ಹಿಂದೆ‌ ಒಂದು ಗದ್ದೆಯಲ್ಲಿ ರಂಗಸ್ಥಳ ಹಾಗೂ ಹಿಂದಿನ ಮತ್ತೊಂದು ಗದ್ದೆಯಲ್ಲಿ ಚೌಕಿ ನಿರ್ಮಾಣವಾಗುತ್ತಿತ್ತು. ದೇವರನ್ನು ಚೌಕಿಯಲ್ಲಿ ಜನಪದೀಯವಾಗಿಯೇ ಆರಾಧನೆ ಮಾಡುವ ಕ್ರಮಗಳಿದ್ದವು. ಆರಾಧನಾ ಕೇಂದ್ರವೂ ಆಗಿದ್ದ ಚೌಕಿಯು ಯಕ್ಷಗಾನ ಕಲಿಕಾಸಕ್ತರಿಗೆ ರಂಗಶಾಲೆಯೂ ಆಗಿತ್ತು ಎಂದು‌ ಯಕ್ಷಗಾನ ಗುರುಗಳು ಹಾಗೂ ಹಿರಿಯ ಕಲಾವಿದ ದಿವಾಣ ಶಿವಶಂಕರ ಭಟ್ ಅವರು ಹೇಳಿದರು.

ಉಳ್ಳಾಲ: ಹಿಂದೆ‌ ಒಂದು ಗದ್ದೆಯಲ್ಲಿ ರಂಗಸ್ಥಳ ಹಾಗೂ ಹಿಂದಿನ ಮತ್ತೊಂದು ಗದ್ದೆಯಲ್ಲಿ ಚೌಕಿ ನಿರ್ಮಾಣವಾಗುತ್ತಿತ್ತು. ದೇವರನ್ನು ಚೌಕಿಯಲ್ಲಿ ಜನಪದೀಯವಾಗಿಯೇ ಆರಾಧನೆ ಮಾಡುವ ಕ್ರಮಗಳಿದ್ದವು. ಆರಾಧನಾ ಕೇಂದ್ರವೂ ಆಗಿದ್ದ ಚೌಕಿಯು ಯಕ್ಷಗಾನ ಕಲಿಕಾಸಕ್ತರಿಗೆ ರಂಗಶಾಲೆಯೂ ಆಗಿತ್ತು ಎಂದು‌ ಯಕ್ಷಗಾನ ಗುರುಗಳು ಹಾಗೂ ಹಿರಿಯ ಕಲಾವಿದ ದಿವಾಣ ಶಿವಶಂಕರ ಭಟ್ ಅವರು ಹೇಳಿದರು.

ಅವರು ಮಂಗಳೂರು ವಿವಿಯ ಡಾ.ಪಿ.ದಯಾನಂದ ಪೈ ಮತ್ತು ಪಿ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಮಂಗಳೂರಿನ ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ಆಶ್ರಯದಲ್ಲಿ ಬುಧವಾರ ನಡೆದ ಚೌಕಿ: ಸ್ವರೂಪ ಮತ್ತು ವೈಶಿಷ್ಟ್ಯ ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ವಿಚಾರಗೋಷ್ಠಿಯಲ್ಲಿ ‘ಚೌಕಿಯ ಪರಂಪರೆ ಮತ್ತು ವರ್ತಮಾನ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.

ವಿಧೂಷಕರಿಗೆ ಅಡ್ಡ ಚೌಕಿ ಯಾಕೆಂದರೆ ಭಾಗವತರು ರಂಗಕ್ಕೆ ಹೋದ ನಂತರ ವಿದೂಷಕರೇ ಚೌಕಿಗೆ ಪ್ರಧಾನರಾಗಿದ್ದರು. ವಿಧೂಷಕರು ಚೌಕಿ ಪೂಜೆಯನ್ನೂ ಮಾಡುತ್ತಿರುವುದನ್ನು ನಾನು ಗಮನಿಸಿದ್ದೇನೆ. ಆದರೆ ಈಗ ಚೌಕಿಯಲ್ಲಿ ಅನೇಕ ಪಲ್ಲಟಗಳಾಗಿವೆ ಎಂದು ಹೇಳಿದರು.

ಹಿರಿಯ ಹಾಸ್ಯ ಕಲಾವಿದ ರವಿಶಂಕರ್ ವಳಕುಂಜ ಅವರು ‘ಚೌಕಿಯ ಸ್ವಾರಸ್ಯಗಳು’ ಎಂಬ ವಿಷಯದಲ್ಲಿ ಮಾತನಾಡಿ, ಧಾರ್ಮಿಕ ಮಹತ್ವವುಳ್ಳ ಕೇಂದ್ರವಾಗಿರುವ ಚೌಕಿಯಲ್ಲಿ ಅನೇ‌ಕ ಸ್ವಾರಸ್ಯಕರ ಸಂಗತಿಗಳೂ ಹುಟ್ಟಿಕೊಳ್ಳುತ್ತವೆ. ಓರ್ವ ಕಲಾವಿದನಾದವನಿಗೆ ಪ್ರಸಂಗದ ಯಶಸ್ಸಿನ ಜವಬ್ಧಾರಿಯೂ ಇರಬೇಕು. ಆತ ತನ್ನ ಹೊಣೆಯಿಂದ ನುಣುಚಿಕೊಂಡರೆ ಇಡೀ ಪ್ರಸಂಗವೇ ಹಾಳಾಗುತ್ತದೆ ಎಂದರು.

ಬಳಿಕ ಸಂಶೋಧನಾ ಪ್ರಬಂಧ ಮಂಡನಾಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಣಿಪಾಲ ಮಾಹೆ ವಿವಿಯ ಪ್ರಾಧ್ಯಾಪಕ ಡಾ.ಪೃಥ್ವಿರಾಜ್‌ ಕವತ್ತಾರು ಅವರು, ಯಕ್ಷಗಾನ ಅದೆಷ್ಟೋ ಮಂದಿಗೆ ಬದುಕುಕೊಟ್ಟಿರುವ ಕಲೆಯಾಗಿದೆ. ಈ ಕಲಾಪರಂಪರೆಯು ಹಿರಿಯರ ಮಾರ್ಗದರ್ಶನದೊಂದಿಗೆ ಮುನ್ನಡೆಯುತ್ತಾ ಬಂದ ಕಲೆಯಾಗಿದೆ.‌ ಈ ವಿಚಾರಸಂಕಿರಣ ಚೌಕಿಯ ಅನೇಕ‌ ಸಂಗತಿಗಳನ್ನು ತೆರದಿಟ್ಟಿದೆ ಎಂದರು.

ಸಂಶೋಧನಾ ಪ್ರಬಂಧ ಮಂಡನಾಗೋಷ್ಠಿಯಲ್ಲಿ ರವಿ ಅಲೆವೂರಾಯ, ಸುನೀಲ್ ಪಲ್ಲಮಜಲು, ಡಾ.ಶಿವಕುಮಾರ್ ಅಳಗೋಡು, ದೀವಿತ್ ಪೆರಾಡಿ, ವಿದುಷಿ ಸುಮಂಗಳಾ ರತ್ನಾಕರ ರಾವ್, ಡಾ.ಶ್ರೀದೇವಿ ಕಲ್ಲಡ್ಕ, ರಾಜಶ್ರೀ ರೈ ಪೆರ್ಲ, ಸಾಯಿಸುಮ ನಾವಡ, ಶೃತಿ ಬಲ್ನಾಡು, ಲಿಖಿತ್, ಅಮೋಘ ಶಂಕರ್ ಮೊದಲಾದವರು ಪ್ರಬಂಧ ಮಂಡಿಸಿದರು.

ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೆಶಕರಾದ ಡಾ.ಧನಂಜಯ ಕುಂಬ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್ ಎಸ್ ಅಧಿಕಾರಿ ಭಾಗ್ಯಶ್ರೀ ಹಾಗೂ ಡಾ.ಸತೀಶ್ ಕೊಣಾಜೆ ಸಂಶೋಧನಾ‌ ಮಂಡನಾಗೋಷ್ಠಿ ನಿರ್ವಹಿಸಿದರು. ಉಪಪ್ರಾಂಶುಪಾಲೆ ವಿದ್ಯಾಲಕ್ಷ್ಮೀ ಶೆಟ್ಟಿ ವಂದಿಸಿದರು.