ಸುಂಟಿಕೊಪ್ಪ ಹೋಬಳಿ ಅಭಿವೃದ್ಧಿಗೆ ಹಂತ ಹಂತವಾಗಿ ಅನುದಾನ ಒದಗಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ಹೇಳಿದ್ದಾರೆ.

ಕನ್ನಡಪ್ರಭವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಹೋಬಳಿ ಅಭಿವೃದ್ಧಿಗೆ ಹಂತ ಹಂತವಾಗಿ ಅನುದಾನ ಒದಗಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ಹೇಳಿದ್ದಾರೆ.

ಮಂಗಳವಾರ ಸಂಜೆ ಸುಂಟಿಕೊಪ್ಪದ ವಾಹನ ಚಾಲಕರ ಮತ್ತು ಆಟೋ ಚಾಲಕ ಮತ್ತು ಮಾಲೀಕರ ಸಂಘದ ನಿಲ್ದಾಣದಲ್ಲಿ ಮೇಲ್ಛಾವಣಿ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಮಾತನಾಡಿದರು. ಈ ಕಾಮಗಾರಿಯನ್ನು ರಾಜ್ಯ ರಸ್ತೆ ನಿರ್ಮಾಣ ನಿಗಮಕ್ಕೆ ವಹಿಸಲಾಗಿದ್ದು ಶಾಸಕರ ಅನುದಾನ ೪೦ ಲಕ್ಷ ರು ನಿಗದಿಗೊಳಿಸಲಾಗಿದ್ದು, ಅನುದಾನ ಸಾಲುವುದಿಲ್ಲ. ಆದರೆ ಅನುದಾನ ಒದಗಿಸುವ ಜವಬ್ಧಾರಿ ನಮ್ಮದು ಎಂದರು.

ಕಾಮಗಾರಿ ಸಂದರ್ಭ ಸಾರ್ವಜನಿಕರು ಸೇರಿದಂತೆ ವಾಹನ ಚಾಲಕರು ಮತ್ತು ಆಟೋ ಚಾಲಕರು ಸಹಕಾರ ನೀಡಬೇಕಾಗಿರುವುದು ಅತೀ ಅಗತ್ಯವೆಂದು ಕಿವಿಮಾತು ಹೇಳಿದರು. ಕಾಮಗಾರಿ ಕುರಿತು ಎಂಜಿನಿಯರ್ ಅವರು ಮೇಲ್ಛಾವಣಿ ವಿನ್ಯಾಸದ ಬಗ್ಗೆ ಮಾಹಿತಿ ನೀಡಬೇಕೆಂದು ನಿರ್ದೇಶನ ನೀಡಿದರು. ಪಂಚಾಯಿತಿ ವತಿಯಿಂದ ನೂತನ ಮಾರುಕಟ್ಟೆಯ ಬಗ್ಗೆ ಕಾರ್ಯಕ್ರಮ ರೂಪಿಸಬೇಕಾಗಿದ್ದು ನೂತನ ಮಾರುಕಟ್ಟೆಗೆ ಸ್ಥಳಾಂತರಗೊಂಡ ನಂತರವೇ ಹಳೆಯ ಮಾರುಕಟ್ಟೆಯನ್ನು ಬಸ್‌ನಿಲ್ದಾಣವಾಗಿ ಪರಿವರ್ತಿಸಬಹುದು. ಒಂದು ವೇಳೆ ಕೆಎಸ್‌ಆರ್‌ಟಿಸಿಗೆ ಈ ಜಾಗವನ್ನು ನೀಡಿದರೆ ಖಾಸಗಿ ಬಸ್‌ಗಳಿಗೆ ಇಲ್ಲಿ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ ಸುಂಟಿಕೊಪ್ಪ ಹೋಬಳಿಯ ಸರ್ವಾಂಗೀಣ ಅಭಿವೃದ್ಧಿಗೆ ಶಾಸಕರು ಕಟ್ಟಿಬದ್ಧರಾಗಿದ್ದು, ಆನೇಕ ಗ್ರಾಮ ಪಂಚಾಯಿತಿಗಳ ದಶಕಗಳ ಸಮಸ್ಯೆಯನ್ನು ಪರಿಹರಿಸುತ್ತಾ ಬಂದಿದ್ದಾರೆ. ಅದೇ ದಶಕಗಳ ಬೇಡಿಕೆಯಾಗಿದ ಮೇಲ್ಛಾವಣಿ ನಿರ್ಮಾಣದ ಕನಸ್ಸು ನನಸಾಗುವ ದಿನಗಳು ನಮ್ಮ ಮುಂದೆ ಇರುವುದು ಸಂತಸದ ವಿಚಾರವಾಗಿದೆ ಎಂದು ಹೇಳಿದರು.

ವಾಹನ ಚಾಲಕರ ಸಂಘ ಕೆ.ವಿ.ಕಿಟ್ಟಣ್ಣ ರೈ ಅಧ್ಯಕ್ಷತೆ ವಹಿಸಿದ್ದರು. ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಯು.ರಫೀಕ್‌ಖಾನ್ ಸುಂಟಿಕೊಪ್ಪ ಸಮಸ್ಯೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಆಟೋಚಾಲಕರ ಅಧ್ಯಕ್ಷ ಶರೀಫ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಾದ ಕೆ.ಇ.ಕರೀಂ, ಶಿವಮ್ಮ ಮಹೇಶ್, ಪಂಚಾಯಿತಿ ಅಭಿವೃದ್ಧಿ ವಿ.ಜಿ.ಲೋಕೇಶ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ರಜಾಕ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರಮಣಿ, ಕಾಂಗ್ರೆಸ್ ಮುಖಂಡ ಯಂಕನ ಶ್ರೀರಾಮ್, ಕಾನ್‌ಬೈಲ್ ಕಾಂಗ್ರೆಸ್ ಅಧ್ಯಕ್ಷ ಆದಂ ಹಾಗೂ ಪಂಚಾಯಿತಿ ಪೌರಕಾರ್ಮಿಕರು ಸೇರಿದಂತೆ ವಾಹನಚಾಲರು ಸಾರ್ವಜನಿಕರು ಇದ್ದರು.