ನವಲಗುಂದ:
ರೈತರು ತಮ್ಮ ಜಮೀನುಗಳಿಗೆ ಸುಗಮವಾಗಿ ಸಂಚರಿಸಲು ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕಿನ ಕೆಲವು ಪ್ರಮುಖ ಗ್ರಾಮೀಣ ರಸ್ತೆಗಳನ್ನು ಡಾಂಬರೀಕರಣ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.ಸವದತ್ತಿ ತಾಲೂಕಿನ ಉಳ್ಳಿಗೇರಿ-ಇನಾಮಹೊಂಗಲ ಪ್ರದೇಶದಲ್ಲಿ ಬರ ಪರಿಸ್ಥಿತಿ ಅಧ್ಯಯನ ನಡೆಸಿದ ಅವರು, ಶಿರೂರ ಗ್ರಾಮದಿಂದ ಸವದತ್ತಿ, ಉಳ್ಳಿಗೇರಿ, ಹಂಚಿನಾಳ ಅಡ್ಡದಾರಿ, ಉಗರಗೋಳ, ಓಲೆಮನೆ, ಬೆಟಸೂರ ಹಾಗೂ ಗುಮ್ಮಗೋಳ ಮಾರ್ಗಗಳ ರಸ್ತೆ ವೀಕ್ಷಿಸಿ ಮಾತನಾಡಿದರು.
ಮಲಪ್ರಭಾ ಹಾಗೂ ಎನ್ಬಿಸಿ ಕಾಲುವೆಗೆ ಸವದತ್ತಿ ರೇಣುಕಾಸಾಗರ ಇಂದಿರಾಗಾಂಧಿ ಅಣೆಕಟ್ಟಿನಿಂದ 10 ದಿನ ನಿತ್ಯ 800 ಕ್ಯುಸೆಕ್ ನೀರು ಹರಿಸಿ ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸಲಾಗುವುದು ಎಂದರು.ರೈತರು ಡಾಂಬರೀಕರಣಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸವದತ್ತಿ-ಬೆಟಸೂರ, ಗುಮ್ಮಗೋಳ, ತಿರ್ಲಾಪುರ-ಮೊರಬ ಹಾಗೂ ಯಮನೂರ-ನವಲಗುಂದ ಸೇರಿದಂತೆ ಪ್ರಮುಖ ರಸ್ತೆಗಳನ್ನು ಜಿಪಂ ಮೂಲಕ ಉನ್ನತೀಕರಿಸಿ ಡಾಂಬರೀಕರಣ ಮಾಡಲಾಗುವುದು ಎಂದು ತಿಳಿಸಿದರು.
ರಸ್ತೆಗಳ ಅಗಲೀಕರಣ, ಕಚ್ಚಾ ಗಟಾರ ನಿರ್ಮಾಣ, ನೀರು ಹೊರಹೋಗಲು ಪೈಪ್ ಅಳವಡಿಕೆ, ಸಿಡಿ ನಿರ್ಮಾಣ, ಮೊರಂ ಹಾಗೂ ಮೆಟಲಿಂಗ್ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು. ರೈತರ ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸಲಾಗುವುದು ಎಂದರು.
ಈ ವೇಳೆ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಶಾಸಕರಾದ ಎನ್.ಎಚ್. ಕೋನರಡ್ಡಿ, ವಿಶ್ವಾಸ ವೈದ್ಯ, ಮಲಪ್ರಭಾ ನೀರು ಬಳಕೆದಾರರ ಸಂಘದ ಅಧ್ಯಕ್ಷ ಸದುಗೌಡ ಪಾಟೀಲ, ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಎಸ್ಪಿ ಕೆ. ರಾಮರಾಜನ್, ಮಲಪ್ರಭಾ ಮುಖ್ಯ ಎಂಜಿನಿಯರ್ ಲಕ್ಷ್ಮಣ ನಾಯ್ಕ, ಅಧೀಕ್ಷಕ ಅಭಿಯಂತರ ಸುಭಾಸ ನಾಯ್ಕ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.