ಮಿಲ್ಲತ್ ನಗರದ ನಿವಾಸಿ ತೌಫಿಕ್ ಹೊರಕೇರಿ (19) ಅಪಹರಣಕ್ಕೊಳಗಾಗಿ ಸಿನಿಮಿಯ ರೀತಿಯಲ್ಲಿ ತಪ್ಪಿಸಿಕೊಂಡು ಬಂದ ಯುವಕ. ಈತ ಈ ಹಿಂದೆ ಸೆಟ್ಲ್‌ಮೆಂಟ್‌ನ ಜಾಧವ್‌ ಯುವಕರೊಂದಿಗೆ ಸಂಪರ್ಕ ಹೊಂದಿದ್ದರಿಂದ ಕೆಲವರು ಹಲವು ಬಾರಿ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಹುಬ್ಬಳ್ಳಿ:

ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೋರ್ವನನ್ನು ಅಪಹರಿಸಿದ ಗುಂಪು ಬಳಿಕ ಶೆಡ್‌ ಒಂದಕ್ಕೆ ಕರೆದೊಯ್ದು ಅಲ್ಲಿ ಆತನ ಮೇಲೆ ತಲ್ವಾರ್‌, ಚಾಕು ಮತ್ತು ಬಡಿಗೆ ಸೇರಿದಂತೆ ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆಗೆ ಯತ್ನ ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಆತ ಅಲ್ಲಿಂದ ತಪ್ಪಿಸಿಕೊಂಡು ಕೆಎಂಸಿಆರ್‌ಐಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ. 22 ಜನರ ವಿರುದ್ಧ ಅಶೋಕ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಮಿಲ್ಲತ್ ನಗರದ ನಿವಾಸಿ ತೌಫಿಕ್ ಹೊರಕೇರಿ (19) ಅಪಹರಣಕ್ಕೊಳಗಾಗಿ ಸಿನಿಮಿಯ ರೀತಿಯಲ್ಲಿ ತಪ್ಪಿಸಿಕೊಂಡು ಬಂದ ಯುವಕ. ಈತ ಈ ಹಿಂದೆ ಸೆಟ್ಲ್‌ಮೆಂಟ್‌ನ ಜಾಧವ್‌ ಯುವಕರೊಂದಿಗೆ ಸಂಪರ್ಕ ಹೊಂದಿದ್ದರಿಂದ ಕೆಲವರು ಹಲವು ಬಾರಿ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ದೂರಿನಲ್ಲೇನಿದೆ:

ಜು. 14ರಂದು ಸಂಜೆ 4.30ಕ್ಕೆ ಸ್ನೇಹಿತ ಅರುಣನೊಂದಿಗೆ ಸಬ್ ಜೈಲಿನಲ್ಲಿದ್ದ ಪರಿಚಯಸ್ಥನನ್ನು ಭೇಟಿಯಾಗಲು ತೆರಳುತ್ತಿದ್ದ ವೇಳೆ ಅಶೋಕನಗರದ ಚಿಗರಿ ಗಾರ್ಡನ್ ಸಮೀಪ ಆರೋಪಿಗಳು ಸ್ಕೂಟಿಯನ್ನು ಅಡ್ಡಗಟ್ಟಿ, ಚಾಕು ತೋರಿಸಿ ಹಲ್ಲೆ ನಡೆಸಿ ಅಪಹರಿಸಿ ಅರಳಿಕಟ್ಟಿ ಓಣಿಯಲ್ಲಿನ ಶೆಡ್‌ಗೆ ಕರೆದೊಯ್ದಿದ್ದಾರೆ. ಅಲ್ಲಿ ಮೊದಲೇ ಸೇರಿದ್ದ ಹಲವರು ತಲ್ವಾರ್, ಚಾಕು ಹಾಗೂ ಬಡಿಗೆಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪ್ರಮುಖ ಆರೋಪಿ ತಲ್ವಾರ್‌ದಿಂದ ಕುತ್ತಿಗೆಗೆ ಇರಿದು ಕೊಲೆ ಮಾಡಲು ಯತ್ನಿಸಿದಾಗ ಅವರನ್ನು ದೂಡಿ ತಾನು ಅಲ್ಲಿಂದ ತಪ್ಪಿಸಿಕೊಂಡಿದ್ದಾಗಿ ತೌಫಿಕ್‌ ದೂರಿನಲ್ಲಿ ತಿಳಿಸಿದ್ದಾನೆ.

ಹಲ್ಲೆ ವೇಳೆ ಆರೋಪಿಗಳು ₹3,500 ನಗದು ಕಸಿದುಕೊಂಡು, ಪೊಲೀಸರಿಗೆ ದೂರು ನೀಡಿದರೆ ಕುಟುಂಬ ಸಮೇತ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಿರುವ ತೌಫಿಕ್‌, ಆರೋಪಿಗಳಿಂದ ತಪ್ಪಿಸಿಕೊಂಡು ಪರಿಚಿತನ ಸಹಾಯದಿಂದ ಆಟೋವೊಂದರಲ್ಲಿ ಕೆಎಂಸಿಆರ್‌ಐಗೆ ದಾಖಲಾಗಿದ್ದಾನೆ. ಚಿಕಿತ್ಸೆ ಪಡೆದ ನಂತರ ಅಶೋಕನಗರ ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿದ್ದಾನೆ.

22 ಜನರ ಮೇಲೆ ಪ್ರಕರಣ ದಾಖಲು:

ಹಲ್ಲೆ ಮಾಡಿದ ಆರೋಪದ ಮೇಲೆ ದಾವೂದ್ ನದಾಫ್, ಜಿದ್ದಿ ಮಲ್ಲಿಕ್, ಆಕಾಶ ಮೊದಲಿಯಾರ್, ಅಯೂಬ್ ಬೇಪಾರಿ, ಖುಯ್ ಇಮ್ಮು, ಜಿಲಾನಿ, ಮಮ್ಮನಿ ಊರ್ಫ ಮಹಮ್ಮದಗೌಸ್, ಝೈಲು ನದಾಫ್, ಜಸ್ಸು ಸಿಂಗ್, ಯಶ್, ಶಿವಾಜಿ, ಶಶಿ ಚಲವಾದಿ ಹಾಗೂ 8-10 ಜನ ಅಪರಿಚಿತರು ಎಂದು ದೂರಿನಲ್ಲಿ ತಿಳಿಸಲಾಗಿದ್ದು, 22 ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಯುವಕನನ್ನು ವಿಚಾರಣೆ ನಡೆಸಿದ ಪೊಲೀಸರು, ಅಪಹರಣ ನಡೆದ ಸ್ಥಳ ಹಾಗೂ ಹಲ್ಲೆ ಮಾಡಿದ ಶೆಡ್‌ನ ಪಂಚನಾಮೆ ಮಾಡಿದ್ದಾರೆ.