ಸಾರಾಂಶ
ಅಸೈಗೋಳಿಯಲ್ಲಿ ಸೋಮವಾರ ನಡೆದ ಪಾವಂಜೆ ಮೇಳದ ಐದನೇ ವರ್ಷದ ಯಕ್ಷಗಾನ ಕಾರ್ಯಕ್ರಮದಲ್ಲಿ ಮೇಳದ ಪ್ರಧಾನ ಭಾಗವತ ಪಟ್ಲ ಸತೀಶ್ ಶೆಟ್ಟಿ, ಕಲಾವಿದರಾದ ದಿವಾಣ ಶಿವಶಂಕರ ಭಟ್, ಸುಭ್ರಾಯ ಹೊಳ್ಳ ಕಾಸರಗೋಡು, ಮಾಧವ ಬಂಗೇರ ಕೊಳತ್ತಮಜಲು, ನೇಪಥ್ಯ ಕಲಾವಿದ ರಘು ಶೆಟ್ಟಿ ನಾಳ ಹಾಗೂ ಸಂಘಟಕ ಅಸೈಗೋಳಿಯ ಉದಯ ಭಟ್ ಅವರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಉಳ್ಳಾಲ
ಯಕ್ಷಮಿತ್ರರು ಅಸೈಗೋಳಿ ವತಿಯಿಂದ ಅಸೈಗೋಳಿಯಲ್ಲಿ ಸೋಮವಾರ ನಡೆದ ಪಾವಂಜೆ ಮೇಳದ ಐದನೇ ವರ್ಷದ ಯಕ್ಷಗಾನ ಕಾರ್ಯಕ್ರಮದಲ್ಲಿ ಕಲಾವಿದರನ್ನು ಗೌರವಿಸಲಾಯಿತು.ಮೇಳದ ಪ್ರಧಾನ ಭಾಗವತ ಹಾಗೂ ಸಂಚಾಲಕ ಪಟ್ಲ ಸತೀಶ್ ಶೆಟ್ಟಿ, ಕಲಾವಿದರಾದ ದಿವಾಣ ಶಿವಶಂಕರ ಭಟ್, ಸುಭ್ರಾಯ ಹೊಳ್ಳ ಕಾಸರಗೋಡು, ಮಾಧವ ಬಂಗೇರ ಕೊಳತ್ತಮಜಲು, ನೇಪಥ್ಯ ಕಲಾವಿದ ರಘು ಶೆಟ್ಟಿ ನಾಳ ಹಾಗೂ ಸಂಘಟಕ ಅಸೈಗೋಳಿಯ ಉದಯ ಭಟ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.ಪಾವಂಜೆ ಮೇಳದ ಪ್ರಧಾನ ಭಾಗವತ ಹಾಗೂ ಸಂಚಾಲಕ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಮಾತನಡಿ, ಯಕ್ಷಗಾನದ ಬೆಳವಣಿಗೆಗೆ ಸಂಘ ಸಂಸ್ಥೆಗಳ ಪಾತ್ರ ಮಹತ್ತರವಾದುದು. ಯಕ್ಷಮಿತ್ರರು ಅಸೈಗೋಳಿ ವತಿಯಿಂದ ಕಳೆದ ಐದು ವರ್ಷದಿಂದ ನಿರಂತರವಾಗಿ ಯಕ್ಷಗಾನ ಸೇವೆಯು ನಡೆಯುತ್ತಿದೆ. ದೇವರು ಹಾಗೂ ಕಲಾಮಾತೆಯ ಆಶೀರ್ವಾದ ಎಲ್ಲರ ಮೇಲೂ ಇರಲಿ ಎಂದು ಹಾರೈಸಿದರು.
ಕಲಾವಿದ ಸುಬ್ರಾಯ ಹೊಳ್ಳ ಕಾಸರಗೋಡು ಮಾತನಾಡಿ,ನಾವೆಲ್ಲರೂ ಹಿರಿಯ ಕಲಾವಿದರನ್ನು ನೋಡಿ ಬೆಳೆದು ಬಂದವರು. ಯಕ್ಷಗಾನ ರಂಗದಲ್ಲಿ ಪರಿಪೂರ್ಣ ಕಲಾವಿದರಾಗಿ ರೂಪುಗೊಳ್ಳಬೇಕಾದರೆ ನಿರಂತರ ಪ್ರಯತ್ನ, ಪರಿಶ್ರಮಗಳು ಅಗತ್ಯ ಎಂದರು.ಸಮಾರಂಭದಲ್ಲಿ ಯಕ್ಷಮಿತ್ರರು ಅಸೈಗೋಳಿಯ ಅದ್ಯಕ್ಷ ರವಿಶಂಕರ್ ಭಟ್ ಅಸೈಗೋಳಿ, ಸದಸ್ಯರಾದ ಪರಮೇಶ್ವರ ಭಟ್, ಶಬರೀಶ್ ಭಟ್, ಅರುಣ್ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಸಂಘಟಕ ವಿನಯಕೃಷ್ಣ ಕುರ್ನಾಡು ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಪಾವಂಜೆ ಮೇಳದವರಿಂದ ‘ಗಜೇಂದ್ರ ಮೋಕ್ಷ, ಅಮೃತಾಪಹಾರ, ಮಕರಾಕ್ಷ ಕಾಳಗ, ಸುಧನ್ವ ಮೋಕ್ಷ’ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.