ಒನಕೆ ಓಬವ್ವ ಉತ್ಸವದ ಬೃಹತ್ ವೇದಿಕೆಯಲ್ಲಿ ಎರಡು ದಿನಗಳ ಉತ್ಸವದಲ್ಲಿ ಓಬವ್ವ ಮೂರ್ತಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಸಮಾರೋಪ ಸಮಾರಂಭಕ್ಕೆ ತೆರೆ ಎಳೆಯಲಾಯಿತು.

ಕೂಡ್ಲಿಗಿ: ಗುಡೇಕೋಟೆಯ ಒನಕೆ ಓಬವ್ವಳ ಉತ್ಸವದಲ್ಲಿ ಕಲಾವಿದರಿಗೆ ಸರಿಯಾಗಿ ಅವಕಾಶ ಸಿಗದಿರುವುದು ನನಗೆ ಬೇಸರ ತಂದಿತು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಖೇದ ವ್ಯಕ್ತಪಡಿಸಿದರು.

ಒನಕೆ ಓಬವ್ವ ಉತ್ಸವದ ಬೃಹತ್ ವೇದಿಕೆಯಲ್ಲಿ ಎರಡು ದಿನಗಳ ಉತ್ಸವದಲ್ಲಿ ಓಬವ್ವ ಮೂರ್ತಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಸಮಾರೋಪ ಸಮಾರಂಭಕ್ಕೆ ತೆರೆ ಎಳೆಯಲಾಯಿತು. ಈ ವೇಳೆ ಮಾತನಾಡಿದ ಅವರು, ಸಮಯದ ಕೊರತೆ ನೀಗಿಸಲು ಮುಂದಿನ ವರ್ಷದಲ್ಲಿ ಹಂಪಿ ಉತ್ಸವದ ಮಾದರಿಯಲ್ಲಿ ಎರಡು ವೇದಿಕೆಗಳು ಆಗಬೇಕು. ಮೂರು ದಿನಗಳ ಕಾಲ ಉತ್ಸವ ನಡೆಯಬೇಕು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಹೇಳಿದರು.

ಮುಂದಿನ ದಿನಗಳಲ್ಲಿ ಒನಕೆ ಓಬವ್ವ ಉತ್ಸವದಲ್ಲಿ ಕಲಾವಿದರನ್ನು ನಿರಾಶೆ ಮಾಡದಂತೆ ಅವರಿಗೆ ಸಮಯಾವಕಾಶ ನೀಡುವಂತಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ಮುಂಬರುವ ದಿನಗಳಲ್ಲಿ ಎರಡು ವೇದಿಕೆಯ ಮೂಲಕ ಎಲ್ಲ ಕಲಾವಿದರಿಗೆ ಅವಕಾಶ ನೀಡುವ ಪ್ರಯತ್ನ ಮಾಡಲಾಗುವುದು. ಉತ್ಸವದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಲು ಸಾಧ್ಯವಾಗಿಲ್ಲ. ಮುಂದಿನ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ, ಸಮಯ ಮೀಸಲಿಡುತ್ತೇನೆ. ಉತ್ಸವ ನೆಪದಲ್ಲಿ ಗ್ರಾಮಾಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸಲಾಗುವುದು. ಈ ಬಾರಿಯಂತೆ ಮುಂದಿನ ಸಲವು ಅಗತ್ಯ ಅನುದಾನ ತಂದು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಕೆಲಸ ಮಾಡಲಾಗುವುದು ಎಂದರು.

ಕಾರ್ಮಿಕರಿಗೆ ಗೌರವ: ಎರಡು ದಿನಗಳ ಉತ್ಸವದಲ್ಲಿ ನಿರಂತರವಾಗಿ ಕೆಲಸ ಮಾಡಿದ ತಾಲೂಕಿನ ಎಲ್ಲ ಗ್ರಾಪಂ ಕಾರ್ಮಿಕ ಸಿಬ್ಬಂದಿ ಸೇವೆ ಗುರುತಿಸಿ ಗೌರವಿಸಲಾಯಿತು. ಅಡಿಷನಲ್ ಎಸ್ಪಿ ಮಂಜುನಾಥ, ಸಹಾಯಕ ಆಯುಕ್ತ ವಿವೇಕಾನಂದ, ತಾಪಂ ಇಒ ನರಸಪ್ಪ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಬಿಇಒ ಮೈಲೇಶ್ ಬೇವೂರ್, ತಾಲೂಕು ಬಿಸಿಎಂ ಅಧಿಕಾರಿ ಶ್ಯಾಮಪ್ಪ, ಹಂಪಿ-ಕನ್ನಡ ವಿವಿ ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ, ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ತಹಸೀಲ್ದಾರ್ ವಿ.ಕೆ. ನೇತ್ರಾವತಿ, ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ವೆಂಕಟೇಶ್, ಸೂರ್ಯಪಾಪಣ್ಣ, ಬಣವಿಕಲ್ಲು ಯರ್ರಿಸ್ವಾಮಿ, ಟಿ.ಜಿ..ಮಲ್ಲಿಕಾರ್ಜುನ ಗೌಡ , ಮರುಳಸಿದ್ದನಗೌಡ , ದಿನ್ನೆ ಮಲ್ಲಿಕಾರ್ಜುನ, ಗುಡೇಕೋಟೆ ಹುಲಿರಾಜಪ್ಪ, ಗ್ಯಾರಂಟಿ ಸಮಿತಿ ಅಧ್ಯಕ್ಷ ಜಿಲಾನ್, ಎನ್.ಟಿ.ತಮ್ಮಣ್ಣ, ಎಇಇ ನಾಗನಗೌಡ, ಚೋರನೂರು ಅಡಿವೆಪ್ಪ ಇದ್ದರು.