ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ, ದುರಸ್ತಿ, ಸಭಾ ಭವನಕ್ಕೆ ಚಾಮುಲ್ ಅನುದಾನ ನೀಡುತ್ತಿದೆ. ಅನುದಾನ ಕೇಳಿ ಪಡೆಯಿರಿ ಎಂದು ಚಾಮುಲ್ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಹೇಳಿದರು.ತಾಲೂಕಿನ ಹೊಂಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಸಭಾಭವನ ಕಟ್ಟಡ ಹಾಗು ಪ್ರಸಕ್ತ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿ, ನೂತನ ಸಭಾ ಭವನಕ್ಕೆ ಚಾಮುಲ್ ₹೨ ಲಕ್ಷ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ₹೫೦ ಸಾವಿರ, ಸಂಘದ ಹಣ ಸೇರಿ ₹೫.೭೫ ಲಕ್ಷ ರು.ವೆಚ್ಚದಲ್ಲಿ ಸುಸಜ್ಜಿತ ಸಭಾ ಭವನ ನಿರ್ಮಿಸಿದ್ದೀರಿ ಎಂದು ಆಡಳಿತ ಮಂಡಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್ ಮಾತನಾಡಿ, ಚಾಮುಲ್ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದ್ದು ರೈತ ಉತ್ಪಾದಕರು ಬಳಕೆ ಮಾಡಿಕೊಳ್ಳಿ ಎಂದರು.ರಾಸುವಿಮೆ, ಹಾಲು ಉತ್ಪಾದಕರಿಗೆ ಮರಣ ಪರಿಹಾರ, ಶೇ.೫೦ ರ ಅನುದಾನದಲ್ಲಿ ಮೇವು ತುಂಡರಿಸುವ ಯಂತ್ರ, ಹಾಲು ಕರೆಯುವ ಯಂತ್ರ, ರಾಸುಗಳಿಗೆ ತುರ್ತು ಚಿಕಿತ್ಸೆಗೆ ವೈದ್ಯರ ಸೇವೆ ನೀಡಲಾಗುತ್ತಿದೆ ಎಂದರು.
ಚಾಮುಲ್ ನಿರ್ದೇಶಕ ಎಂ.ಪಿ.ಸುನಿಲ್ ಮಾತನಾಡಿ, ಸಹಕಾರ ಸಂಘಗಳು ಸಹಕಾರ ತತ್ವದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಸಂಘದಲ್ಲಿ ಪರಸ್ಪರ ಸಹಕಾರ ಇದ್ದರೆ,ಸಂಘದ ಅಭಿವೃದ್ಧಿ ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಮಂಜಪ್ಪ,ಉಪಾಧ್ಯಕ್ಷ ಲೋಕೇಶ್,ಚಾಮುಲ್ ವಿಸ್ತರಣಾಧಿಕಾರಿ ಪ್ರಕಾಶ್ ಹೆಚ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಚಂದ್ರಶೇಖರ್, ಸಂಘದ ನಿರ್ದೇಶಕರಾದ ಮಹದೇವಪ್ಪ, ಎಚ್.ಎನ್.ಶಿವಪ್ಪ, ಎಚ್.ಎಸ್. ಮಹದೇವಪ್ಪ, ಶಂಭುಲಿಂಗಪ್ಪ, ಮಹದೇವಪ್ಪ, ನಾಗರಾಜ ಶೆಟ್ಟಿ, ಅನ್ನಪೂರ್ಣಮ್ಮ, ಶಿವಮ್ಮ, ಗೌರಮ್ಮ, ಮುಖ್ಯ ಕಾರ್ಯ ನಿರ್ವಾಹಕ ಎಚ್.ಬಿ.ನಾಗಮಲ್ಲಪ್ಪ, ಸಂಘದ ನೌಕರರಾದ ಮಹದೇವಪ್ಪ, ಶಿವಮಲ್ಲಪ್ಪ, ಬೀರೇಗೌಡ, ಸಂಘದ ಸದಸ್ಯರು ಹಾಗು ಗ್ರಾಮಸ್ಥರು ಹಾಜರಿದ್ದರು.