ಸಾರಾಂಶ
ಕೆಕೆಜಿಬಿವಿ ಬಾಲಕಿಯರ ವಸತಿನಿಲಯದಲ್ಲಿ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ತೋಡಿಕೊಳ್ಳಲು ದೂರು ಪೆಟ್ಟಿಗೆ ಇಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಹರಪನಹಳ್ಳಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ವಿವಿಧ ಬಾಲಕಿಯರ ವಸತಿನಿಲಯಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಅಯೋಗದ ಸದಸ್ಯ ಶಶಿಧರ ಕೋಸಂಬೆ ನೇತೃತ್ವದ ತಂಡ ಗುರುವಾರ ಭೇಟಿ ನೀಡಿ ಪರಿಶೀಲಿಸಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೋಸಂಬೆ ಅವರು, ಸ್ಥಳೀಯ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಎದುರಿಗಿರುವ ಆರ್ಎಂಎಸ್ಎ- 4 ಬಾಲಕಿಯರ ವಸತಿ ಶಾಲೆಯಲ್ಲಿ ಮೆನು ಪ್ರಕಾರ ಊಟ- ಉಪಾಹಾರ ಕೊಡುತ್ತಿಲ್ಲ. ಹೆಚ್ಚಿನ ಮಟ್ಟದಲ್ಲಿ ಉಪ್ಪಿಟನ್ನು ಕೊಡುತ್ತಾರೆ ಎಂದು ದೂರಿದ ಅವರು, ಮಕ್ಕಳಿಗೆ ಹೊಟ್ಟೆ ತುಂಬಾ ಊಟ ಕೊಡುತ್ತಿಲ್ಲ ಎಂದು ಮೇಲ್ವಿಚಾರಕಿಯ ಮೇಲೆ ಗರಂ ಆದರು.ಅಲ್ಲದೇ ನಿಲಯದಲ್ಲಿ ಬಿಸಿನೀರು ಇಲ್ಲದಿದ್ದರೂ ಬಿಸಿ ನೀರು ಇವೆ ಎಂದು ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದರು.
ಕೆಕೆಜಿಬಿವಿ ಬಾಲಕಿಯರ ವಸತಿನಿಲಯದಲ್ಲಿ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ತೋಡಿಕೊಳ್ಳಲು ದೂರು ಪೆಟ್ಟಿಗೆ ಇಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಬಳಿಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಅಯೋಗದ ಸದಸ್ಯರು, ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ಶುಚಿತ್ವ, ಬೆಡ್, ದಾಸ್ತಾನು ಪರಿಶೀಲಿಸಿದರು. ತಾಲೂಕಿನಲ್ಲಿ 696 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಇಂತಹ ಮಕ್ಕಳನ್ನು ದಾಖಲಿಸಿಕೊಳ್ಳದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಆಸ್ಪತ್ರೆಯಲ್ಲಿಯ ಅಪೌಷ್ಟಿಕತೆ ಪುನಶ್ಚೇತನ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಿ ಅಪೌಷ್ಟಿಕತೆ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಲು ವೈದ್ಯರಿಗೆ ಸೂಚಿಸಿದರು.
ನಂತರ ಅನಂತನಹಳ್ಳಿ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸುಭದ್ರದೇವಿ, ಹೊಸಪೇಟೆ ಸಿಡಿಪಿಒ ಸಿಂಧು, ಹರಪನಹಳ್ಳಿ ಸಿಡಿಪಿಒ ಹರೀಶ, ಬಿಇಒ ಬಸವರಾಜಪ್ಪ, ವೈದ್ಯಾಧಿಕಾರಿ ಡಾ. ಶಂಕರನಾಯ್ಕ್, ಮಕ್ಕಳ ತಜ್ಞ ದತ್ತತ್ರೆಯ ಪಿಸೆ, ಶಿಕ್ಷಣ ಸಂಯೋಜಕ ಗಿರಜ್ಜಿ ಮಂಜುನಾಥ್, ಬಿಆರ್ಪಿ ಚನ್ನಪ್ಪ ಕಂಬಳಿ ಸೇರಿದಂತೆ ಇತರರು ಇದ್ದರು.