ಹುಬ್ಬಳ್ಳಿ:
ನಗರದ ಬೆಂಗೇರಿ ಗಾಂಧಿನಗರ ಘೋಷಿತ ಸ್ಲಂ ಪ್ರದೇಶದ 92 ಕುಟುಂಬಗಳನ್ನು ತೆರವುಗೊಳಿಸುವ ಯತ್ನ ನಡೆಯುತ್ತಿದ್ದು, ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ನಿವಾಸಿಗಳ ಹಕ್ಕು ರಕ್ಷಿಸಬೇಕು ಎಂದು ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗೇರಿ ಗಾಂಧಿನಗರ ಸ್ಲಂ ಪ್ರದೇಶವನ್ನು ಸರ್ಕಾರವೇ ಘೋಷಿತ ಸ್ಲಂ ಎಂದು ಘೋಷಿಸಿದ್ದು, ಸರ್ಕಾರದ ಆದೇಶದಂತೆ ಅಲ್ಲಿನ 92 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. ಜತೆಗೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಲಾಗಿದೆ ಎಂದರು.
ಸುಮಾರು 150 ವರ್ಷಗಳಿಂದ ಈ ಜಾಗದಲ್ಲಿ ವಾಸವಿದ್ದು ತಮ್ಮ ಜೀವನ ಕಟ್ಟಿಕೊಂಡಿರುವ ಬಡ ಕುಟುಂಬಗಳನ್ನು ವಿವಿಧ ದಾಖಲೆಗಳ ನೆಪದಲ್ಲಿ ನ್ಯಾಯಾಲಯದ ಪ್ರಕ್ರಿಯೆ ಬಳಸಿಕೊಂಡು ತೆರವುಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇದು ಸ್ಲಂ ನಿವಾಸಿಗಳಲ್ಲಿ ಭಯದ ವಾತಾವರಣ ಸೃಷ್ಟಿಸಿದೆ ಎಂದಿರುವ ಅವರು, 2016ರಲ್ಲಿ ಜಾರಿಯಾದ ಸ್ಲಂ ಕಾಯ್ದೆಯ ಪ್ರಕಾರ ಘೋಷಿತ ಸ್ಲಂಗಳಲ್ಲಿ ವಾಸಿಸುವ ಜನರ ಬದುಕು ಮತ್ತು ವಾಸದ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದ್ದರಿಂದ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಸ್ಲಂ ನಿವಾಸಿಗಳ ಪರವಾಗಿ ನಿಲ್ಲಬೇಕು. ಈ ಪ್ರಕರಣದಲ್ಲಿ ನ್ಯಾಯ ದೊರಕಿಸಲು ಅಗತ್ಯ ದಾಖಲೆ ಸಂಗ್ರಹಿಸಿ ಜನರ ಪರವಾಗಿ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.ಸುಮಾರು 3 ಎಕರೆ 17 ಗುಂಟೆ ಪ್ರದೇಶದಲ್ಲಿ 92 ಕುಟುಂಬಗಳು ವಾಸಿಸುತ್ತಿವೆ. ವಿವಾದವು ಕೇವಲ 15 ಗುಂಟೆ ಜಾಗಕ್ಕೆ ಸಂಬಂಧಿಸಿದ್ದು, ಅದನ್ನು ಗುರುತಿಸಿ ಕ್ರಮ ಕೈಗೊಳ್ಳುವ ಬದಲು ಇಡೀ ಪ್ರದೇಶವನ್ನು ತೆರವುಗೊಳಿಸಲು ಯತ್ನಿಸಲಾಗುತ್ತಿದೆ. ಈಗಾಗಲೇ ಹಂತ-ಹಂತವಾಗಿ 30ಕ್ಕೂ ಹೆಚ್ಚು ಮನೆ, ಬಳಿಕ 25 ಮನೆ ಕೆಡವಿ ಜಾಗ ಕಬಳಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಈ ಕುಟುಂಬಗಳ ಬದುಕನ್ನು ರಕ್ಷಿಸದಿದ್ದರೆ ರಾಜ್ಯಾದ್ಯಂತ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಇಮ್ತಿಯಾಜ್ ಮಾನ್ವಿ, ನಾಗರಾಜ ಜಾಲಿಗಿಡದ, ಸೋಮಶೇಖರ ಯಾದವ್, ಶೋಭಾ ಕಮತರ, ಹನುಮಂತ ಕಟ್ಟಿಮನಿ ಸೇರಿದಂತೆ ಹಲವರಿದ್ದರು.
