ಸಾರಾಂಶ
ಗುಂಡ್ಲುಪೇಟೆ ತಾಲೂಕಿನ ರಂಗನಾಥಪುರ ರಸ್ತೆ ಡಾಂಬಾರಾಗದ ಕಾರಣ ರಸ್ತೆಯಲ್ಲಿ ಜಲ್ಲಿ ಎದ್ದಿದೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ರಂಗನಾಥಪುರ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಡಾಂಬಾರು ಹಾಕದ ಕಾರಣ ಸಂಚರಿಸಲು ಆಗದಂತ ಸ್ಥಿತಿ ಬಂದಿದೆ.ಶಾಸಕರ ತವರಾದ ನಿಟ್ರೆ ಗ್ರಾಪಂ ವ್ಯಾಪ್ತಿಯ ರಂಗನಾಥಪುರ ರಸ್ತೆ ಕಾಮಗಾರಿಯಲ್ಲಿ ಡಾಂಬರೀಕರಣವಾಗಿದ್ದು ಇನ್ನು ಆರು ನೂರು ಮೀಟರ್ ಡಾಂಬರೀಕರಣ ಆಗಿಲ್ಲ. ಈ ರಸ್ತೆಯಲ್ಲಿ ಕಾರು, ಟೆಂಪೋ, ಟಿಪ್ಪರ್ ಸಂಚರಿಸಿದರೆ ಧೂಳು ದ್ವಿಚಕ್ರ ವಾಹನದಲ್ಲಿ ತೆರಳುವ ಸವಾರರು ಹಾಗೂ ಪಾದಚಾರಿಗಳಿಗೆ ಉಚಿತವಾಗಿ ಧೂಳು ಸಿಗುತ್ತಿದೆ ಎಂದು ಅಣ್ಣೂರು ಕೇರಿ ಮಹೇಶ್ ದೂರಿದ್ದಾರೆ.
೨೦೨೦-೨೧ನೇ ಸಾಲಿನಲ್ಲಿ ಮಂಜೂರಾದ ಈ ಕಾಮಗಾರಿಗೆ ಸರ್ಕಾರ ಬಿಲ್ ಪಾವತಿಸಿದ ಕಾರಣ ಗುತ್ತಿಗೆದಾರ ಕೆಲಸ ಮಾಡಲು ಮುಂದೆ ಬರುತ್ತಿಲ್ಲ ಎಂದು ತಿಳಿದು ಬಂದಿದೆ. ಆದರೂ ಶಾಸಕರ ಸೂಚನೆ ಮೇರೆಗೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವಿಕುಮಾರ್ ಗುತ್ತಿಗೆದಾರನ ಮನವೊಲಿಸಿ ಉಳಿಕೆ ಕಾಮಗಾರಿ ಮುಗಿಸಬೇಕು ಎಂದು ತಾಕೀತು ಮಾಡಿದ್ದಾರೆ. ರಂಗನಾಥಪುರಕ್ಕೆ ತೆರಳುವ ಉಳಿಕೆ ಕಾಮಗಾರಿ ಮುಗಿಸಿ ಸಾರ್ವಜನಿಕರು ಸುಲಲಿತವಾಗಿ ಸಂಚರಿಸಲು ಅವಕಾಶ ಮಾಡಿ ಕೊಡಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಗುತ್ತಿಗೆದಾರನಿಗೆ ಬಿಲ್ ಆಗದ ಕಾರಣ ಕೆಲಸ ನಿಲ್ಲಿಸಿದ್ದರು. ಇದೀಗ ಅಪೂರ್ಣ ಕಾಮಗಾರಿ ಮುಗಿಸಲೇ ಬೇಕು ಎಂದು ಶಾಸಕರು ನನಗೆ ಸೂಚಿಸಿದ ಬಳಿಕ ಕಾಮಗಾರಿ ಮುಗಿಸಿ ಎಂದು ತಾಕೀತು ಮಾಡಲಾಗಿದೆ.-ರವಿಕುಮಾರ್, ಎಇಇ, ಪಿಡಬ್ಲ್ಯೂಡಿ
ರಂಗನಾಥಪುರ ರಸ್ತೆಯಲ್ಲಿ ಡಾಂಬಾರು ಮಾಡದ ಕಾರಣ ರಸ್ತೆಯಲ್ಲಿ ಜಲ್ಲಿಕಲ್ಲು ಎದ್ದಿದೆ. ಕಾರು, ಟೆಂಪೋ ವಾಹನಗಳು ಸಂಚರಿಸುವ ವೇಳೆ ಜಲ್ಲಿ ಕಲ್ಲು ಪಕ್ಕದಲ್ಲಿ ತೆರಳುವ ವಾಹನಗಳಿಗೆ ಬೀಳುತ್ತಿವೆ. ಡಾಂಬಾರು ಮಾಡಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಿ.-ಮಹೇಶ್, ಬೈಕ್ ಸವಾರ, ಅಣ್ಣೂರು ಕೇರಿ