ಸಾರಾಂಶ
ಕಚೇರಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಅಯೋಧ್ಯೆಯ ರಾಮಮಂದಿರ ನಿರ್ಮಾಣದ ದಿನದಂದೇ ಆರ್ಎಸ್ಎಸ್ ಕಚೇರಿಯ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ. ಈ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸಾಕಷ್ಟು ಮುಖಂಡರು ಸಹಕಾರ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ತಾಪಂ ಹಿಂಭಾಗದ ಭೋವಿ ಕಾಲೋನಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಆರ್ಎಸ್ಎಸ್ (ರಾಷ್ಟ್ರೀಯ ಸ್ವಯಂ ಸೇವಕ ಸಂಘ) ಕಚೇರಿ ಕಟ್ಟಡದ ಕಾಮಗಾರಿಯನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಪರಿಶೀಲನೆ ನಡೆಸಿದರು.ಕಟ್ಟಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಸಿ.ಎಸ್.ಪುಟ್ಟರಾಜು ಕಾಮಗಾರಿ ವೀಕ್ಷಿಸಿದ ಬಳಿಕ ಮಾತನಾಡಿ, ಆರ್ಎಸ್ಎಸ್ ಕಚೇರಿ ನಿರ್ಮಾಣ ಮಾಡಬೇಕೆಂಬ ಕಾರ್ಯಕರ್ತರು, ಮುಖಂಡರ ಬಹುದಿನದ ಕನಸು ಈಗ ನನಸ್ಸಾಗುತ್ತಿದೆ ಎಂದರು.
ಕಚೇರಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಅಯೋಧ್ಯೆಯ ರಾಮಮಂದಿರ ನಿರ್ಮಾಣದ ದಿನದಂದೇ ಆರ್ಎಸ್ಎಸ್ ಕಚೇರಿಯ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ. ಈ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸಾಕಷ್ಟು ಮುಖಂಡರು ಸಹಕಾರ ನೀಡಿದ್ದಾರೆ ಎಂದರು.ನೇತ್ರ ವೈದ್ಯೆ ಮಣಿಕರ್ಣಿಕ ಅವರು ಕಚೇರಿ ನಿರ್ಮಾಣಕ್ಕೆ ನಿವೇಶನ ಖರೀದಿಸಿಕೊಟ್ಟು ಸಹಕಾರ ನೀಡಿದ್ದಾರೆ. ಅಲ್ಲದೇ ಬಹಳ ಜನರ ಸಹಕಾರವೂ ಇದೆ. ನಾನು ಸಚಿವನಾಗಿ ಕೆಲಸ ಮಾಡುವ ವೇಳೆಯೂ ವೈಯಕ್ತಿಕವಾಗಿ ಕಾಂಕ್ರಿಟ್ ಕೊಡಿಸುವ ಕೆಲಸ ಮಾಡಿದ್ದೆ. ಈಗ ಕಾರ್ಯಕರ್ತರ ಒತ್ತಾಸೆಯ ಮೇರೆಗೆ ಮತ್ತಷ್ಟು ಸಹಕಾರ ನೀಡಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ದೇಶದ ಜನರ ಬಹುದಿನಗಳ ಕನಸಾದ ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ರಾಮಮಂದಿರ ಲೋಕಾರ್ಪಣೆಯೂ ಜ.22 ರಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಹಕಾರಗೊಳ್ಳುತ್ತಿದೆ. ಅದೇ ದಿನ ಆರ್ಎಸ್ಎಸ್ ಕಚೇರಿ ಉದ್ಘಾಟನೆಯಾಗುತ್ತಿದೆ. ಆರ್ಎಸ್ಎಸ್ ಕಾರ್ಯಕರ್ತರು, ಮುಖಂಡರು ನಮ್ಮನ್ನು ಸಹ ಆಹ್ವಾನಿಸಿದ್ದು, ದಂಪತಿಗಳ ಸಮೇತ ಆಗಮಿಸಿ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಗುವುದು ಎಂದು ಹೇಳಿದರು.ಈ ವೇಳೆ ವೈದ್ಯೆ ಮಣಿಕರ್ಣಿಕಾ ಸೇರಿ ಆರ್ಎಸ್ಎಸ್ ಕಾರ್ಯಕರ್ತರು, ಜೆಡಿಎಸ್ ಪಕ್ಷದ ಮುಖಂಡರು ಹಾಜರಿದ್ದರು.