ಅಂಕೋಲೆಯ ಭೂಮ್ತಾಯಿ ಶಾಂತಾದುರ್ಗಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಶಂಖ ಊದಿ, ವಾಹನಕ್ಕೆ ಚಾಲನೆ ನೀಡುವ ಮೂಲಕ ಚುನಾವಣಾ ಸಿದ್ಧತೆಗೆ ಮುನ್ನುಡಿ ಬರೆದ ಅಸ್ನೋಟಿಕರ್, ಕಾರವಾರ- ಅಂಕೋಲಾ ಕ್ಷೇತ್ರದಿಂದ ಜೆಡಿಎಸ್‌ದಿಂದ ಸ್ಪರ್ಧೆ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಘು ಕಾಕರಮಠ

ಅಂಕೋಲಾ: ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯ ರಾಜಕೀಯ ಚಟುವಟಿಕೆಗಳಿಗೆ ಮಾಜಿ ಸಚಿವ ಆನಂದ ಅಸ್ನೋಟಿಕರ್ ಅಂಕೋಲೆಯಿಂದಲೇ ಚಾಲನೆ ನೀಡಿದ್ದು, ‘ಜೆಡಿಎಸ್ ಪಕ್ಷದ ಟಿಕೆಟ್ ಶತಸಿದ್ಧ’ ಎಂಬ ಅವರ ಘೋಷಣೆ ಕ್ಷೇತ್ರದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಶುಕ್ರವಾರ ಅಂಕೋಲೆಯ ಭೂಮ್ತಾಯಿ ಶಾಂತಾದುರ್ಗಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಶಂಖ ಊದಿ, ವಾಹನಕ್ಕೆ ಚಾಲನೆ ನೀಡುವ ಮೂಲಕ ಚುನಾವಣಾ ಸಿದ್ಧತೆಗೆ ಮುನ್ನುಡಿ ಬರೆದ ಅಸ್ನೋಟಿಕರ್, ಕಾರವಾರ- ಅಂಕೋಲಾ ಕ್ಷೇತ್ರದಿಂದ ಜೆಡಿಎಸ್‌ದಿಂದ ಸ್ಪರ್ಧೆ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಪಕ್ಷದ ಸಭೆಯಲ್ಲಿ ಜೆಡಿಎಸ್ ವರಿಷ್ಠ, ಕೇಂದ್ರ ಸಚಿವ ಕುಮಾರಸ್ವಾಮಿ ಅವರು, ನಿನಗೆ ಪ್ರತಿನಿಧಿಸಲು ಕಾರವಾರ ಹಾಗೂ ಹಳಿಯಾಳ ಕ್ಷೇತ್ರ ಯಾವುದೇ ಬೇಕು ಅಂತಾ ಕೇಳಿದ್ದರು. ನಾನು ಆಗ ನನ್ನ ರಾಜಕೀಯ ಜೀವನ ಹಾಗೂ ನನಗೆ ತಾಯಿಯ ಭಾವನಾತ್ಮಕ ಸಂಬಂಧ ಇರುವ ಕಾರವಾರ ಕ್ಷೇತ್ರ ಕೊಡಿ ಎಂದು ವಿನಂತಿಸಿಕೊಂಡಾಗ ಸರಿ ನಿನಗೆ ಶೇ. 100 ಪಕ್ಷದಿಂದ ಟಿಕೆಟ್ ಕೊಡಿಸುತ್ತೇನೆ ಎಂದು ಹಸಿರು ನಿಶಾನೆ ತೋರಿಸಿದ್ದಾರೆ. ಹಾಗೆ ಪಕ್ಷ ಬಲಪಡಿಸಲು ಬೂತ್ ಮಟ್ಟದಲ್ಲಿ ಸಂಘಟನೆ ಮಾಡಿ. ಹಾಗೆ ನಾನು ಡಿಸೆಂಬರ್‌ನಲ್ಲಿ ಕ್ಷೇತ್ರಕ್ಕೆ ಬರುತ್ತೇನೆ ಎಂದು ತಿಳಿಸಿದ್ದಾರೆ. ಹಾಗೆ ಫೆಬ್ರವರಿ- ಮಾರ್ಚ್ ತಿಂಗಳಲ್ಲಿ ನಿಖಿಲ ಕುಮಾರಸ್ವಾಮಿ ಅಂಕೋಲಾ- ಕಾರವಾರಕ್ಕೆ ಬರಲಿದ್ದಾರೆ.

ಹಿಂದಿನ ಚುನಾವಣೆಯಲ್ಲಿ ಸುಮಾರು 47 ಸಾವಿರ ಮತ ಪಡೆದಿದ್ದೇನೆ. ಅದರಲ್ಲಿ ಅತಿ ಹೆಚ್ಚು ಮತಗಳು ಅಂಕೋಲಾ ಕ್ಷೇತ್ರದಲ್ಲಿ ಪಡೆದಿರುವುದರಿಂದ ಅಂಕೋಲಾದ ಮತದಾರರಲ್ಲಿ ವಿಶ್ವಾಸವಿದೆ.

ಪಕ್ಷ ಸಂಘಟನೆಗೆ ಒತ್ತುಕೊಟ್ಟು ಈಗಿಂದಲೇ ಪಕ್ಷವನ್ನು ಬಲಪಡಿಸುವತ್ತ ಕಾರ್ಯಪ್ರವೃತ್ತನಾಗುತ್ತಿದ್ದೇನೆ. ಅ. 2ರಿಂದ ಪಕ್ಷದ ಕಾರ್ಯಾಲಯ ಪ್ರಾರಂಭವಾಗಲಿದೆ. ಶಂಖ ಊದುವ ಮುಖಾಂತರ ಚುನಾವಣೆಗೆ ಕಹಳೆ ಊದುತ್ತಿದ್ದೇವೆ. ನಾನು ಸಚಿವನಾಗಿದ್ದಾಗ ಅಂಕೋಲಾದಲ್ಲಿ ಪ್ರಥಮದರ್ಜೆ ಕಾಲೇಜು, ಐಟಿಐ ಕಾಲೇಜು, ಸಮಗ್ರ ಕುಡಿಯುವ ನೀರಿನ ಯೋಜನೆ, ಕಾರವಾರದಲ್ಲಿ ಎಂಜಿನಿಯರಿಂಗ್, ಮೆಡಿಕಲ್ ಕಾಲೇಜ್ ಹೀಗೆ ಹಲವು ಯೋಜನೆಗಳಿಗೆ ಎಲ್ಲ ಸಮುದಾಯಗಳೊಂದಿಗೆ ಸೇರಿ ಅಭಿವೃದ್ಧಿಗೆ ಚಾಲನೆ ನೀಡಿದ್ದೇನೆ.

ಇಲ್ಲಿನ ದೇವರ ಹಾಗೂ ಎಲ್ಲ ಸಮಾಜದವರ ಆಶೀರ್ವಾದ ಇಂದಿಗೂ ನನ್ನ ಮೇಲಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಅತಿ ಶೀಘ್ರದಲ್ಲಿ ಸಂಘಟನೆಯನ್ನು ಕಾರ್ಯರೂಪಕ್ಕೆ ತಂದು ಪಕ್ಷವನ್ನು ಬಲಪಡಿಸಲು ಪ್ರಯತ್ನಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಪ್ರಮುಖರಾದ ಮೋಹಿನಿ ನಾಯ್ಕ, ಸಂದೀಪ ಬಂಟ, ಸುನೀಲ ನಾಯ್ಕ ಹೊನ್ನೆಕೇರಿ, ಕೆ.ಎಂ. ಗೌಡ, ಮಂಗು ಗೌಡ ಅಂಬಾರಕೊಡ್ಲ, ಎಂ.ಪಿ. ನಾಯ್ಕ ಕಾಕರಮಠ, ಗುರು ನಾಯ್ಕ ಬೇಳಾ ಇತರರು ಇದ್ದರು. ರಾಜಕೀಯ ಹೆಜ್ಜೆ ಸ್ಪಷ್ಟಪಡಿಸುವ ಪ್ರಯತ್ನ

ಕ್ಷೇತ್ರದ ಪ್ರಭಾವಿ ನಾಯಕರಾಗಿ ಗಮನ ಸೆಳೆದಿದ್ದ ಆನಂದ ಅಸ್ನೋಟಿಕರ ಅವರು ತನಗೆ ಟಿಕೆಟ್ ಶತಸಿದ್ಧ ಎಂದು ಶಂಖ ಊದುವ ಮೂಲಕ ರಣಕಹಳೆ ಊದಿರುವುದು ಕ್ಷೇತ್ರದ ಚುನಾವಣೆ ಪ್ರಕ್ರಿಯೆಯ ಜಿಜ್ಞಾಸೆಗೆ ಅಡಿ ಇಡುವಂತಾಗಿದೆ. ಅಸ್ನೋಟಿಕರ್ ಅವರ ಈ ಘೋಷಣೆಯೊಂದಿಗೆ ಕಾರವಾರ- ಅಂಕೋಲಾ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಮುಂದಿನ ರಾಜಕೀಯ ಹೆಜ್ಜೆಗಳನ್ನು ಸ್ಪಷ್ಟಪಡಿಸುವ ಪ್ರಯತ್ನ ಆರಂಭಿಸಿದಂತಾಗಿದೆ. ಆದರೆ ಟಿಕೆಟ್ ಘೋಷಣೆ, ಪಕ್ಷದ ಅಂತಿಮ ನಿರ್ಧಾರ ಹಾಗೂ ಇತರ ಪಕ್ಷಗಳ ಅಭ್ಯರ್ಥಿಗಳ ಚಿತ್ರಣ ಸ್ಪಷ್ಟವಾದ ಬಳಿಕವೇ ಕ್ಷೇತ್ರದ ಚುನಾವಣಾ ಸಮೀಕರಣದ ಪೂರ್ಣ ಸ್ವರೂಪ ಹೊರಬರಲಿದೆ.