ಉಗ್ರರ ನೆಲೆಗಳ ಮೇಲೆ ದಾಳಿ: ಶಾಸಕ ಶ್ಲಾಘನೆ

| Published : May 09 2025, 12:30 AM IST

ಸಾರಾಂಶ

ಪಾಕಿಸ್ತಾನಕ್ಕೆ ಭಾರತದ ಶಕ್ತಿ ಏನೆಂಬುದು ಅರ್ಥವಾಗಿದೆ. ಮಹಿಳೆ ಸಾರ್ಥ್ಯದಲ್ಲಿ ಪ್ರತೀಕಾರ ಹೀಗಿರಬೇಕಾದರೆ ಇನ್ನು ಪುರುಷರು ನೇತೃತ್ವದಲ್ಲಿ ದಾಳಿ ನಡೆದಿದ್ದರೆ ಇಷ್ಟೊತ್ತಿಗೆ ಪಾಕಿಸ್ತಾನ ಚಿತ್ರಾನ್ನವಾಗಿರುತ್ತಿತ್ತು.

ಬಂಗಾರಪೇಟೆ: ಜಮ್ಮುವಿನಲ್ಲಿ ಪ್ರವಾಸಿಗರ ಮೇಲೆ ಪಾಕ್‌ನ ಉಗ್ರರು ದಾಳಿ ಮಾಡಿ 26 ಹಿಂದೂಗಳನ್ನು ಕೊಂದಿದ್ದಕ್ಕೆ ಭಾರತ ಮುಸ್ಲಿಂ ಮಹಿಳೆ ನೇತೃತ್ವದಲ್ಲಿ ಪಾಕಿಸ್ತಾನದಲ್ಲಿದ್ದ ಉಗ್ರರ ನೆಲೆಗಳಿಗೆ ನುಗ್ಗಿ 100ಕ್ಕೂ ಹೆಚ್ಚಿನ ಉಗ್ರರನ್ನು ಕೊಲ್ಲುವ ಮೂಲಕ 15ದಿನಕ್ಕೇ ಪ್ರತಿಕಾರ ತೀರಿಸಿಕೊಂಡಿರುವುದಕ್ಕೆ ಯೋಧರ ಧೈರ್ಯವನ್ನು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಶ್ಲಾಘೀಸಿದರು.ತಾಲೂಕಿನ ಕೇತಗಾನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಭಾರತದ ಶಕ್ತಿ ಏನೆಂಬುದು ಅರ್ಥವಾಗಿದೆ. ಮಹಿಳೆ ಸಾರ್ಥ್ಯದಲ್ಲಿ ಪ್ರತೀಕಾರ ಹೀಗಿರಬೇಕಾದರೆ ಇನ್ನು ಪುರುಷರು ನೇತೃತ್ವದಲ್ಲಿ ದಾಳಿ ನಡೆದಿದ್ದರೆ ಇಷ್ಟೊತ್ತಿಗೆ ಪಾಕಿಸ್ತಾನ ಚಿತ್ರಾನ್ನವಾಗಿರುತ್ತಿತ್ತು. ಅಷ್ಟು ಶಕ್ತಿ ಭಾರತ ದೇಶಕ್ಕಿದೆ. 1971ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಪಾಕ್‌ನ ಉಗ್ರರನ್ನು ಪಾಲೋರ್ ತನಕ ಹಿಮ್ಮಟ್ಟಿಸಿದ್ದರು. ಆಗ ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡದಿದ್ದರೆ ಇವತ್ತು ಪಾಕಿಸ್ತಾನ ಭಾರತದ ವಶದಲ್ಲಿರುತ್ತಿತ್ತು ಎಂದರು.ಗ್ರಾಮಸ್ಥರು ಇಲಾಖಾವಾರು ಅಧಿಕಾರಿಗಳನ್ನು ಹುಡುಕಿಕೊಂಡು ಅಲೆಯುವುದನ್ನು ತಪ್ಪಿಸಲು ಎಲ್ಲಾ ಅಧಿಕಾರಿಗಳನ್ನು ಗ್ರಾಮಕ್ಕೆ ಕರೆದುಕೊಂಡು ಬರಲಾಗಿದೆ. ನಿಮ್ಮ ಎಲ್ಲಾ ಸಮಸ್ಯೆಗಳನ್ನು ಸ್ಥಳದಲ್ಲೆ ಬಗೆಹರಿಸಲು ಈ ಸಭೆ ಪೂರಕವಾಗಿದೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿದ್ದರೂ ಈ ಬಾರಿ ತಾಲೂಕಿನಲ್ಲಿ ಫಲಿತಾಂಶ ಮಾತ್ರ ನಿರೀಕ್ಷೆ ಮಾಡಿದಷ್ಟು ಬರದಿದ್ದಕ್ಕೆ ಶಾಸಕರು ಅಸಮಾಧಾನವ್ಯಕ್ತಪಡಿಸಿದರು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರಕರಣ ಮರುಕಳಿಸಿದಂತೆ ಶಿಕ್ಷಕರು ಎಚ್ಚರ ವಹಿಸಬೇಕೆಂದು ಹೇಳಿದರು.

ಈ ವೇಳೆ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಶ್ರೀನಿವಾಸ್, ಉಪಾಧ್ಯಕ್ಷೆ ರಾಧಮ್ಮ, ತಾಪಂ ಇಒ ರವಿಕುಮಾರ್, ಬಿಇಒ ಗುರುಮೂರ್ತಿ, ಸಿಡಿಪಿಒ ಮುನಿರಾಜು, ಸಮಾಜ ಕಲ್ಯಾಣಾಧಿಕಾರಿ ಅಂಜಲಿ, ಪಿಡಿಒ ಯಶವಂತ್, ಕೃಷಿ ಇಲಾಖೆ ಪ್ರತಿಭಾ, ಶಿವಾರೆಡ್ಡಿ, ಟಿಎಚ್‌ಒ ಸುನಿಲ್, ಆರ್‌ಎಫ್‌ಒ ಶ್ರೀಲಕ್ಷ್ಮೀ, ಸದಸ್ಯರಾದ ಶಶಿಧರರೆಡ್ಡಿ, ನಟರಾಜ್, ಮಂಜುನಾಥ್, ರೇಣುಕಾ ಇತರರು ಇದ್ದರು.