ಸಾರಾಂಶ
ಉಡುಪಿ : ನೆರೆಯ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕಂಡು ತುಂಬಾ ಖೇದವಾಗಿದೆ. ಎಲ್ಲ ಹಿಂದುಗಳು ಕಳವಳಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇವತ್ತು ವಿದೇಶದಲ್ಲಿ ಮಾತ್ರವಲ್ಲ ನಮ್ಮ ಸ್ವದೇಶದೊಳಗೆ ಕೂಡ ಹಿಂದುಗಳ ಮೇಲಿನ ಆಕ್ರಮಣ ಅತಿಯಾಗುತ್ತಿದೆ. ಅದರ ವಿರುದ್ಧ ಧ್ವನಿ ಎತ್ತುವವರನ್ನು ಕೂಡ ದಮನಿಸುವ ಪ್ರವೃತ್ತಿ ಕಾಣುತ್ತಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಮಾಜದ ಎಲ್ಲರೂ ಜಾಗೃತರಾಗಬೇಕಾಗಿದೆ. ಇವತ್ತು ಯಾವ ಸರ್ಕಾರವನ್ನೂ ಕೂಡ ನಾವು ಆಕ್ಷೇಪಿಸುವ ಹಂತದಲ್ಲಿಯೂ ಇಲ್ಲ. ಈ ನೆಲೆಯಲ್ಲಿ ನಾವು ದೇವರಿಗೇ ಶರಣಾಗಬೇಕಾಗಿದೆ. ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಶಾಂತಿ ಸುಭಿಕ್ಷೆ ನೆಲೆಸಲಿ ಎಂದು ಎಲ್ಲರೂ ಸೇರಿ ದೇವರಲ್ಲಿ ಪ್ರಾರ್ಥಿಸೋಣ ಎಂದವರು ಕರೆ ನೀಡಿದ್ದಾರೆ.
ಹಿಂದುಗಳ ವಿರುದ್ಧ ಅಂತಾರಾಷ್ಟ್ರೀಯ ಪಿತೂರಿ: ಪುತ್ತಿಗೆ ಶ್ರೀಗಳು
ಬಾಂಗ್ಲಾದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳು ಬಹಳ ಕಳವಳಕಾರಿಯಾಗಿವೆ. ಇದರ ಹಿಂದೆ ಅಂತರಾಷ್ಟ್ರೀಯ ಪಿತೂರಿ ಇದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ಅಕ್ರಮಣ ದಬ್ಬಾಳಿಕೆಯನ್ನು ಗಮನಿಸಿದಾಗ ಹಿಂದೆ ಕಾಶ್ಮೀರದಲ್ಲಿ ಏನು ನಡೆಯಿತೋ ಅದೇ ನಡೆಯುತ್ತಿದೆ ಎಂದನ್ನಿಸುತ್ತಿದೆ. ಅಷ್ಟು ಚಿಕ್ಕ ಬಾಂಗ್ಲಾ ದೇಶದ ಹಿಂದುಗಳನ್ನು ಹೀಗೆ ನಡೆಸಿಕೊಳ್ಳುತ್ತಿದೆ ಎಂದರೆ ಅದು ಪಿತೂರಿ ಎನ್ನುವುದು ಸ್ಪಷ್ಟ. ಈ ಸಮಸ್ಯೆಯನ್ನು ಮೂಲಸಹಿತಿ ಕಿತ್ತು ಹಾಕಿ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಡಬೇಕು ಎಂದವರು ಆಗ್ರಹಿಸಿದ್ದಾರೆ.
ಹಿಂದುಗಳೆಲ್ಲ ಒಗ್ಗಟ್ಟಾಗಬೇಕು, ಬಾಂಗ್ಲಾದಲ್ಲಿ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಪ್ರತಿಕ್ರಿಯಿಸಬೇಕು, ಅದಕ್ಕೆ ತಮ್ಮ ಸಂಪೂರ್ಣ ಬೆಂಬಲ ಇದೆ ಎಂದವರು ತಿಳಿಸಿದ್ದಾರೆ.