ಸಾರಾಂಶ
ರಾಮನಗರ: ಕ್ರೀಡಾಪಟುಗಳು ಮೇಜರ್ ಧ್ಯಾನ್ಚಂದ್ ಅವರ ಆದರ್ಶಗಳನ್ನು ಪಾಲಿಸಬೇಕು. ಇಂದಿನ ಮಕ್ಕಳು ಮುಂದೆ ದೇಶವನ್ನು ಸದೃಢ ಮಾಡಲು ಧ್ಯಾನ್ಚಂದ್ ಅವರ ಸಧೃಡತೆಯನ್ನು ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಜ್ಞಾನೇಶ್ವರಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಮೇಜರ್ ಧ್ಯಾನ್ಚಂದ್ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮೇಜರ್ ಧ್ಯಾನ್ಚಂದ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಮೇಜರ್ ಧ್ಯಾನ್ಚಂದ್ ಅವರು ದೇಶದ ಜನರಿಗೆ ಕ್ರೀಡೆಯಲ್ಲಿರುವ ಲಾಭಗಳು ಹಾಗೂ ಉಪಯೋಗಗಳನ್ನು ಮನವರಿಕೆ ಮಾಡಿಕೊಟ್ಟರು. ಅವರು ಹಾಕಿ ಕ್ರೀಡೆಯಲ್ಲಿ ಸಣ್ಣ ವಯಸ್ಸಿನಲ್ಲಿಯೇ ಸತತವಾಗಿ ಮೂರು ಬಾರಿ ಚಿನ್ನದ ಪದಕ ಪಡೆದುಕೊಂಡು, ಹ್ಯಾಟ್ರಿಕ್ ಸಾಧನೆ ಮಾಡಿ, ವಿಶ್ವಖ್ಯಾತಿಯಾದರು. ನಮ್ಮ ಜೀವನದಲ್ಲಿ ಕ್ರೀಡೆ ಎಷ್ಟು ಮುಖ್ಯ, ಯಾವುದೇ ವ್ಯಾಯಾಮವಿಲ್ಲದೆಯೇ ಮನುಷ್ಯ ಆರೋಗ್ಯವಾಗಿರಲು ಸಾಧ್ಯವಿಲ್ಲ. ಆಹಾರ ಎಷ್ಟು ಮುಖ್ಯವೋ, ಕ್ರೀಡೆಯೂ ಸಹ ಅಷ್ಟೇ ಮುಖ್ಯ. ಆರೋಗ್ಯ ವೃದ್ಧಿಪಡಿಸಿಕೊಳ್ಳಬೇಕೆಂದರೆ ಕ್ರೀಡೆ ಮುಖ್ಯವಾಗಿದೆ ಎಂದರು.
ಕ್ರೀಡೆಯು ಎಲ್ಲಾ ದೇಶವನ್ನು ಒಟ್ಟುಗೂಡಿಸುವ ಒಂದು ಮಾಧ್ಯಮ. ದೇಶ ದೇಶಗಳ ಮಧ್ಯೆ, ರಾಷ್ಟ್ರಗಳ ಮಧ್ಯೆ ಭಾವೈಕ್ಯ ಮೂಡಿಸಲು, ಗುಂಪು ರೂಪಿಸಲು, ಕೌಶಲ್ಯ ರೂಢಿಸಿಕೊಳ್ಳಲು ಕ್ರೀಡೆ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಶಿಕ್ಷಣದಿಂದ ಮಾತ್ರ ಪರಿಪೂರ್ಣರಾಗಲು ಸಾಧ್ಯವಿಲ್ಲ. ಶಿಕ್ಷಣದೊಂದಿಗೆ ಕ್ರೀಡೆಯೂ ಮುಖ್ಯ. ಕ್ರೀಡೆಯನ್ನು ರೂಢಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ಪರಿಪೂರ್ಣರಾಗಲು ಸಾಧ್ಯ. ಇದನ್ನು ಹಿಂದಿನ ಕಾಲದಲ್ಲಿಯೇ ಮನವರಿಕೆ ಮಾಡಿಕೊಟ್ಟವರು ಮೇಜರ್ ಧ್ಯಾನ್ಚಂದ್. ಕ್ರೀಡೆಗಳಿಗೆ ಉತ್ಸಾಹ ಹಾಗೂ ಪ್ರಾಮುಖ್ಯತೆ ನೀಡಲು ಧ್ಯಾನ್ ಚಂದ್ ಕಾರಣಕರ್ತರು. ಎಲ್ಲಾ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸಿ, ಉತ್ತಮ ಸದೃಢ ಪ್ರಜೆಗಳಾಗಿ ಕ್ರೀಡೆಗೆ ನಿರಂತರವಾಗಿ ಪ್ರೊತ್ಸಾಹ ನೀಡುವಂತೆ ಜ್ಞಾನೇಶ್ವರಿ ತಿಳಿಸಿದರು.ರಾಮನಗರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ ಮಾತನಾಡಿ, ಎಲ್ಲಾ ಮಕ್ಕಳು ಶಿಕ್ಷಣದ ಜೊತೆಗೆ ಕ್ರೀಡೆಗೂ ಮಹತ್ವ ನೀಡಬೇಕು. ಆಟ-ಪಾಠಗಳಲ್ಲಿ ಭಾಗವಹಿಸಬೇಕು. ಆಟ ಆಡುವ ಸಂದರ್ಭದಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಆಗುವ ಬದಲಾವಣೆಗಳು ಅಪಾರ. ಯಾವುದೇ ಒಂದು ಕ್ರೀಡೆಯಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಮಕ್ಕಳಿಗೆ ಉಲ್ಲಾಸ, ಸಂತೋಷ ಸಿಗುತ್ತದೆ. ಆಟ ಆಡುವ ಸಂದರ್ಭದಲ್ಲಿ ಮನಸ್ಸು ಏಕಾಗ್ರತೆ ಹಾಗೂ ಸಂತೋಷ ನೀಡುತ್ತದೆ. ಇಂತಹ ಮಹತ್ತರವಾದ ಕ್ರೀಡೆಗಳ ಬಗ್ಗೆ ಶಿಕ್ಷಕರು ಎಲ್ಲಾ ಹಂತಗಳಲ್ಲಿಯೂ ಸಹ ಅತ್ಯಂತ ವ್ಯವಸ್ಥಿತವಾಗಿ ಯಾವುದೇ ಕೊರತೆಯಾಗದಂತೆ ತಾಲ್ಲೂಕು ಹಾಗೂ ಜಿಲ್ಲಾ ಹಂತಗಳಲ್ಲಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ ಎಂದರು.
ದೈಹಿಕ ಶಿಕ್ಷಣ ಶಿಕ್ಷಕರಾದ ಮಹೇಶ್ ಅವರು ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತಾ ಸ್ವಾಗತಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ದೈಹಿಕ ವಿಷಯ ಶಿಕ್ಷಣಾಧಿಕಾರಿ ಸುಂದರ್ಗೌಡ, ತಾಲ್ಲೂಕು ದೈಹಿಕ ವಿಷಯ ಪರಿವೀಕ್ಷಕರಾದ ನೀಲಕಂಠ ಸ್ವಾಮಿ, ಗ್ರೇಡ್-1 ಶಿಕ್ಷಕರ ಸಂಘದ ಅಧ್ಯಕ್ಷರಾದ ಶಿವಮೂರ್ತಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ರಂಗಸಾಮಯ್ಯ, ಗಿರೀಶ್, ಅರ್ಚಕರಯ್ಯ, ಚಂದ್ರಯ್ಯ, ತಮ್ಮಣ್ಣ, ಮುಖ್ಯೋಪಾಧ್ಯಾಯರು, ದೈಹಿಕ ಶಿಕ್ಷಕರು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.
31ಕೆಆರ್ ಎಂಎನ್ 1.ಜೆಪಿಜಿರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮೇಜರ್ ಧ್ಯಾನ್ಚಂದ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.