ಸಾರಾಂಶ
ಸ್ವಚ್ಛಗೊಳಿಸಿ ಭವ್ಯತೆ ಕಾಪಾಡಲು ಸ್ಥಳೀಯರ ಮನವಿ ಕನ್ನಡಪ್ರಭ ವಾರ್ತೆ ಹಾರನಹಳ್ಳಿ
ಅರಸೀಕೆರೆ ತಾಲೂಕಿನ ಕರಗುಂದ ಗ್ರಾಮ ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದ ಗ್ರಾಮವಾಗಿದೆ. ಇಲ್ಲಿರುವ ಜೈನ ಬಸದಿ ಇಂದು ಕಾಲನ ವಶಕ್ಕೆ ಸಿಕ್ಕಿ ನಲುಗುತ್ತಿದೆ. ರಾಜ್ಯ ಪುರಾತತ್ವ ಇಲಾಖೆಯಿಂದ ನಿರ್ಲಕ್ಷಕ್ಕೊಳಗಾಗಿರುವುದು ದುರ್ದೈವದ ಸಂಗತಿ. ಅರಸೀಕೆರೆ ತಾಲೂಕಿನ ಹಾರನಹಳ್ಳಿಯಿಂದ ಸುಮಾರು ೫ ಕಿಲೋಮೀಟರ್ ದೂರಲ್ಲಿರುವ ಈ ಗ್ರಾಮ ಹೊಯ್ಸಳರ ಕಾಲಕ್ಕೆ ಐತಿಹಾಸಿಕ ಭವ್ಯತೆ ಮೆರೆದು ಪ್ರಸಿದ್ಧಿ ಪಡೆದ ಗ್ರಾಮವಾಗಿತ್ತು ಆದರೆ ಈಗ ದುಸ್ಥಿತಿ ತಲುಪಿದೆ.ಗ್ರಾಮದ ಇತಿಹಾಸ: ಕರಗುಂದ ಗ್ರಾಮದಲ್ಲಿರುವ ಮಾದೇಶ್ವರ ದೇವಾಲಯವನ್ನು ಹೊಯ್ಸಳ ದೊರೆ ಒಂದನೇ ನರಸಿಂಹ ಆಳ್ವಿಕೆ ಮಾಡುತ್ತಿದ್ದಾಗ ನೀರಗುಂದ ನಾಡನ್ನು ಒಂದನೇ ನರಸಿಂಹ ಹಿರಿಯ ರಾಣಿಗೆ ಗುಜ್ಜಲದೇವಿ ಪರಿಪಾಲನೆ ಮಾಡುತ್ತಿದ್ದು ಇಲ್ಲಿರುವ ಮಹದೇಶ್ವರ ದೇವಾಲಯ, ತುರುಗಲ್ ವೀರಗಲ್ಲು ಮಾಸ್ತಿಕಲ್ಲು ಕಲ್ಲಿನ ಗೋರಿಗಳನ್ನು ನಿರ್ಮಿಸಿರುವುದನ್ನು ಈ ಊರಿನಲ್ಲಿ ನಾವು ಕಾಣಬಹುದಾಗಿದೆ.
ವಿಷ್ಣುವರ್ಧನನಷ್ಟು ಸಮರ್ಥನಲ್ಲದ ಒಂದನೇ ನರಸಿಂಹನ ಕಾಲದಲ್ಲಿ ಕಲಚೂರಿಗಳು ರಾಜಕೀಯವಾಗಿ ಮೇಲುಗೈ ಸಾಧಿಸಲು ಅವನತಿಸುತ್ತಿದ್ದ ಕ್ರಿ.ಶ. ೧೧೫೭ರಲ್ಲಿ ಕಲಚುರಿಗಳ ಸಾಮಂತನಾನಾದ ಬರ್ಮರಸನು ಬಿಜ್ಜಳನ ಮಗ ಅಹಮಲ್ಲನ ಸೈನ್ಯದ ನೇತೃತ್ವ ವಹಿಸಿ ಒಂದನೇ ನರಸಿಹ ನೇತೃತ್ವದಲ್ಲಿ ಸೈನ್ಯವನ್ನು ಸೋಲಿಸಿ, ಬರ್ಮರಸನು ಬನವಾಸಿಯ ರಾಜ್ಯಪಾಲನಾದನು. ಕರಗುಂದ ಪ್ರಭುತ್ವವನ್ನು ಮರಣೋತ್ತರವಾಗಿ ಪಾರಿಸಯ್ಯ ಮಗ ಶಾಂತಿಯಣ್ಣ ದಂಡನಾಯಕನಿಗೆ ನೀಡುತ್ತಾರೆ. ಈ ಶಾಂತಿಯಣ್ಣ ತನ್ನ ತಂದೆಗೆ ಪರೋಕ್ಷವಾಗಿ ವಿನಯ ಬಸದಿಯನ್ನು ನಿರ್ಮಿಸಿ ಅರುಹಗಟ್ಟವನ್ನು ದಾನ ನೀಡಿದ್ದರ ಬಗ್ಗೆ ಹಾಗೂ ಮಲ್ಲಗಾವುಂಡ ಮತ್ತು ಪ್ರಜೆಗಳು ಜಮೀನು ದಾನ ನೀಡಿದ್ದು ಯತಿಗಳ ಅನ್ನದಾನಕ್ಕಾಗಿ ದಾನ ನೀಡಿರುವ ಬಗ್ಗೆ ವಸುಪೂಜ್ಯ ಸಿದ್ಧನಾಥ ದೇವನ ಶಿಷ್ಯ ಮಲ್ಲಿಷೇಣ ಪಂಡಿತರು ಸ್ವೀಕರಿಸಿದ್ದಾರೆ. ಇಂತಹ ಇತಿಹಾಸ ವೈಭದಿಂದ ಕೂಡಿದ್ದ ಬಸದಿ ಕಾಲನ ಹೊಡೆತಕ್ಕೆ ಸಿಲುಕಿದೆ ಸುಂದರ ಕೆತ್ತನೆಗಳ ಬಸದಿಯ ಸುತ್ತಲಿನ ಕೆಲವು ಕಲ್ಲುಗಳು ಬಿದ್ದಿದೆ ಗರ್ಭಗುಡಿ, ಅಂತರಾಳ ನವರರಂಗ ನೋಡಲು ಕಾಣುತ್ತದೆ ಯಾವುದೇ ವಿಗ್ರಹ ಇಲ್ಲ ಬೆಳೆದು ನಿಂತಿರುವ ಕಳ್ಳಿ ಮುಳ್ಳಿನ ಪೊದರೆಯಿಂದ ಬಸದಿಯ ಕಲ್ಲುಗಳು ಮುಚ್ಚಿಹೋಗಿದೆ.ಬಸದಿಗಳು ವಿರಳವಾಗುತ್ತಿರುವುದರಿಂದ ಇಂತಹ ಬಸದಿಗಳನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಜೈನ ಮಠ ಜೈನ ಸಂಘಸಂಸ್ಥೆಗಳು ಸ್ಥಳೀಯ ಗ್ರಾಮ ಪಂಚಾಯಿತಿ ಬಸದಿ ಸುತ್ತ ಬೆಳೆದು ನಿಂತಿರುವ ಮುಳ್ಳಿನ ಪೊದೆ ಕೀಳಿಸಿ ಸ್ವಚ್ಛತೆ ಮಾಡಬೇಕಾಗಿದೆ. ಸ್ಥಳೀಯ ಶಾಸಕರಾದ ಹುಲ್ಲಹಳ್ಳಿ ಸುರೇಶ್ ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಬಸದಿಯಲ್ಲಿರುವ ಸುಂದರ ಕೆತ್ತನೆಯ ಅಲಂಕೃತ ಕಂಬ, ಭುವನೇಶ್ವರ ಭಾಗಗಳನ್ನು ಮರುಜೋಡಣೆ ಮಾಡಿ ಮುಂದಿನ ಪೀಳಿಗೆಗೆ ಇಂತಹ ಜೈನ ಬಸದಿಯನ್ನು ಉಳಿಸಲು ಮುಂದಾಗಬೇಕಾಗಿದೆ.
ತಹಶೀಲ್ದಾರ್, ತಾಲೂಕು ಪಂಚಾಯತಿ ಇಒ, ರಾಜ್ಯ ಪುರಾತತ್ವ ಇಲಾಖೆ ಜಿಲ್ಲಾ ಆಡಳಿತ ಬಸದಿ ಸಂರಕ್ಷಣೆ ಕಾರ್ಯೋನ್ಮುಖವಾಗಬೇಕಾಗಿದೆ. ಜೈನ ಬಸದಿ ಹಿನ್ನೆಲೆ ಸಾರುವ ನಾಮಫಲಕ, ಇಲ್ಲಿಗೆ ಹೋಗುವ ರಸ್ತೆ ಬಸದಿ ಸುತ್ತ ತೆಡೆಬೇಲಿ ಮುಳ್ಳಿನ ಪೊದೆಗಳ ತೆಗೆದು ಸ್ವಚ್ಚತೆ ಮಾಡಬೇಕಾಗಿದೆ ಎಂದು ಇತಿಹಾಸ ಸಂಶೋಧಕರಾದ ಶಶಿಧರ್ ಆಗ್ರಹಪಡಿಸಿದ್ದಾರೆ.