ಸಾರಾಂಶ
ರೋಣ: ಭಾರತೀಯ ಸಂಸ್ಕೃತಿಯಲ್ಲಿ ಆರ್ಯುವೇದಕ್ಕೆ ಮಹತ್ವದ ಸ್ಥಾನವಿದ್ದು, ಆರೋಗ್ಯ ಸುಧಾರಿಸುವಲ್ಲಿ ಆರ್ಯುವೇದ ಸಹ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಐ.ಬಿ. ಕೊಟ್ಟೂರಶೆಟ್ಟಿ ಹೇಳಿದರು.
ರೋಣ ನಗರದ ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಆರ್ಯುವೇದ ದಿನಾಚರಣೆ ಹಾಗೂ ಧನ್ವಂತರಿ ಜಯಂತಿ ಆಚರಣೆಯಲ್ಲಿ ಮಾತನಾಡಿದರು.ಇತರೇ ಯಾವುದೇ ವೃತ್ತಿಯಲ್ಲಿ ಸಿಗದ ಮಹತ್ವದ ಅಂಶ ಆಯುರ್ವೇದ ವೈದ್ಯಕೀಯ ಕೋರ್ಸ್ನಲ್ಲಿ ಹೇಳಲಾಗಿದೆ. ಈ ಅಂಶಗಳ ಕಡೆಗೆ ವೈದ್ಯರು ಸದಾ ಗಮನ ಹರಿಸಬೇಕಿದೆ. ಇದರ ಜತೆಗೆ ರೋಗಿಗಳಿಗೆ ಆರ್ಯುವೇದ ವೈದ್ಯಕೀಯ ಕುರಿತು ಮನವರಿಕೆ ಮಾಡಿಕೊಡಬೇಕಿದೆ ಎಂದರು.
ಭಾರತೀಯ ಸಂಸ್ಕೃತಿಯಲ್ಲಿ ಆರ್ಯುವೇದಕ್ಕೆ, ಧನ್ವಂತರಿಗೆ ವಿಶೇಷವಾದ ಸ್ಥಾನವಿದೆ. ಈ ಪುರಾತನ ವೇದ ಗ್ರಂಥಗಳಲ್ಲಿ ವಿಷ್ಣುವಿನ ಅವತಾರವಾದ ಧನ್ವಂತರಿ ದೇವರನ್ನು ಆಯುರ್ವೇದ ಶಾಸ್ತ್ರದ ದೇವರು ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ದೇವತೆಗಳ ವೈದ್ಯ ಮತ್ತು ಸಕಲ ಜೀವರಾಶಿಗಳಿಗೆ ಆರೋಗ್ಯದ ವರ ನೀಡುವ ಭಗವಾನ್ ಧನ್ವಂತರಿಯ ಆರಾಧನೆ ಭಾರತೀಯರು ಇಂದಿಗೂ ಆಚರಣೆ ಮಾಡುತ್ತಾರೆ ಎಂದು ಮಾಹಿತಿ ನೀಡಿದರು.ಪ್ರಾಧ್ಯಾಪಕ ಡಾ.ಎಸ್. ಬಿ.ಬನಿ ಮಾತನಾಡಿ, ರೋಗ ಬರದಂತೆ ಮುಂಜಾಗ್ರತೆ ಕೈಗೊಂಡು ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ನಿತ್ಯ ಜೀವನ ಸುಂದರವಾಗಿ ರೂಪಿಸಿಕೊಳ್ಳಬೇಕಾದರೆ ಆರೋಗ್ಯ ಎನ್ನುವುದು ಬಹಳ ಮುಖ್ಯವಾಗಿದೆ. ಪ್ರಾಕೃತಿಕವಾಗಿ ಸಿಗುವ ಆರ್ಯುವೇದ ಚಿಕಿತ್ಸೆಗೆ ಮಹತ್ವ ನೀಡಬೇಕಿದೆ ಎಂದರು.
ಪ್ರಾಧ್ಯಾಪಕ ಡಾ.ಪಿ.ಬಿ.ತುರ್ಬೇನ್ ಮಾತನಾಡಿ, ಆಯುರ್ವೇದದ ಚಿಕಿತ್ಸಾ ವ್ಯವಸ್ಥೆಯು ಆರೋಗ್ಯಕ್ಕೆ ಅನುಗುಣವಾದ ಉತ್ತಮ ಆರೋಗ್ಯ ಸಂಪತ್ತನ್ನು ನೀಡುತ್ತದೆ. ಆಯುರ್ವೇದವು ಆರೋಗ್ಯ ಮತ್ತು ಕ್ಷೇಮವು ಮನಸ್ಸು,ದೇಹ, ಚೈತನ್ಯ ಮತ್ತು ಪರಿಸರದ ನಡುವಿನ ಸೂಕ್ಷ್ಮ ಸಮತೋಲನ ಅವಲಂಬಿಸಿರುತ್ತದೆ ಎಂಬ ನಂಬಿಕೆ ಆಧರಿಸಿದೆ. ಆಯುರ್ವೇದ ಔಷಧದ ಮುಖ್ಯ ಗುರಿಯು ಉತ್ತಮ ಆರೋಗ್ಯ ಉತ್ತೇಜಿಸುವುದಾಗಿದೆ ಎಂದರು.ಪ್ರಾಧ್ಯಾಪಕ ಡಾ.ಎ.ಜಿ.ಕೇರಿ ಮಾತನಾಡಿ, ಆರ್ಯುವೇದದ ದೇವರು ಎಂದು ಕರೆಯಲ್ಪಡುವ ಧನ್ವಂತರಿಯು ಆರೋಗ್ಯ ಮತ್ತು ಚೈತನ್ಯ ಬಯಸುವವರ ಹೃದಯದಲ್ಲಿ ವಿಶೇಷ ಸ್ಥಾನ ಹೊಂದಿದೆ. ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಜನರು ತಮ್ಮ ನಿತ್ಯದ ಬದುಕಿನಲ್ಲಿ ಇಂದಿಗೂ ಪುರಾತನ ಆರ್ಯುವೇದ ಪದ್ಧತಿ ರೂಢಿಯಲ್ಲಿ ಇಟ್ಟುಕೊಂಡಿದ್ದಾರೆ ಎಂದರು.
ಈ ವೇಳೆ ನರೇಗಲ್ ಪಟ್ಟಣದ ಸಂಜೀವಿನಿ ಕ್ಲಿನಿಕ್ ಆರಂಭಿಸಿ ಹಾಗೂ ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿ ಸೇವೆ 25ವರ್ಷಗಳನ್ನು ಪೂರೈಸಿ ಈಗಲೂ ಸೇವೆಯಲ್ಲಿ ನಿರತರಾಗಿರುವ ವೈದ್ಯ ಡಾ.ಶಿವಯ್ಯ ಎ.ರೋಣದ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.ಡಾ.ಎಂ.ಎಂ.ಕಟ್ಟಿಮನಿ, ಡಾ.ಜಿ.ಐ.ಹಿರೇಮಠ, ಎಸ್.ಎನ್.ಕುಷ್ಟಗಿ, ಡಾ.ಎಸ್.ಐ. ಬಾರಕೇರ, ಡಾ.ಬಿ.ವಿ.ಪೊಲೀಸ್ಪಾಟೀಲ, ದ್ರವ್ಯಗುಣ ವಿಜ್ಞಾನದ ಮುಖ್ಯಸ್ಥ ಡಾ.ಶಿವಯ್ಯ ಎ.ರೋಣದ, ಡಾ. ವಿನೋದ, ಡಾ. ನಾಗರಾಜ, ಡಾ. ಚಪ್ಪನಮಠ, ಡಾ.ರಾಕೇಶ ಇದ್ದರು. ಡಾ. ಎಸ್.ಎಸ್. ಬನಿ ನಿರೂಪಿಸಿದರು, ಡಾ.ಆನಂದ ಎಚ್. ಕೇರಿ ವಂದಿಸಿದರು.