ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಆಹಾರ ಮಳಿಗೆಗಳ ಮೇಲೆ ತಪಾಸಣೆ ಹಾಗೂ ದಾಳಿ ಮುಂದುವರಿಯಲಿದೆ. ಕಿಚನ್ ಮತ್ತು ಸ್ಟೋರ್ಗಳಲ್ಲಿ ಗುಣಮಟ್ಟದ ಆಹಾರ ಪದಾರ್ಥಗಳನ್ನು ಮಾತ್ರ ಸಂಗ್ರಹಿಸಬೇಕು ಹಾಗೂ ನೈರ್ಮಲ್ಯ ಕಾಪಾಡಬೇಕು ಎಂದು ಆಹಾರ ಮಳಿಗೆಗಳ ಫ್ರ್ಯಾಂಚೈಸಿಗಳಿಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಎಚ್ಚರಿಕೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಆಹಾರ ಮಳಿಗೆಗಳ ಮೇಲೆ ತಪಾಸಣೆ ಹಾಗೂ ದಾಳಿ ಮುಂದುವರಿಯಲಿದೆ. ಕಿಚನ್ ಮತ್ತು ಸ್ಟೋರ್ಗಳಲ್ಲಿ ಗುಣಮಟ್ಟದ ಆಹಾರ ಪದಾರ್ಥಗಳನ್ನು ಮಾತ್ರ ಸಂಗ್ರಹಿಸಬೇಕು ಹಾಗೂ ನೈರ್ಮಲ್ಯ ಕಾಪಾಡಬೇಕು ಎಂದು ಆಹಾರ ಮಳಿಗೆಗಳ ಫ್ರ್ಯಾಂಚೈಸಿಗಳಿಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಎಚ್ಚರಿಕೆ ನೀಡಿದ್ದಾರೆ.ಮಂಗಳೂರಿನ ಕೆಎಫ್ಸಿ ಫುಡ್ ಔಟ್ಲೆಟ್ನಲ್ಲಿ ಕೊಳೆತ ಮಾಂಸ ಪತ್ತೆಯಾದ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸುತ್ತ ಮಾತನಾಡಿದ ಅವರು, ‘ಯಾವುದೇ ಸಂದರ್ಭದಲ್ಲೂ ಅಧಿಕಾರಿಗಳು ದಾಳಿ ನಡೆಸಬಹುದು. ತಪ್ಪಿತಸ್ಥರು ಎಷ್ಟೇ ದೊಡ್ಡವರಾಗಿದ್ದರೂ, ಸಣ್ಣವರಾಗಿದ್ದರೂ ಕ್ರಮ ಕೈಗೊಳ್ಳಲಾಗುವುದು. ಜನರ ಆರೋಗ್ಯವೇ ಸರ್ಕಾರದ ಮುಖ್ಯ ಕಾಳಜಿ’ ಎಂದರು.
ದಾಳಿ ನಡೆಸುವುದು ಕೋಪದಿಂದ ಅಥವಾ ಶಿಕ್ಷೆ ನೀಡುವ ಉದ್ದೇಶದಿಂದಲ್ಲ. ಆಹಾರ ಸುರಕ್ಷತೆಯಲ್ಲಿ ಎಲ್ಲಿ ತಪ್ಪಾಗಿದೆ ಎಂಬುದನ್ನು ಗುರುತಿಸಿ, ಜನರಿಗೆ ವಾಸ್ತವ ಪರಿಸ್ಥಿತಿ ತಿಳಿಸುವುದು ಸರ್ಕಾರದ ಜವಾಬ್ದಾರಿ. ಈಗಾಗಲೇ ಅಧಿಕಾರಿಗಳು ದಾಳಿ ನಡೆಸಿ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಿದ್ದಾರೆ. ಮುಂದೆಯೂ ಇಂತಹ ತಪಾಸಣೆಗಳು ನಡೆಯಲಿವೆ ಎಂದರು.ಪಿಜಿ, ಹಾಸ್ಟೆಲ್ಗಳೂ ತಪಾಸಣೆ: ಪಿಜಿ, ಹಾಸ್ಟೆಲ್, ಕೇಟರಿಂಗ್ ಹಾಗೂ ಪೇಯಿಂಗ್ ಗೆಸ್ಟ್ ಸೆಂಟರ್ಗಳ ಮಾಲೀಕರಿಗೂ ಸಚಿವರು ಎಚ್ಚರಿಕೆ ನೀಡಿದ್ದಾರೆ. ವಿದ್ಯಾರ್ಥಿಗಳು ಹಾಗೂ ಯುವಕ-ಯುವತಿಯರು ಮನೆ ಬಿಟ್ಟು ಪಿಜಿ, ಹಾಸ್ಟೆಲ್ಗಳಲ್ಲಿ ವಾಸಿಸುತ್ತಾರೆ. ಅವರ ಆಹಾರ ಮತ್ತು ಆರೋಗ್ಯದ ಬಗ್ಗೆ ಮಾಲೀಕರು ತಮ್ಮ ಸ್ವಂತ ಮಕ್ಕಳಂತೆ ಕಾಳಜಿ ವಹಿಸಬೇಕು. ಉತ್ತಮ ಗುಣಮಟ್ಟದ ಆಹಾರ ಹಾಗೂ ಸ್ವಚ್ಛತೆಯ ವ್ಯವಸ್ಥೆ ಇರುವವರು ಮಾತ್ರ ಪಿಜಿ ನಡೆಸಬೇಕು ಎಂದರು.
ಮುಂದಿನ ದಿನಗಳಲ್ಲಿ ಪಿಜಿ ಮತ್ತು ಹಾಸ್ಟೆಲ್ಗಳಲ್ಲೂ ತಪಾಸಣೆ ನಡೆಸಲಾಗುವುದು. ಆಹಾರ ಮತ್ತು ನೈರ್ಮಲ್ಯದ ವ್ಯವಸ್ಥೆ ಸರಿಯಾಗಿಲ್ಲದಿದ್ದರೆ ಪಿಜಿ ನಡೆಸಲು ಅನುಮತಿ ನೀಡದಿರುವ ಕುರಿತು ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ಜಂಟಿಯಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಖಾದರ್ ತಿಳಿಸಿದರು.ಗುಟ್ಕಾ ಕಂಪನಿಗಳಿಗಷ್ಟೇ ತೊಂದರೆ:
ರಾಜ್ಯದಲ್ಲಿ ಪಾನ್ ಮಸಾಲಾ ಮೇಲಿನ ನಿಷೇಧವನ್ನು ಸರ್ಕಾರ ಹಿಂಪಡೆದಿಲ್ಲ, ಹಿಂಪಡೆಯುವುದೂ ಇಲ್ಲ ಎಂದು ಪುನರುಚ್ಚರಿಸಿದ ಸಚಿವ ಖಾದರ್, ಈ ನಿಯಮದಿಂದ ಅಡಕೆ ಬೆಳೆಗಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಒಂದು ವೇಳೆ ತೊಂದರೆಯಾಗುವುದಿದ್ದರೆ ಅದು ಗುಟ್ಕಾ ಕಂಪನಿಗಳ ಮಾಲೀಕರಿಗೆ ಮಾತ್ರ ಎಂದರು. ನಿಕೋಟಿನ್ ಹಾಗೂ ಗುಟ್ಕಾ ಮಿಶ್ರಣವಿರುವ ವಸ್ತುಗಳನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ. ಪಾನ್ಮಸಾಲಾದಲ್ಲಿ ನಿಕೋಟಿನ್ ಮತ್ತು ಗುಟ್ಕಾ ಮಿಶ್ರಣವಾಗಬಾರದು ಎಂದರು.