ಸಾರಾಂಶ
ಗೋಕರ್ಣ: ಕಾಲನ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಜ್ಯೋತಿಷ್ಯ ಒಂದು ಅದ್ಭುತ ಸಾಧನ. ಇಂಥ ಅಪೂರ್ವ ವಿದ್ಯೆಯ ಬಗ್ಗೆ ಅವಜ್ಞೆ ಬೇಡ. ಸಮಾಜ ಅದನ್ನು ಗುರುತಿಸಿ ಗೌರವಿಸಬೇಕು. ಬಾಹ್ಯನೋಟಕ್ಕೆ ಕಾಣದ ಹಲವು ಅಂಶಗಳನ್ನು ಈ ಅಂತಃಚಕ್ಷುವಿಮಿಂದ ಕಾಣಬಹುದು ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು ಮಂಗಳವಾರ ಕಾಲ ಸರಣಿಯ ಪ್ರವಚನ ಮುಂದುವರಿಸಿ, ಪರತತ್ವದ ಪ್ರಕಟರೂಪವೇ ಗುರುತತ್ವ. ಕಾಲನ ಜ್ಞಾನವನ್ನು ಸಿದ್ಧಿಸಿಕೊಂಡರೆ ಬದುಕು ಹಸನಾಗುತ್ತದೆ. ಆ ಕಾಲನ ಭಾಷೆಯನ್ನು ಅರ್ಥೈಸಿಕೊಳ್ಳಲು ಗುರುತತ್ವ ನೆರವಾಗಲಿಎಂದು ಆಶಿಸಿದರು.ಜ್ಯೋತಿಷ ಎನ್ನುವುದು ವೇದಪುರುಷನ ಕಣ್ಣು. ನಮ್ಮ ಕಣ್ಣಿನಿಂದ ನೋಡಲಾಗದ್ದನ್ನೂ ಜ್ಯೋತಿಷ್ಯದ ಕಣ್ಣಿನಿಂದ ನೋಡಬಹುದು ಎಂದರು.ಕಣ್ಣಿನಿಂದ ದೇಹದ ಒಳಗಿನದನ್ನು, ಮಸ್ತಿಷ್ಕವನ್ನು, ದೂರ ಇರುವುದನ್ನು ನೋಡಲಾಗದು. ಆದರೆ ಅಂತಃದೃಷ್ಟಿಯಿಂದ ಬ್ರಹ್ಮಾಂಡದಲ್ಲಿರುವ ಎಲ್ಲವನ್ನೂ ತಿಳಿದುಕೊಳ್ಳಬಲ್ಲದು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ದೇಹದ ಒಳಗಿನದ್ದನ್ನು, ದೇಹಪ್ರಕೃತಿಯನ್ನೂ ನೋಡಲು ಸಾಧ್ಯ. ಈ ಅಪೂರ್ವ ಶಾಸ್ತ್ರ, ವಿದ್ಯೆಯನ್ನು ಗೌರವಿಸೋಣ. ಇದು ಎಲ್ಲ ಶಾಸ್ತ್ರಕ್ಕೂ ಪೂರಕ. ಆಯುರ್ವೇದಕ್ಕೂ ಜ್ಯೋತಿಷ್ಯ ಬೇಕು. ಕರ್ಮದಿಂದ ಬಂದ ರೋಗಗಳನ್ನು ಗುಣಪಡಿಸಬೇಕಾದರೆ ಜ್ಯೋತಿಷ್ಯದ ನೆರವಾಗಬೇಕು. ದೃಢಕರ್ಮದಿಂದ ಬಂದ ವ್ಯಾದಿಗಳನ್ನು ಗುಣಪಡಿಸಲಾಗದು. ನಾವು ಕೊಡುವ ಔಷಧಕ್ಕೆ ಕಾಲವೂ ಪಕ್ವವಾಗಬೇಕು ಎಂದರು.ಶ್ರೀಮಠದ ಶೋಧ ಕೇಂದ್ರದಲ್ಲಿರುವ ಅಪರೂಪದ ಕಡತಗಳನ್ನು ಶ್ರೀಸವಾರಿ ಶಾನಭೋಗರಾದ ಸುರೇಶ್ ಅಡುಗೋಡಿ ನೆರವೇರಿಸಿದರು. ಚಾತುರ್ಮಾಸ್ಯ ಸೇವಾ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಕೋಶಾಧ್ಯಕ್ಷ ಸುಧಾಕರ ಬಡಗಣಿ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿವಿವಿ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ವಿವಿವಿ ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ್ ಟಿ.ಜಿ., ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಕಾರ್ಯದರ್ಶಿ ಜಿ.ಕೆ. ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ವಿನಾಯಕ ಶಾಸ್ತ್ರಿಗಳು, ಶ್ರೀಶ, ಮಹಾಮಂಡಲ ಪ್ರಾಂತ ಕಾರ್ಯದರ್ಶಿ ರುಕ್ಮಾವತಿ ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.