ಸಾರಾಂಶ
₹30 ಲಕ್ಷ ವೆಚ್ಚದ ಬೇಲಿ ನಿರ್ಮಾಣ ಕಾಮಗಾರಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಶಂಕುಸ್ಥಾಪನೆ ನೇರವೆರಸಿದರು.
ಕನ್ನಡಪ್ರಭ ವಾರ್ತೆ ರಿಪ್ಪನ್ಪೇಟೆ
ಖಾಸಗಿಯವರು ಒತ್ತುವರಿ ಮಾಡಬಾರದು ಎಂಬ ಉದ್ದೇಶದಿಂದಾಗಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಾಗಿ ಕಾಯ್ದಿರಿಸಲಾದ 5 ಎಕರೆ ಜಾಗವನ್ನು ಪೋಡಿ ಮಾಡುವ ಮೂಲಕ, ಬೇಲಿ ಆಳವಡಿಸಿ ಮುಂದಿನ ದಿನಗಳಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಡಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸುವ ಮೂಲಕ ಈ ಆಸ್ಪತ್ರೆಯನ್ನು ಸಮುದಾಯ ಅರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆರಿಸಲಾಗುವುದು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.ರಿಪ್ಪನ್ಪೇಟೆಯ ಹೊಸನಗರ ರಸ್ತೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಾಗಿ ಕಾಯ್ದಿರಿಸಲಾಗಿರುವ ಜಾಗದಲ್ಲಿ ಸರ್ಕಾರದಿಂದ ₹30 ಲಕ್ಷ ವೆಚ್ಚದ ಬೇಲಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೇರವೆರಸಿ ಮಾತನಾಡಿ ಅವರು ಮಾತನಾಡಿದರು.
ಎಡೆಹಳ್ಳಿಯಿಂದ ರಿಪ್ಪನ್ಪೇಟೆಗೆ ಸುಮಾರು 8 ಕಿಮೀ ರಾಜ್ಯ ಹೆದ್ದಾರಿ ಅಗಲೀಕರಣಗೊಳಿಸಿ ರಸ್ತೆ ನಿರ್ಮಿಸಲು ₹20 ಕೋಟಿ ಹಣ ಬಿಡುಗಡೆಯಾಗಿದ್ದು, ಟೆಂಡರ್ ಸಹ ಮುಗಿದಿದೆ. ಅತೀ ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು. ಅಲ್ಲದೆ ಹೊಸನಗರ-ಶಿವಮೊಗ್ಗ ಸಂಪರ್ಕದ ವಿನಾಯಕ ವೃತ್ತದಲ್ಲಿದ್ದ ತಲಾ 1 ಕಿಮೀ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಈಗಾಗಲೇ ಸರ್ಕಾರಕ್ಕೆ ಪ್ರಾಸ್ತಾವನೆ ಸಲ್ಲಿಸಲಾಗಿದ್ದು, ವಿನಾಯಕ ವೃತ್ತದಲ್ಲಿ ಹೈಮಾಸ್ಕ ದೀಪವನ್ನು ಅಳವಡಿಸುವುದಾಗಿ ತಿಳಿಸಿದರು.ಉಳಿದಂತೆ ಅಭಿವೃದ್ಧಿ ಕಾಮಗಾರಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತರುವುದಾಗಿ ತಿಳಿಸಿ, ಈಗಾಗಲೇ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಸುಮಾರು 94 ದೇವಸ್ಥಾನಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ದೇವಸ್ಥಾನ ವ್ಯವಸ್ಥಾಪನಾ ಸಮಿತಿಯವರು ಈ ಅನುದಾನದಡಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯವನ್ನು ಮಾಡಿಸಿಕೊಳ್ಳುವಂತೆ ಸೂಚಿಸಿದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ, ಜಿಪಂ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್ವಿ ಈಶ್ವರಪ್ಪಗೌಡ, ಪರಮೇಶ, ಗ್ರಾಪಂಚಾಯಿತಿ ಸದಸ್ಯರಾದ ಎನ್.ಚಂದ್ರೇಶ್, ಮಧುಸೂದನ್, ಮಂಜುಳ, ಜಿ.ಡಿ. ಮಲ್ಲಿಕಾರ್ಜುನ, ಗಣಪತಿ ಗವಟೂರು, ಅನುಪಮ ರಾಕೇಶ್, ಪ್ರಕಾಶಪಾಲೇಕರ್, ಹಾಲಸ್ವಾಮಿಗೌಡರು ಬೆಳಕೋಡು, ದಿವಾಕರ್, ರಾಜುಗೌಡ, ಉಲ್ಲಾಸ ತೆಂಕೋಲ, ಮಹ್ಮದ್ ಷರೀಫ್, ಶ್ರೀಧರ ಸೇರಿ ಇತರರು ಇದ್ದರು.