲಸ ಮಾಡು ಎನ್ನುವ ಮಾತಿದೆ. ಸಮಾಜಕ್ಕೆ ಪಾರಮಾರ್ಥಿಕ ವಾಗಿ ಅರ್ಪಿಪಿಸಿಕೊಂಡಾಗ ಮಾತ್ರ ಅದು ಸಾಧ್ಯವಾಗುತ್ತದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಮಲೆನಾಡು ವಿದ್ಯಾಸಂಸ್ಥೆ ಉಪಾಧ್ಯಕ್ಷೆ ರಾಧ ಸುಂದರೇಶ್ ಮಾತನಾಡಿ, ಕೊಟ್ಟು ಹೋಗು ಬಿಟ್ಟು ಹೋಗು ಎನ್ನುವಂತೆ ಮುಂದಿನ ಸಂಗೀತದಲ್ಲಿ ಸಾಧನೆ ಮಾಡಿದ ಮಹನೀಯರು ಅವುಗಳನ್ನು ಪೀಳಿಗೆಗೆ ಉಳಿಸಿ ಹೋಗಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು.ಮಕ್ಕಳು ದುಶ್ಚಟಗಳಿಂದ ದೂರವಾಗಿ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ಇದ್ದು ಸತ್ತಂಗೆ ಇರಬಾರದು. ಸತ್ತು ಬದುಕುವ ಹಾಗೆ ಇರಬೇಕು. ಈ ನಿಟ್ಟಿನಲ್ಲಿ ಇರುವಾಗ ಏನಾದರೂ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ನಂತರ ಗಾಯಕ ಎಂ.ಎಸ್.ಸುಧೀರ್ ಸಾರಥ್ಯದಲ್ಲಿ ನಡೆದ ಗಾಯನ ಕಾರ್ಯಕ್ರಮದಲ್ಲಿ ಗಾಯಕರಾದ ರೂಪಾ ಅಶ್ವಿನ್, ಚೇತನ್‌ ರಾಮ್, ಪ್ರಣಮ್ಯ ಕಶ್ಯಪ್, ಪೃಥ್ವಿಶ್ರೀ, ಡಾ.ಶಿಲಾಲಿ, ಮಾನ್ಯ ಭಟ್, ಕೆ.ಎಸ್‌. ಚಿನ್ಮಯಿ, ಮಾನ್ಯತ ಎಸ್.ಬಾಗಮನೆ, ಸ್ವೇಚಿತ್‌ ಅವರು ಸಿ.ಅಶ್ವತ್ಥ್ ಗೀತೆಗಳಿಗೆ ಧ್ವನಿಯಾಗಿ ರಂಜಿಸಿದರು.ಅಧ್ಯಕ್ಷತೆ ವಹಿಸಿದ್ದ ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್‌ ದೊಡ್ಡಯ್ಯ, ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್‌ ಅಧ್ಯಕ್ಷ ಎಂ.ಎಸ್.ಸುಧೀರ್, ಸುಮಾ ಪ್ರಸಾದ್‌ , ರೂಪಾ ನಾಯ್ಕ್ ಇತರರು ಇದ್ದರು.

31 ಕೆಸಿಕೆಎಂ 4

ಚಿಕ್ಕಮಗಳೂರಿನ ಎಂಇಎಸ್‌ ಸಭಾಂಗಣದಲ್ಲಿ ಡಾ.ಸಿ.ಅಶ್ವತ್ಥ್‌ರವರ ಜನ್ಮ ದಿನಾಚರಣೆ ಅಂಗವಾಗಿ ‘ಅವತರಿಸು ಬಾ’ ಪೂರ್ವಿಗಾನ ಯಾನದ 103ರ ಸರಣಿ ಕಾವ್ಯ ಗಾಯನ ಕಾರ್ಯಕ್ರಮವನ್ನು ಮಲೆನಾಡು ವಿದ್ಯಾಸಂಸ್ಥೆ ಉಪಾಧ್ಯಕ್ಷೆ ರಾಧ ಸುಂದರೇಶ್ ಉದ್ಘಾಟಿಸಿದರು.