ರಾಮನಾಮವೇ ಜನ್ಮರಕ್ಷಕ ಮಂತ್ರ. ರಾಮನಾಮಕ್ಕೆ ತಾರಕ ಮಂತ್ರ ಎಂದೂ ಹೆಸರಿದೆ. ಸುಖ ಸಂಸಾರ, ಆನಬಂದಕ್ಕೆ ರಾಮನಾಮ ಮಂತ್ರ ಪೂರಕವಾಗಿದೆ. ಭಗವಾನ್ ರಾಮ ನಾಮದ ಜಪವನ್ನು ಪ್ರತಿ ಹಿಂದೂಗಳೂ ಮಾಡಬೇಕಾಗಿದ್ದು, ಆ ಮೂಲಕ ಪುಣ್ಯ ಸಂಪಾದನೆ ಮಾಡಬೇಕು. ರಾಮತಾರಕ ಮಂತ್ರ ಅದಕ್ಕೆ ಸರಳ ಮಾರ್ಗ ಎಂದು ಕಂಚಿ ಕಾಮಕೋಟಿ ಪೀಠಾಧಿಪತಿ ಶ್ರೀ ಶಂಕರ ವಿಜೇಯೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.
ಪುತ್ತೂರು: ರಾಮನಾಮವೇ ಜನ್ಮರಕ್ಷಕ ಮಂತ್ರ. ರಾಮನಾಮಕ್ಕೆ ತಾರಕ ಮಂತ್ರ ಎಂದೂ ಹೆಸರಿದೆ. ಸುಖ ಸಂಸಾರ, ಆನಬಂದಕ್ಕೆ ರಾಮನಾಮ ಮಂತ್ರ ಪೂರಕವಾಗಿದೆ. ಭಗವಾನ್ ರಾಮ ನಾಮದ ಜಪವನ್ನು ಪ್ರತಿ ಹಿಂದೂಗಳೂ ಮಾಡಬೇಕಾಗಿದ್ದು, ಆ ಮೂಲಕ ಪುಣ್ಯ ಸಂಪಾದನೆ ಮಾಡಬೇಕು. ರಾಮತಾರಕ ಮಂತ್ರ ಅದಕ್ಕೆ ಸರಳ ಮಾರ್ಗ ಎಂದು ಕಂಚಿ ಕಾಮಕೋಟಿ ಪೀಠಾಧಿಪತಿ ಶ್ರೀ ಶಂಕರ ವಿಜೇಯೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದಲ್ಲಿ ೩ನೇ ದಿನ ಶನಿವಾರ ನಡೆದ ಧರ್ಮ ಸಂದೇಶ ಕಲಾಪದಲ್ಲಿ ಅವರು ಸಂದೇಶ ನೀಡಿದರು. ಶಾಸ್ತ್ರೀಯ ವೈದಿಕ ಕುಟುಂಬದಿಂದ ಬಂದವರು ವೇದಾಧ್ಯಯನ ಮಾಡಬೇಕು. ಒಂದು ಮನೆಯಿಂದ ಒಬ್ಬರಾದರೂ ವೇದಾಧ್ಯಯನ ಮಾಡುವ ಮೂಲಕ ಸನಾತನ ಶ್ರೀಮಂತ ಪರಂಪರೆ ಉಳಿಸಬೇಕು ಎಂದು ಹೇಳಿದ ಶ್ರೀಗಳು, ಹನುಮಗಿರಿ ಕ್ಷೇತ್ರದಲ್ಲಿ ರಾಮ ಮತ್ತು ಹನುಮರ ಸಮ್ಮಿಳಿತ ಶಕ್ತಿಯಿದೆ ಎಂದರು.ಸಂದೇಶ ನೀಡಿದ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮ ನಾಮ ತಾರಕ ಮಂತ್ರವನ್ನು ೧೩ ಸಾವಿರ ಭಕ್ತರು ದೀಕ್ಷೆ ಮೂಲಕ ಪಠಿಸಿದ್ದು ಇತಿಹಾಸವೇ ಸರಿ. ರಾಮ ನಾಮದ ಬಲದಿಂದ ಬೇಡನಾಗಿದ್ದ ರತ್ನಾಕರ ವಾಲ್ಮೀಕಿ ಮಹರ್ಷಿಯಾದ. ಸಾಮಾನ್ಯರಾದ ನಾವು ಕೂಡ ರಾಮ ನಾಮ ಸ್ಮರಣೆಯಿಂದ ಶ್ರೇಷ್ಠರಾಗಲು ಸಾಧ್ಯ ಎಂದರು.ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಧರ್ಮ ಸಂಸ್ಕಾರ ವೃದ್ಧಿಗಾಗಿ ನಮ್ಮೆಲ್ಲರ ಕೊಡುಗೆ ಇರಬೇಕು ಎಂದು ಹೇಳಿದರು.
ಧರ್ಮಶ್ರೀ ಪ್ರತಿಷ್ಠಾನದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರಧಾನ ಕಾರ್ಯದರ್ಶಿಗಳಾದ ಆರ್.ಸಿ. ನಾರಾಯಣ ರೆಂಜ, ನಹುಷ, ಪದಾಧಿಕಾರಿಗಳಾದ ಸೀತಾರಾಮ ರೈ ಕೆದಂಬಾಡಿ ಗುತ್ತು, ಸಾಜ ರಾಧಾಕೃಷ್ಣ ಆಳ್ವ, ಶಶಿಕುಮಾರ್ ರೈ ಬಾಲ್ಯೊಟ್ಟು, ಮುರಳಿಕೃಷ್ಣ ಹಸಂತಡ್ಕ, ಚನಿಲ ತಿಮ್ಮಪ್ಪ ಶೆಟ್ಟಿ, ಜೀವಂಧರ ಜೈನ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಅಳದಂಗಡಿ ತಿಮ್ಮಣ್ಣರಸ ಪದ್ಮಪ್ರಸಾದ್ ಅಜಿಲ ಮತ್ತಿತರರು ಇದ್ದರು. ಹಿರಿಯ ನ್ಯಾಯವಾದಿ ಮಹೇಶ್ ಕಜೆ ಕಾರ್ಯಕ್ರಮ ನಿರ್ವಹಿಸಿದರು.ಶ್ರೀರಾಮ ತಾರಕ ಮಹಾಯಾಗದ ಪೂರ್ಣಾಹುತಿ: ಕಂಚಿ ಕಾಮಕೋಟಿ ಪೀಠದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ, ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ತೀರ್ಥ ಸ್ವಾಮೀಜಿ ಸಮ್ಮುಖದಲ್ಲಿ ಶ್ರೀರಾಮ ತಾರಕ ಮಹಾಯಾಗದ ಪೂರ್ಣಾಹುತಿ ನಡೆಸಲಾಯಿತು. ಯಾಗ ಮಂಟಪದಲ್ಲಿ ಅಷ್ಟೋತ್ತರ ಶತ ನಾಳಿಕೇರ ಗಣಹೋಮ ನಡೆದ ಬಳಿಕ ೧೦೦ ವೈದಿಕರಿಂದ ಜಪ ಪಠಣ ಆರಂಭಗೊಂಡಿತು. ಇದಕ್ಕೂ ಮೊದಲು ಕಳೆದ ಒಂದು ತಿಂಗಳಿನಿಂದ ಜಪ ದೀಕ್ಷೆ ಪಡೆದ ಸುಮಾರು ೧೩ ಸಾವಿರ ಭಕ್ತರು ತಮ್ಮ ತಮ್ಮ ಮನೆಗಳಲ್ಲಿ ಶ್ರೀ ರಾಮ ತಾರಕ ಮಂತ್ರದ ಪಠಣ ಮಾಡಿದ್ದರು. ಒಂದು ಕೋಟಿ ಶ್ರೀರಾಮ ನಾಮ ತಾರಕ ಮಂತ್ರ ಪಠಣ ಮಾಡುವ ಗುರಿ ಇಟ್ಟುಕೊಳ್ಳಲಾಗಿದ್ದು, ಅದು ಪೂರ್ಣಗೊಂಡ ಬಳಿಕ ಶನಿವಾರ ಶ್ರೀರಾಮ ತಾರಕ ಯಾಗ ನಡೆಸಲಾಯಿತು. ಪ್ರಾರ್ಥನೆ, ಪುಣ್ಯಾಹ ನಡೆದ ಮೇಲೆ ಅರಣಿ ಮಥನದ ಮೂಲಕ ಅಗ್ನಿ ಸೃಜಿಸಿ ಅದರಿಂದ ಪ್ರಧಾನ ಕುಂಡದಲ್ಲಿ ಅಗ್ನಿ ಸ್ಥಾಪನೆ ಮಾಡಲಾಯಿತು. ಬಳಿಕ ೧೧೦ ವೈದಿಕರು ಯಾಗ ನಡೆಸಿಕೊಟ್ಟರು. ೧೦ ಕುಂಡಗಳಲ್ಲಿ ಹೋಮ ನಡೆದು, ಪ್ರಧಾನ ಕುಂಡದಲ್ಲಿ ಪೂರ್ಣಾಹುತಿ ನಡೆಯಿತು. ಬೆಳಗ್ಗೆ ೭ ಗಂಟೆಗೆ ಆರಂಭಗೊಂಡ ಯಾಗ ೧೧ ಗಂಟೆಗೆ ಪೂರ್ಣಗೊಂಡಿದ್ದು, ೧೨ ಗಂಟೆಗೆ ಪೂರ್ಣಾಹುತಿ ನಡೆಸಲಾಯಿತು.