ಸಾರಾಂಶ
ಕೆಳಸೇತುವೆಯ (ಅಂಡರ್ ಪಾಸ್)ನ ಪಾದಚಾರಿ ಮಾರ್ಗದ ಮೆಟ್ಟಿಲುಗಳ ಮೇಲೆ ಬುಲೆಟ್ ಚಲಾಯಿಸಲು ಯತ್ನಿಸಿ ಖಾಸಗಿ ವಿಮಾನಯಾನ ಸಂಸ್ಥೆ ಉದ್ಯೋಗಿಯೊಬ್ಬ ಮೃತಪಟ್ಟು, ಆತನ ಸ್ನೇಹಿತೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ವಿಂಡ್ಸನ್ ಮ್ಯಾನರ್ ಹೋಟೆಲ್ ಸಮೀಪ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೆಳಸೇತುವೆಯ (ಅಂಡರ್ ಪಾಸ್)ನ ಪಾದಚಾರಿ ಮಾರ್ಗದ ಮೆಟ್ಟಿಲುಗಳ ಮೇಲೆ ಬುಲೆಟ್ ಚಲಾಯಿಸಲು ಯತ್ನಿಸಿ ಖಾಸಗಿ ವಿಮಾನಯಾನ ಸಂಸ್ಥೆ ಉದ್ಯೋಗಿಯೊಬ್ಬ ಮೃತಪಟ್ಟು, ಆತನ ಸ್ನೇಹಿತೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ವಿಂಡ್ಸನ್ ಮ್ಯಾನರ್ ಹೋಟೆಲ್ ಸಮೀಪ ನಡೆದಿದೆ.ದೇವನಹಳ್ಳಿ ಸಮೀಪದ ನಿವಾಸಿ ದೀಪಕ್ (31) ಮೃತ ದುರ್ದೈವಿ. ಈ ಘಟನೆಯಲ್ಲಿ ಗಾಯಗೊಂಡಿರುವ ಮೃತನ ಸ್ನೇಹಿತೆ ರೋಷಿಣಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕಳೆದ ಭಾನುವಾರ ನಗರಕ್ಕೆ ಬಂದು ರಾತ್ರಿ ದೀಪಕ್ ಮನೆಗೆ ಮರಳುವಾಗ ಮಾರ್ಗ ಮಧ್ಯೆ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾಸಗಿ ವಿಮಾನಯಾನ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ದೀಪಕ್, ತನ್ನ ಪೋಷಕರ ಜತೆ ದೇವನಹಳ್ಳಿ ಬಳಿ ನೆಲೆಸಿದ್ದ. ಕಳೆದ ಭಾನುವಾರ ರಾತ್ರಿ ನಗರಕ್ಕೆ ಸುತ್ತಾಡಲು ತನ್ನ ಸ್ನೇಹಿತೆ ರೋಷಿಣಿ ಜತೆ ಬೈಕ್ನಲ್ಲಿ ಆತ ಬಂದಿದ್ದ. ಬಳಿಕ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮನೆಗೆ ಮರಳುವಾಗ ವಿಂಡ್ಸನ್ ಮ್ಯಾನರ್ ಅಂಡರ್ ಪಾಸ್ನಲ್ಲಿ ಬೈಕ್ನಲ್ಲಿ ಸಾಹಸ ಮಾಡಲು ಹೋಗಿ ಆತ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾನೆ.ಆ ಕೆಳಸೇತುವೆಯ ಪಾದಚಾರಿ ಮಾರ್ಗದ ಮೆಟ್ಟಿಲುಗಳಿಂದ ಬೈಕ್ ಓಡಿಸಿಕೊಂಡು ಕೆಳಗಿಳಿಯಲು ದೀಪಕ್ ಯತ್ನಿಸಿದ್ದಾನೆ. ಈ ಹಂತದಲ್ಲಿ ನಿಯಂತ್ರಣ ತಪ್ಪಿ ಕೆಳಗೆ ದೀಪಕ್ ಹಾಗೂ ಆತನ ಸ್ನೇಹಿತೆ ಬಿದ್ದಿದ್ದಾರೆ. ಕೂಡಲೇ ಈ ಇಬ್ಬರ ನೆರವಿಗೆ ಸ್ಥಳೀಯರು ಧಾವಿಸಿದ್ದಾರೆ. ಆದರೆ ಘಟನೆಯಲ್ಲಿ ತಲೆಗೆ ಗಂಭೀರ ಸ್ವರೂಪದ ಪೆಟ್ಟಾಗಿ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ. ಹೈಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
;Resize=(128,128))
;Resize=(128,128))
;Resize=(128,128))